ಗಾಂಧಿ ಪ್ರತಿಮೆ ಎದುರು ಕಣ್ಣೀರಿಟ್ಟ ಡಿಕೆ ರವಿ ತಾಯಿ ಗೌರಮ್ಮ
ಬೆಂಗಳೂರು, ಮಾರ್ಚ್, 17: ಆ ತಾಯಿಯ ಕಣ್ಣಲ್ಲಿ ನೋವಿತ್ತು, ಸ್ಪಂದಿಸದ ವ್ಯವಸ್ಥೆ ವಿರುದ್ಧ ಆಕ್ರೋಶವಿತ್ತು, ದೂರವಾದ ಸಂಬಂಧಿಕರ ಬಗ್ಗೆ ಸಿಟ್ಟಿತ್ತು. ಒಬ್ಬಂಟಿಯಾಗಿಯೇ ಹೋರಾಟ ಮಾಡುತ್ತೇನೆ ಎಂಬ ಛಲವಿತ್ತು...
ಹೌದು... ದಕ್ಷ ಅಧಿಕಾರಿ ಡಿಕೆ ರವಿ ಸಾವನ್ನಪ್ಪಿ ಒಂದು ವರ್ಷ, ಆದರೆ ಕುಟುಂಬಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ. ನೋವುನಲ್ಲೇ ನೊಂದ ರವಿ ತಾಯಿ ಗೌರಮ್ಮ ಬೆಂಗಳೂರಿನ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಿದ್ದಾರೆ.[ಡಿಕೆ ರವಿ ಪ್ರಕರಣದ ಟೈಮ್ ಲೈನ್]
ಸಾವು ಸಂಭವಿಸಿ ಒಂದು ವರ್ಷ ಕಳೆದರೂ ಸಿಬಿಐ ವರದಿ ಬಹಿರಂಗವಾಗಿಲ್ಲ. ಮಗನ ಸಾವಿನ ನಿಜ ಕತೆ ನಮಗೆ ತಿಳಿಯಬೇಕು, ಅದು ಇಡೀ ರಾಜ್ಯಕ್ಕೆ ಗೊತ್ತಾಗಬೇಕು. ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ವರದಿ ಬಹಿರಂಗ ಮಾಡದಿದ್ದರೆ ಡಿಕೆ ರವಿ ಅವರ ಶವವನ್ನು ಹೊರತೆಗೆದು ಪ್ರತಿಭಟನೆ ನಡೆಸಲಾಗುವುದು ಎಂದು ಗೌರಮ್ಮ ಎಚ್ಚರಿಕೆ ನೀಡಿದರು.[ಡಿಕೆ ರವಿ ನಿಗೂಢ ಸಾವು : ಸಿಬಿಐಗೆ ಪತ್ರ ಬರೆಯಲಿದೆ ಸರ್ಕಾರ]
ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕೂಗಿಗೆ ಸ್ಪಂದಿಸಬೇಕು. ದೂರವಾದ ಸಂಬಂಧಿಕರ ಬಗ್ಗೆ ಏನೂ ಹೇಳಲಾರೆ ಎಂದು ಹೇಳುತ್ತ ಗೌರಮ್ಮ ಬಿಕ್ಕಿ ಬಿಕ್ಕಿ ಅತ್ತರು. ಒಕ್ಕಲಿಗರ ಸಂಘ, ಜಯ ಕರ್ನಾಟಕ ಸಂಘಟನೆ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಗೌರಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ಇನ್ನೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿ
ಮಗ ಡಿ.ಕೆ. ರವಿಯ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ. ಇನ್ನೊಮ್ಮೆ ಮರಣೋತ್ತರ ಪರೀಕ್ಷೆ ಮಾಡಬೇಕು. ಆಗ ಸತ್ಯಾಂಶ ಹೊರಬರಲು ಸಾಧ್ಯವಿದೆ ಎಂದು ಗೌರಮ್ಮ ಆಗ್ರಹಿಸಿದರು.

ಸೊಸೆ ಕುಸುಮಾ ಬಗ್ಗೆ ಗೊತ್ತಿಲ್ಲ
ನನ್ನ ಸೊಸೆ ಕುಸುಮಾ ಎಲ್ಲಿದ್ದಾಳೆ ಎಂಬುದು ಗೊತ್ತಿಲ್ಲ. ಮಗನ ಸಾವಿನ ನಂತರ ಆಕೆ ದೂರವಾಗಿದ್ದಾಳೆ. ಸಂಬಂಧಿಕರೂ ದೂರವಾಗಿದ್ದಾರೆ ಎಂದು ಗೌರಮ್ಮ ಹೇಳಿದರು.

ನ್ಯಾಯಕ್ಕಾಗಿ ಹೋರಾಟ
ನಮಗೆ ಬೇಕಿರುವುದು ನ್ಯಾಯವೇ ಹೊರತು ಪರಿಹಾರವಲ್ಲ. ಹಣದಿಂದ ನನ್ನ ಮಗನ ಸಾವಿಗೆ ಅಂತ್ಯ ಸಿಗುವುದಿಲ್ಲ. ರಾಜ್ಯ ಸರ್ಕಾರ ಯಾವಾಗ ನಮ್ಮಕೂಗನ್ನು ಕೇಳಿಸಿಕೊಳ್ಳುತ್ತದೆ ಎಂದು ಪ್ರಶ್ನೆ ಮಾಡಿದರು.

ಮಳೆ ಲೆಕ್ಕಿಸದೆ ಧರಣಿ
ಬುಧವಾರ ರಾತ್ರಿ ಸುರಿದ ಮಳೆಯನ್ನು ಲೆಕ್ಕಿಸದೆ ಹಿರಿಯ ಜೀವ ಪ್ರತಿಭಟನೆ ನಡೆಸುತ್ತಿದೆ. ಡಿಕೆ ರವಿ ತಂದೆ, ಅಣ್ಣ ರಮೇಶ್ ಸೇರಿದಂತೆ ರವಿ ಸಂಬಂಧಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಕೋಲಾರದ ಅಭಿಮಾನಿಗಳು
ಕೋಲಾರದಿಂದ ಡಿಕೆ ರವಿ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಕೆ ರವಿಯವರ ಪುಣ್ಯತಿಥಿಯನ್ನು ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಮಾಡಿದ್ದೇವೆ. ಪ್ರತಿಯೊಂದು ಮನೆಯಲ್ಲೂ ಅವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದೇವೆ ಎಂದು ಕೋಲಾರದಿಂದ ಆಗಮಿಸಿದ್ದ ನಾಗರಾಜು ಹೇಳಿದರು.
ಪ್ರತಿಭಟನೆಯ ನೇರ ಸುದ್ದಿ
ಗೌರಮ್ಮ ಹಮ್ಮಿಕೊಂಡಿದ್ದ ಧರಣಿಯ ಕ್ಷಣ ಕ್ಷಣದ ಮಾಹಿತಿ ಕೇಳಿಕೊಂಡು ಬನ್ನಿ












Click it and Unblock the Notifications