ರಾಜಕಾರಣಕ್ಕೆ ಬರುವ ಬಗ್ಗೆ ಶಿವಣ್ಣ ಹೇಳಿದ್ದೇನು?
ರಾಮನಗರ, ಅಕ್ಟೋಬರ್ 11 : 'ರಾಜಕಾರಣಕ್ಕೆ ಬರುವ ಬಗ್ಗೆ ಚಿಂತನೆ ನಡೆಸಿಲ್ಲ' ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಬುಧವಾರ ಕನಕಪುರ ರೂರಲ್ ಕಾಲೇಜಿನಲ್ಲಿ ಅಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿವರಾಜ್ ಕುಮಾರ್ ಉದ್ಘಾಟಿಸಿದರು. 'ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಶ್ರೀನಿವಾಸ್, ಮಳಗಾಳು ಕಾಂತರಾಜು ಸೇರಿದಂತೆ ಕನಕಪುರದಲ್ಲಿ ಅನೇಕ ಸ್ನೇಹಿತರಿದ್ದಾರೆ' ಎಂದರು.

ದಿ ವಿಲನ್ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, 'ತಮ್ಮದೇ ಪಾತ್ರದ ಶೇ 50ರಷ್ಟು ಚಿತ್ರೀಕರಣ ಬಾಕಿ ಇದ್ದು, ಆದಷ್ಟು ಶೀಘ್ರವಾಗಿ ಚಿತ್ರೀಕರಣ ಪೂರ್ಣಗೊಳಿಸುವುದಾಗಿ' ಹೇಳಿದರು. 'ಈ ಹಿಂದೆ 1992 ರಲ್ಲಿ ಕಾರ್ಯಕ್ರಮ ನಿಮಿತ್ತ ಕನಕಪುರಕ್ಕೆ ಬಂದಿದ್ದೆ. ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಿದ್ದೇನೆ' ಎಂದು ತಿಳಿಸಿದರು.
ಕಾಲೇಜಿನ ಕಾರ್ಯಕ್ರದಲ್ಲಿ ಮುತ್ತಣ್ಣ ಪೀಪಿ ಊದುವ, ಮುತ್ತಣ್ಣ ಡೋಲು ಬಡಿಯುವ ಹಾಡು ಹಾಡುವುದರ ಜೊತೆ ಸಿಂಪಲ್ ಸ್ಟೆಪ್ ಹಾಕಿದರು. ರಾಜ ಶಿವರಾಜ ಯುವರಾಜ ಹಾಡಿಗೆ ಸಕತ್ ಸ್ಟೆಪ್ ಹಾಕಿದ ಶಿವರಾಜ್ ಕುಮಾರ್ ಅವರು ಕಾಲೇಜಿನ ವಿದ್ಯಾರ್ಥಿಗಳನ್ನು ರಂಜಿಸಿದರು.
ಕನಕಪುರ ಕ್ಷೇತ್ರದ ಶಾಸಕ, ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರು ಕನಕಪುರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶಿವರಾಜ್ ಕುಮಾರ್ ಶ್ಲಾಘಿಸಿದರು.












Click it and Unblock the Notifications