ಐಐಟಿ ಸ್ಥಾಪನೆಗಾಗಿ ಜುಲೈ 21ರಂದು ರಾಯಚೂರು ಬಂದ್
ರಾಯಚೂರು, ಜುಲೈ 14 : ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಹೋರಾಟ ಆರಂಭಿಸಿರುವ ಐಐಟಿ ಹೋರಾಟ ಸಮಿತಿ ರಾಯಚೂರು ಬಂದ್ ನಡೆಸಲು ತೀರ್ಮಾನ ಕೈಗೊಂಡಿದೆ. ಜುಲೈ 20ರ ನಂತರ ಬಂದ್ ನಡೆಸಲಾಗುತ್ತದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ್ ಕಳಸ ಹೇಳಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ರಾಯಚೂರಿನಲ್ಲಿ ಸ್ಥಾಪನೆ ಮಾಡುವಂತೆ ಈಗಾಗಲೇ ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ರಾಷ್ಟ್ರಪತಿಯಿಂದ ಮುಖ್ಯಮಂತ್ರಿ ತನಕ ಎಲ್ಲರಿಗೂ ಮನವಿ ಪತ್ರ ನೀಡಿದ್ದೇವೆ. ಆದರೆ, ಇದುವರೆಗೂ ಈ ಕುರಿತು ನಿರ್ಧಾರ ಕೈಗೊಂಡಿಲ್ಲ ಎಂದು ಬಸವರಾಜ್ ಆರೋಪಿಸಿದ್ದಾರೆ. [ಐಐಟಿ : 3 ಜಿಲ್ಲೆಗಳತ್ತ ಬೊಟ್ಟು ತೋರಿಸಿದ ಸಿದ್ದರಾಮಯ್ಯ]

ಐಐಟಿ ಸ್ಥಾಪನೆಗೆ ಒತ್ತಾಯಪಡಿಸಲು ಜಿಲ್ಲೆಯ ಜನರನ್ನು ಒಂದುಗೂಡಿಸಬೇಕಾಗಿದೆ. ಅದಕ್ಕಾಗಿ ಬಂದ್ ಕರೆ ನೀಡುತ್ತಿದ್ದೇವೆ. ಜುಲೈ 20ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಬಂದ್ ನಡೆಸುತ್ತೇವೆ ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. [ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೆ ಆದ್ಯತೆ]
ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡುವಂತೆ ಕೇಳುವುದು ನಮ್ಮ ಹಕ್ಕು. ರಾಜ್ಯ ಸರ್ಕಾರ ಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ವಾಪಸ್ ಪಡೆಯಬೇಕು. ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಕಳಿಸಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ. [ಐಐಟಿ ರಾಯಚೂರಿಗೆ ಕೊಡಿ : ಖರ್ಗೆ]
ಸರ್ಕಾರ ಐಐಟಿ ಸ್ಥಾಪನೆ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಜುಲೈ 21ರಂದು ರಾಯಚೂರು ಬಂದ್ ನಡೆಸಲಾಗುತ್ತದೆ. ವಿದ್ಯಾರ್ಥಿಸಂಘಟನೆಗಳು, ವಿವಿಧ ಸಂಘಟನೆಗಳು, ವರ್ತಕರಿಗೆ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ಬಸವರಾಜ್ ಹೇಳಿದರು.
3 ಸ್ಥಳಗಳ ಹೆಸರು ಕೇಂದ್ರಕ್ಕೆ ಸಲ್ಲಿಕೆ : ಅಂದಹಾಗೆ ರಾಜ್ಯದಲ್ಲಿ ಐಐಟಿಯನ್ನು ಸ್ಥಾಪಿಸುವ ಸಂಬಂಧ ರಾಯಚೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಜಿಲ್ಲೆಗಳ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಎಲ್ಲಿ ಸ್ಥಾಪನೆ ಮಾಡಬೇಕು? ಎಂದು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ..
ಫೇಸ್ಬುಕ್ ನಲ್ಲೂ ಹೋರಾಟ : ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಫೇಸ್ ಬುಕ್ನಲ್ಲಿಯೂ ಹೋರಾಟ ನಡೆಯುತ್ತಿದೆ. 'ಐಐಟಿ ರಾಯಚೂರು ನಮ್ಮ ಹಕ್ಕು' ಎಂಬ ಪುಟವನ್ನು ತೆರೆಯಲಾಗಿದ್ದು 1,800 ಜನರು ಈ ಪುಟವನ್ನು ಲೈಕ್ ಮಾಡಿದ್ದಾರೆ. [IIT Raichur - Namma Hakku]












Click it and Unblock the Notifications