ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅನುಮಾನಾಸ್ಪದ ಸಾವು
ಬೆಂಗಳೂರು, ಮಾ. 16: ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಿಕೆ ರವಿ ಸೋಮವಾರ ಸಂಜೆ ಅನುಮಾನಾಸ್ಪದ ಸಾವಿಗೀಡಾಗಿದ್ದಾರೆ. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ಮರಳು ಗಣಿಗಾರಿಕೆ ಮತ್ತು ಕೆರೆ ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದ ರವಿ ಸಾವಿಗೀಡಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಕೋರಮಂಗಲದ ಸೆಂಟ್ ಜಾನ್ ಹುಡ್ ಅಪಾರ್ಟ್ ಮೆಂಟ್ ನಲ್ಲಿ ರವಿ ಶವ ಪತ್ತೆಯಾಗಿದೆ.ಅಪಾರ್ಟ್ ಮೆಂಟ್ ನ 9ನೇ ಫ್ಲಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಶವ ಪತ್ತೆಯಾಗಿದೆ. ಕೋಲಾರದಿಂದ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆಯಾದ ನಂತರ ದೊಡ್ಡ ದೊಡ್ಡ ಬಿಲ್ಡರ್ ಗಳ ಅಕ್ರಮವನ್ನು ಬಯಲಿಗೆಳೆದಿದ್ದರು. ಅವರಿಗೆ ಜೀವ ಬೆದರಿಕೆ ಇತ್ತು ಎಂದು ಹೇಳಲಾಗಿದೆ.[ಮೈಸೂರು : ರಶ್ಮಿ ಮಹೇಶ್ ಮೇಲಿನ ಹಲ್ಲೆ ಪೂರ್ವನಿಯೋಜಿತ]

ಕೋಲಾರದಿಂದ ರವಿಯವರನ್ನು ಎತ್ತಂಗಡಿ ಮಾಡಿದಾಗ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಕೋಲಾರದ ರೈತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ಜನಾನುರಾಗಿ ಡಿಸಿಯಾಗಿದ್ದರು.
2009ರ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದ ರವಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ಶ್ರಮಿಸಿದ್ದರು. ಕೋಲಾರದಲ್ಲಿ ರಾಜ ಕಾಲುವೆ ಒತ್ತುವರಿ ತೆರವು, ಕೆರೆ ಹೂಳೆತ್ತುವ ಕೆಲಸ ಮಾಡಿದ್ದರು.
ಅನುಮಾನಕ್ಕೆ ಕಾರಣವಾದ ಮೂವರ ಪ್ರವೇಶ
ರವಿ ತಂಗಿದ್ದ ಅಪಾರ್ಟ್ ಮೆಂಟ್ ಗೆ ಸೋಮವಾರ ಸಂಜೆ 5.30 ಸುಮಾರಿಗೆ ಮೂವರು ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದಾದ ನಂತರ ರವಿ ಸಾವನ್ನಪ್ಪಿದ ಸುದ್ದಿ ತಿಳಿದುಬಂದುದೆ. ನಾವು ತೆರಿಗೆ ಇಲಾಖೆ ಅಧಿಕಾರಿಗಳು ಎಂದು ಹೇಳಿಕೊಂಡು ಮೂವರು ಆಗಮಿಸಿದ್ದರು. ಸಿಸಿ ಟಿವಿ ಕ್ಯಾಮಾರಾ ಮೂಲಕ ಅಪರಿಚಿತರ ಗುರುತು ಪತ್ತೆ ಹಚ್ಚಲಾಗುತ್ತಿದೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ನೇಣು ಬಿಗಿದುಕೊಂಡ ಸ್ಥಳದ ಪಕ್ಕದಲ್ಲಿಯೇ ಸ್ಟೂಲ್ ವೊಂದು ಪತ್ತೆಯಾಗಿದೆ.












Click it and Unblock the Notifications