ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ: ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ, ಜನವರಿ 3: ನಾನು ಪ್ರಹ್ಲಾದ್ ಜೋಷಿ, ಬೊಮ್ಮಾಯಿ ಅವರಂತೆ ಸುಳ್ಳು ಹೇಳುತ್ತಿಲ್ಲ. ನಾವು ರೈತರು, ಯುವಕರ ಪರವಾಗಿ ಹೋರಾಟ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಜಲ-ಜನ ಆಂದೋಲನದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಚ್ಛೇ ದಿನದ ಬಗ್ಗೆ ಮಾತನಾಡುತ್ತಾರೆ. ಯಾರಿಗೆ ಬಂತು ಅಚ್ಛೇ ದಿನ? ಯಾರಿಗೂ ಬರಲಿಲ್ಲ. ಈ ಸರ್ಕಾರದ ಅಂತ್ಯದ ದಿನಗಳು ಬಂದಿದೆ. ಈ ರಾಜ್ಯಕ್ಕೆ ಶಕ್ತಿ ತುಂಬಲು ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನರಿಗೆ ಬ್ರಹ್ಮಾಂಡ ಭ್ರಷ್ಟಾಚಾರ ಮುಕ್ತ ಸರ್ಕಾರ ಬೇಕು. ಅದಕ್ಕೆ ನೀವು ಶಕ್ತಿ ತುಂಬಬೇಕು ಎಂದು ಹೇಳಿದರು.
ಇದು ಹೋರಾಟ ಪ್ರಾರಂಭದ ಗಳಿಗೆ. ಹೆಚ್.ಕೆ. ಪಾಟೀಲ್ ಅವರು ಮಂತ್ರಿಯಾಗಿದ್ದಾಗ ಮಹದಾಯಿ ಯೋಜನೆಗೆ ಸ್ವರೂಪ ಕೊಟ್ಟಿದ್ದರು. ಇದು ಪೂರ್ಣಗೊಳ್ಳಬೇಕು. ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಅದರ ಧ್ಯೇಯ ಜನರಿಗೆ ಕುಡಿಯುವ ನೀರು, ನೀರಾವರಿ, ಯುವಕರಿಗೆ ಉದ್ಯೋಗ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ, ಸಾಮಾಜಿಕ ನ್ಯಾಯ, ಉತ್ತಮ ಆಡಳಿತ ನೀಡುವುದಾಗಿದೆ.

ನಾನು ಬಿಜೆಪಿ ಸ್ನೇಹಿತರಿಗೆ ನಿಮ್ಮ ಅಧಿಕಾರ ಅವಧಿಯಲ್ಲಿ ನಿಮ್ಮ ಸಾಧನೆ ಏನು ಎಂದು ಕೇಳಬಯಸುತ್ತೇನೆ. ಇವರ ಸಾಧನೆ ಕೇವಲ ಹಸಿ ಸುಳ್ಳು. ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಂತಹ ಹಸಿ ಸುಳ್ಳು ಹೇಳುತ್ತಾರೆ. ಮುಖ್ಯಮಂತ್ರಿಗಳು ಈ ಭಾಗದವರು. ಈ ಭಾಗದ ಜಗದೀಶ್ ಶೆಟ್ಟರ್ ಅವರು ಮಾಜಿ ಸಿಎಂ, ಈ ಭಾಗದವರೇ ಕೇಂದ್ರ ಮಂತ್ರಿಯಾಗಿದ್ದಾರೆ. ಆದರೂ ಈ ಭಾಗಕ್ಕೆ ಯಾವುದಾದರೂ ಒಂದು ಕಾರ್ಯಕ್ರಮ ನೀಡೀದ್ದಾರಾ? ನಾವು ಕೇವಲ ಡಬಲ್ ಇಂಜಿನ ವಿರುದ್ಧವಲ್ಲ, ಒಟ್ಟು ನಾಲ್ಕು ಇಂಜಿನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಸರ್ಕಾರಗಳಿದ್ದರೂ, ರಾಜ್ಯದಿಂದ 25 ಸಂಸದರಿದ್ದರೂ ಈ ರಾಜ್ಯದ ಕುಡಿಯುವ ನೀರು, ರೈತರ ಸಮಸ್ಯೆಗೆ ಪರಿಹಾರ ನೀಡಲು ಆಗುತ್ತಿಲ್ಲ. ಹಾಗಾದರೆ ನಿಮಗೆ ಅಧಿಕಾರ ಯಾಕೆ ಬೇಕು? ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ಜೇಬಿಂದ ಚೀಟಿ ತೆಗೆದು ತೋರಿಸಿದ್ದು ಆಯಿತು, ಶೆಟ್ಟರ್ ಅವರು ಅಧಿಕಾರ ಮಾಡಿ ಆಯಿತು, ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈ ಕಳಸಾ ಬಂಡೂರಿ ವಿಚಾರದಲ್ಲಿ ಬರೀ ಶೋ ಮಾಡಿದ್ದೀರಿ. ನಮ್ಮ ಚಿತ್ರರಂಗದ ಎಲ್ಲ ಕಲಾವಿದರು ಇಲ್ಲಿಗೆ ಬಂದು ಹೋರಾಟ ಮಾಡಿದ್ದರು. ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದ್ದವು. ನಿಮ್ಮ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಈ ಹೋರಾಟ ಮಾಡಿದವರು ಯಾಕೆ ಬರಲಿಲ್ಲ? ಎಂದು ಪ್ರಶ್ನಿಸಿದರು.
ನಿಮ್ಮ ಹಸಿ ಸುಳ್ಳು ಎಲ್ಲರಿಗೂ ಅರಿವಾಗುತ್ತಿದೆ. ನಿಮ್ಮ ಡಿಪಿಆರ್ ಯಾರಿಗೆ ಬೇಕು? ಈ ಭಾಗದ ಜನರಿಗೆ ಕುಡಿಯಲು ನೀರು ಸಿಗಬೇಕು, ರೈತರ ಬದುಕು ಹಸನಾಗಬೇಕು. ನಮಗೆ ಬಸವಣ್ಣನವರು, ಶಿಶುನಾಳ ಶರೀಫರು, ಕನಕದಾಸರು, ಕುವೆಂಪು ಅವರ ಕರ್ನಾಟಕ ಬೇಕು. ಕಾಂಗ್ರೆಸ್ ಪಕ್ಷ ಸದಾ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದ ಜನರಿಗೆ ಕೊಟ್ಟ ಮಾತಿನಿಂತೆ ಕೆಲಸ ಮಾಡಿದ್ದೇವೆ, ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ. ಮುಂದೆ ಬಿಜೆಪಿ ಸರಕಾರ ಬರಲು ಸಾಧ್ಯವಿಲ್ಲ. ನೀವು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರಿ. ನಿಮ್ಮ ಸರ್ಕಾರದ ಅವಧಿ ಇನ್ನು ಕೇವಲ 60 ದಿನ ಮಾತ್ರ. ಅಲ್ಲಮಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆಯನ್ನು ಏರಲಾಗದೆ ಮತ್ತೊಂದು ಕುದುರೆ ಏರಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ನಿಮ್ಮ ಕೈಯಲ್ಲಿ ಮಾಡಲು ಸಾಧ್ಯವಾದಾಗ ಈಗ ನೀವು ಏನು ಮಾಡುತ್ತೀರಿ ಎಂದರು.

ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ, ನಾವೆಲ್ಲರೂ ಕೂತು ಚರ್ಚೆ ಮಾಡಿ, ಮುಂಬರುವ ಸರ್ಕಾರದ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ನೀಡಿ ಪೂರ್ಣಗೊಳಿಸುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ. ಈ ಭಾಗದಲ್ಲಿ ಬಿಜೆಪಿ ಸರ್ಕಾರ ಯಾವುದೇ ರೀತಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕ್ಕೆ ಸಹಿ ಹಾಕಿದ್ದೇವೆ ಎಂದು ಹೇಳಿದರಲ್ಲಾ, ಕಳೆದ ಮೂರು ವರ್ಷಗಳಲ್ಲಿ ಒಂದೂ ಕಾರ್ಖಾನೆ ಬರಲಿಲ್ಲ, ಉದ್ಯೋಗ ಸೃಷ್ಟಿ ಆಗಲಿಲ್ಲ ಯಾಕೆ? ಕಾರಣ ಕೋಮು ಗಲಭೆ. ನೀವು ಭಾವನೆ ಮೇಲೆ ಮನೆ ಕಟ್ಟುತ್ತೀರಿ. ಕಾಂಗ್ರೆಸ್ ಬದುಕು, ಉದ್ಯೋಗದ ಮೇಲೆ ಮನೆ ಕಟ್ಟುತ್ತದೆ. ನೀವು ಚರ್ಚ್ ಗಳಿಗೆ ನುಗ್ಗಿ ಹನುಮಾನ್ ಚಾಲೀಸ ಪಠಿಸುವಂತೆ ಮಾಡಿಸುತ್ತೀರಿ. ಅಲ್ಪಸಂಖ್ಯಾತ ಯುವಕರ ಮೇಲೆ ಸುಳ್ಳು ಕೇಸ್ ಹಾಕಿಸುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ಯಾರು ಬಂಡವಾಳ ಹೂಡಿಕೆ ಮಾಡುತ್ತಾರೆ? ಇದಕ್ಕೆ ಬೊಮ್ಮಾಯಿ, ಜೋಷಿ ಹಾಗೂ ಶೆಟ್ಟರ್ ಅವರು ಉತ್ತರಿಸಬೇಕು. ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಶಾಂತಿ ಸ್ಥಾಪಿಸಿದರೆ ಬಂಡವಾಳ ಹೂಡಿಕೆಯಾಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ.
ಭಾವನೆಯಿಂದ ಹೊಟ್ಟೆ ತುಂಬುವುದಿಲ್ಲ, ಬದುಕು ಕಟ್ಟಿಕೊಂಡರೆ ಮಾತ್ರ ಹೊಟ್ಟೆ ತುಂಬುತ್ತದೆ
ಭಾವನೆಯಿಂದ ಹೊಟ್ಟೆ ತುಂಬುವುದಿಲ್ಲ, ಬದುಕು ಕಟ್ಟಿಕೊಂಡರೆ ಮಾತ್ರ ಹೊಟ್ಟೆ ತುಂಬುತ್ತದೆ. ಈ ಚುನಾವಣೆಗೂ ಮುನ್ನ ರೈತರ ಆದಾಯ ಡಬಲ್ ಮಾಡುವುದಾಗಿ ಪ್ರಧಾನಿ ಹೇಳಿದರು. ಯಾರ ಆದಾಯ ಡಬಲ್ ಆಗಿದೆ? ಕೋವಿಡ್ ಸಂದರ್ಭದಲ್ಲಿ ಈ ಭಾಗದ ರೈತರ ಜಮೀನಿಗೆ ಹೋಗಿ ಪರಿಸ್ಥಿತಿ ನೋಡಿದೆವು. ಕಾಂಗ್ರೆಸ್ ಪಕ್ಷ ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಿ ಅವರಿಗೆ ಬೆಂಬಲ ಬೆಲೆ ನೀಡಿತು. ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರು ಮತ್ತೆ ತಮ್ಮ ಊರಿಗೆ ಹೋಗಲು ಮುಂದಾದಾಗ ಸರ್ಕಾರ ಮೂರು ಪಟ್ಟು ಟಿಕೆಟ್ ದರ ಹೆಚ್ಚಿಸಿ ಸುಲಿಗೆ ಮಾಡಲು ಮುಂದಾಗಿತ್ತು. ಆಗ ನಾನು ಪಕ್ಷದಿಂದ 1 ಕೋಟಿ ರೂ. ಚೆಕ್ ನೀಡಲು ಮುಂದಾದೆ. ಆಗ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆವು. ನಂತರ ಸರ್ಕಾರ ಒಂದು ವಾರ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿತು.
ಈ ಹಿಂದೆ ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸಿ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಸೂಚನೆ ನೀಡಿದ್ದೀರಿ. ನಿಮ್ಮ ಜತೆ ನಾವು ಇರುತ್ತೇವೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ಒಟ್ಟಿಗೆ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಂತರ ಎರಡು ತಂಡವಾಗಿ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ನಾವು ಕೊಡುವ ಮಾತು ಉಳಿಸಿಕೊಳ್ಳುತ್ತೇವೆ. ಬಿಜೆಪಿಯವರು 600 ಭರವಸೆ ನೀಡಿ 550 ಭರವಸೆ ಈಡೇರಿಸಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 169 ಭರವಸೆ ನೀಡಿ 165 ಕಾರ್ಯಕ್ರಮ ನೀಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ಇದನ್ನು ಗಮನದಲ್ಲಿಟ್ಟುಕೊಂಡು ನೀವು ನಮ್ಮ ಜತೆ ನಿಲ್ಲಬೇಕು ಎಂದರು.












Click it and Unblock the Notifications