ಬಿಜೆಪಿಯ ರವಿಕಾಂತ್ ಪಾಟೀಲ್ ವಿರುದ್ಧ ರೌಡಿ ಶೀಟ್ ಓಪನ್?
ವಿಜಯಪುರ,ಏಪ್ರಿಲ್ 11: ಇಂಡಿಯ ಮಾಜಿ ಶಾಸಕ, ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿ ರವಿಕಾಂತ ಪಾಟೀಲ್ ಅವರ ವಿರುದ್ಧ ರೌಡಿ ಶೀಟರ್ ತೆರೆಯುವಂತೆ ಐಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.
2017ರಲ್ಲಿ ರವಿಕಾಂತ್ ಪಾಟೀಲ್ ವಿರುದ್ಧ ಕೊಲೆ ಯತ್ನ ಆರೋಪದಡಿ ದೂರು ದಾಖಲಾಗಿತ್ತು, ಹಾಗಾಗಿ ಅವರ ವಿರುದ್ಧ 48 ಗಂಟೆಗಳ ಒಳಗಾಗಿ ರೌಡಿ ಶೀಟರ್ ತೆರೆಯುವಂತೆ ಅಲೋಕ್ ಕುಮಾರ್ ಅವರು ಎಸ್ಪಿ ಮತ್ತು ಡಿವೈಎಸ್ಪಿ ಅವರುಗಳಿಗೆ ಸೂಚನೆ ನೀಡಿದ್ದಾರೆ.

ಮರಳು ಗಣಿಗಾರಿಕೆ ಸಂಬಂಧ ರವಿಕಾಂತ ಪಾಟೀಲ್ ಹಾಗೂ ಅವರ ಸಹಚರರು ವ್ಯಕ್ತಯೊಬ್ಬನ ಮೇಲೆ ಅಮಾನುಶವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿತ್ತು.
ರವಿಕಾಂತ ಪಾಟೀಲ ಅವರು ಪಕ್ಷೇತರವಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಈ ಬಾರಿ ಅವರು ಇಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿ ಆಗಿದ್ದಾರೆ.
ಯಡಿಯೂರಪ್ಪ ಅವರ ನಿಕಟವರ್ತಿಯಾಗಿರುವ ರವಿಕಾಂತ ಪಾಟೀಲ್ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಖಾಯಂ ಎನ್ನಲಾಗುತ್ತಿದೆ ಆದರೆ ಈ ಸಮಯದಲ್ಲಿ ಅವರ ವಿರುದ್ಧ ರೌಡಿ ಶೀಟರ್ ತೆರೆಯುತ್ತಿರುವುದು ಅವರ ಚುನಾವಣೆ ಉಮೇದುವಾರಿಕೆ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಕುರಿತು ಹೇಳಿಕೆ ನೀಡಿರುವ, ಮಾಜಿ ಶಾಸಕ ರವಿಕಾಂತ ಪಾಟೀಲ್ ಅವರು 'ರೌಡಿ ಶೀಟ್ ತೆರೆಯಲು ಹೇಳಿರುವುದು ರಾಜಕೀಯ ಪ್ರೇರಿತ' ಎಂದರು. ಈ ಬಾರಿ ಇಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನನ್ನನ್ನು ನೇರವಾಗಿ ಎದುರಿಸಲಾಗದೆ ಈ ರೀತಿ ಷಡ್ಯಂತ್ರ ರೂಪಿಸಲಾಗಿದೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications