ಮಂಡ್ಯ ಟಿಕೆಟ್ ಫೈಟ್: 100% ಅಲ್ಲ 500% ಬಿಜೆಪಿ ಟಿಕೆಟ್ ನನಗೆ ಎಂದ ಸುಮಲತಾ
ಮಂಡ್ಯ, ಮಾರ್ಚ್ 06: ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ರಂಗು ಜೋರಾಗಿದೆ. ಮಂಡ್ಯ ರಾಜಕಾರಣ ಅಂದರೆ ಇಂಡಿಯಾನೇ ತಿರುಗಿ ನೋಡುತ್ತೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸುಮಲತಾ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಜಿದ್ದಾಜಿದ್ದಿ ಏರ್ಪಡು ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯಕವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್, ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಕಮಲ-ದಳ ನಾಯಕರು ಮೈತ್ರಿಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಇದೀಗ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಇತ್ತ ಕ್ಷೇತ್ರ ಹಂಚಿಕೆ ಕುರಿತು ಹಲವು ಸುತ್ತಿನ ಮಾತುಕತೆ ನಡೆದಿದ್ದು, ಮಂಡ್ಯ ಕ್ಷೇತ್ರಕ್ಕಾಗಿ ಇಬ್ಬರು ನಾಯಕರು ಪಟ್ಟು ಹಿಡಿದ್ದಿದ್ದಾರೆ.

ಇನ್ನೂ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ವಿಧಾನಸಭಾ ಚುನಾವಣೆಯ ಸಂಕರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದು, ಇದೀಗ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಟಿಕೆಟ್ ಸಿಗುವ ವಿಶ್ವಾಸವನ್ನ ವ್ಯಕ್ತಪಸಿದ್ದಾರೆ.
ಈ ಕುರಿತು ಮಂಡ್ಯ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ, ಅಭ್ಯರ್ಥಿಗಳ ಆಯ್ಕೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ, ಆದರೆ ತನಗೆ ಟಿಕೆಟ್ ಸಿಗುವ ಬಗ್ಗೆ ಶೇಕಡಾ 100 ಅಲ್ಲ 500 ರಷ್ಟು ವಿಶ್ವಾಸವಿದೆ ಎಂದು ಹಾಲಿ ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ. ಅಲ್ಲದೇ ನಾನು ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪ್ರೇರಣೆ. ಅವರು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಅಭಿವೃದ್ಧಿಯ ಹರಿಕಾರ, ಅವರ ನೇತೃತ್ವದಲ್ಲಿ ಭಾರತ ಮಾಡಿರುವ ಸಾಧನೆ ಎಲ್ಲರ ಕಣ್ಣ ಮುಂದಿದೆ ಎಂದು ಹೇಳಿದರು.
ಸುಮಲತಾ ಮಂಡ್ಯಕ್ಕೆ ಸ್ಮಾರ್ಟ್ ತರಲಿಲ್ಲ ಎಂಬ ಡಾ ರವೀಂದ್ರ ಆರೋಪದ ವಿಚಾರವಾಗಿ ಮಾತನಾಡಿ, ರವೀಂದ್ರ ಎಜುಕೇಟೆಡ್ ಇದಾರೆ ಈ ರೀತಿ ಮಾತನಾಡೋದು ಆಶ್ಚರ್ಯ ಅನಿಸುತ್ತದೆ, ನಾನು ಸ್ಮಾರ್ಟ್ ಸಿಟಿಗಾಗಿ ಪತ್ರ ಬರೆದಿದ್ದೆ. ಸ್ಮಾರ್ಟ್ ಸಿಟಿ ಮಾಡಲು ಕೆಲವು ಕ್ರೈಟೀರ್ಯ ಇರತ್ತದೆ. ಪಾಪುಲೇಷನ್ ವಿಚಾರದಲ್ಲಿ ಮಂಡ್ಯ ಕ್ರೈಟೀರ್ಯ ಮ್ಯಾಚ್ ಆಗ್ತಿಲ್ಲ. ನನ್ನ ಹಂತದಲ್ಲಿ ಆಗೋ ಕೆಲಸವನ್ನ ಇದು ಎಂದು ಹೇಳಿದರು.
ಸುಮಲತಾ ಬೆನ್ನಿಗೆ ಕಟ್ಟಿಕೊಂಡು ಹೋಡಾಡಲು ನಾನು ರಾಕ್ ಲೈನ್ ಅಲ್ಲಾ ಎಂಬ ಡಾ ರವೀಂದ್ರ ಹೇಳಿಕೆ ವಿಚಾರವಾಗಿ ಉತ್ತರಿಸಿ, ರವೀಂದ್ರ ಅವ್ರ ಚೀಪ್ ಹೇಳಿಕೆಗೆ ನಾನು ಉತ್ತರ ಕೊಡಲ್ಲ.ಲಿಮಿಟ್ ಅಲ್ಲಿ ಮಾತನಾಡಿದ್ರೆ ನಾನು ಮಾತನಾಡುತ್ತೇನೆ. ಒತ್ತಡದಲ್ಲಿ ಹಾಗೆ ಹಲವರ ಬಗ್ಗೆ ಮಾತನಾಡಿದ್ದಾರೆ ಅದ್ರಲ್ಲಿ ನಾನು ಒಂದು ಭಾಗ.ಅವರು ಆಸೆ ಪಟ್ಟಿದ್ದು ಆಗಿಲ್ಲ ಅಂತ ಆ ಒತ್ತಡದಲ್ಲಿ ಮಾತನಾಡ್ತಿದ್ದಾರೆ. ನೆನ್ನೆ ಮೊನ್ನೆ ವರೆಗೂ ಅವ್ರು ರಾಕ್ ಲೈನ್ ಹಿಂದೆ ಬಿದ್ದು ಒಂದು ಕ್ಯಾರೆಕ್ಟರ್ ಕೊಡಿ ಅಂತ ಕೇಳಿಕೊಂಡಿದ್ರು.ಇಂತ ಚೀಪ್ ವಿಚಾರಗಳಿಗೆ ಅವಕಾಶ ಇಲ್ಲಾ. ಯಾರಾದರೂ ನನ್ನ ಬಗ್ಗೆ ಹೇಳಿಕೆ ಕೊಟ್ರೆ ಅದನ್ನ ನನ್ನ ಬಳಿ ಕೇಳಬೇಡಿ, ಅಲ್ಲಿಗೆ ಅವರ ಯೋಗ್ಯತೆ ಏನು ಅಂತ ಅರ್ಥ ಮಾಡಿಕೊಂಡು ಸುಮ್ಮನಾಗಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ದುಡ್ಡಿರುವವರಿಗೆ ಮಣೆ ಹಾಕತ್ತೆ ಎಂಬ ಡಾ ರವೀಂದ್ರ ಆರೋಪದ ವಿಚಾರ ಮಾತನಾಡಿ, ಖಂಡಿತ ಡಾ ರವೀಂದ್ರ ಆರೋಪ ನಿಜಾ. ಕಾಂಗ್ರೆಸ್ ನಲ್ಲಿ ದುಡ್ಡು ಇರೋರಿಗೆ ಮಣೆ ಹಾಕ್ತಿರೋದು ನಿಮ್ ಕಣ್ಣ ಮುಂದೆನೇ ಇದೆ. ಈಗ ಮಂಡ್ಯದಲ್ಲಿ ಅದೇ ರೀತಿ ಆಗುತ್ತಿದೆ. ರಾಜಕೀಯ ಲಿಂಕ್ ಇಲ್ಲಾ, ರಾಜಕೀಯ ಅನುಭವವು ಕೂಡ ಇಲ್ಲಾ ಅಂತವ್ರಿಗೆ ಟಿಕೆಟ್ ಕೊಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಕೈ ಅಭ್ಯರ್ಥಿಯನ್ನ ಪರಿಚಯ ಮಾಡುತ್ತಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಕೈ ಅಭ್ಯರ್ಥಿ ಘೋಷಣೆ ಮಾಡಿದ್ದು ನಿಯಮಗಳ ಉಲ್ಲಂಘನೆ ಅಲ್ವಾ? ಮೇಲ್ನೊಟಕ್ಕೆ ಕಾಂಗ್ರೆಸ್ ದುಡ್ಡು ಇರೋರಿಗೆ ಮಣೆ ಹಾಕ್ತಿದೆ ಎಂದು ಸುಮಲತಾ ಆರೋಪಿಸಿದರು.












Click it and Unblock the Notifications