ಜೈಲು ಮಂತ್ರಿಯಾಗಿದ್ದೆ, ಜೈಲಿಗೆ ಹೋಗಲೂ ಸಿದ್ದ: ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 23: ಎರಡು ಬಗೆಯ ಕುಸ್ತಿಯಿದೆ, ಎರಡನ್ನೂ ನಾನು ಅರಿತಿದ್ದೇನೆ. ಬಂಧೀಖಾನೆ ಸಚಿವನಾಗಿದ್ದೆ, ಜೈಲಿಗೆ ಹೋಗಲೂ ನಾನು ಸಿದ್ದ, ಐ ಡೋಂಟ್ ಕೇರ್ ಎಂದು ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.
ಹಾಲೀ ಅಧಿವೇಶನದ ಆಕ್ರಮಣಕಾರಿ ಭಾಷಣ ಎಂದೇ ಉಲ್ಲೇಖಿಸಬಹುದಾದ ಡಿ ಕೆ ಶಿವಕುಮಾರ್ ಭಾಷಣದಲ್ಲಿ ಮುಂಬೈ ಹೊಟೇಲ್ ವಿಚಾರವೂ ಬಂತು, ಎಸ್ ಎಂ ಕೃಷ್ಣ, ಸಿದ್ದರಾಮಯ್ಯನವರ ಪ್ರಸ್ತಾವನೆಯೂ ಬಂತು.
ಒಂದು ದಿನದ ಹಿಂದೆಯೇ ಮುಂಬೈ ಹೋಟೆಲ್ ನಲ್ಲಿ ರೂಮ್ ರಿಸರ್ವ್ ಮಾಡಿದ್ದೆ. ಆದರೆ, ಹೋಟೆಲ್ ನವರು ನನ್ನ ರಿಸರ್ವೇಷನ್ ಅನ್ನು ಕ್ಯಾನ್ಸಲ್ ಮಾಡಿದರು. ನನಗೆ ಸ್ನಾನ ಮಾಡಲೂ ಅವಕಾಶ ನೀಡಲಿಲ್ಲ. ನಾನೇನು ಭಯೋತ್ಪಾದಕನೇ, ನಾನೊಬ್ಬ ರಾಜ್ಯದ ಸಚಿವ, ಅಲ್ಲಿರುವವರೆಲ್ಲಾ ನನ್ನ ಸ್ನೇಹಿತರು, ಅವರನ್ನು ಭೇಟಿ ಮಾಡಿದ್ದು ತಪ್ಪಾ ಎಂದು ಡಿ ಕೆ ಶಿವಕುಮಾರ್ ತಮ್ಮ ಭಾಷಣದಲ್ಲಿ ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮೊದಲು ನನಗೆ ಸಚಿವ ಸ್ಥಾನ ಸಿಗಲಿಲ್ಲ, ಹಾಗಂತ ನಾನು ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಗಾಂಧಿ ಕುಟುಂಬ, ಎಸ್ ಎಂ ಕೃಷ್ಣ ಮತ್ತು ಬಂಗಾರಪ್ಪನವರ ಮೇಲೆ ನನ್ನ ನಿಯತ್ತು ಯಾವತ್ತೂ ಇರುತ್ತದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ದ್ವೇಷ, ಅಸೂಯೆ ಅನ್ನುವುದು ನನ್ನಲಿಲ್ಲ, ಹಾಗಿದ್ದರೆ ಕುಮಾರಸ್ವಾಮಿಯ ಜೊತೆ ಕೈಜೋಡಿಸುತ್ತಿರಲಿಲ್ಲ. ನನ್ನ ಮತ್ತು ಅವರ ಕುಟುಂಬದ ನಡುವೆ ಯಾವ ಮಟ್ಟದ ದ್ವೇಷವಿತ್ತು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ ಎಂದು ಡಿಕೆಶಿ ಹೇಳಿದರು.
ಇಂದು ಬದುಕುತ್ತೇವೆ, ನಾಳೆ ಸಾಯುತ್ತೇವೆ, ಬಿಜೆಪಿಯ ಯಾವ ಮುಖಂಡರ ಮೇಲೂ ನನಗೆ ದ್ವೇಷ ಇಲ್ಲ. ನಾನು ನನ್ನ ಪಕ್ಷಕ್ಕೆ ನಿಯತ್ತಿನ ಸಿಪಾಯಿ ಆಗಿದ್ದೇನೆ. ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ಎಂತೆಂತಾ ಮಾತಿನಿಂದ ನನ್ನನ್ನು ಟೀಕಿಸಲಾಯಿತು. ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ ಎಂದು ಸುಮ್ಮನಾಗಿದ್ದೇನೆ ಎಂದು ಡಿಕೆಶಿ, ಸದನದಲ್ಲಿ ಹೇಳಿದರು.












Click it and Unblock the Notifications