ಬಿಜೆಪಿಗೆ ಭಾರಿ ಹಿನ್ನಡೆ ತಂದ ಸ್ಪೀಕರ್ ರಮೇಶ್ ಕುಮಾರ್ ನಡೆ
ಬೆಂಗಳೂರು, ಜುಲೈ 10: ಯಾವ ಒಬ್ಬ ಶಾಸಕರ ರಾಜೀನಾಮೆಯನ್ನೂ ಅಂಗೀಕಾರ ಮಾಡಿಲ್ಲ, ಅವರಿಗೆ ಸಮಯ ನೀಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಈ ನಡೆ, ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಭಾರಿ ಹಿನ್ನಡೆ ತಂದಿದ್ದು, ಬಿಜೆಪಿಯು ಪ್ರಸ್ತುತ ಸರ್ಕಾರವನ್ನು ಉರುಳಿಸಲು ಬೇರೆ ದಾರಿಗಳ ಮೊರೆ ಹೋಗಲಿದೆ.
ಹದಿನಾಲ್ಕು ಶಾಸಕರು ನಿನ್ನೆಯವರೆಗೆ ರಾಜೀನಾಮೆ ನೀಡಿದ್ದರು, ಆದರೆ ಯಾವೊಬ್ಬ ಶಾಸಕರ ರಾಜೀನಾಮೆಯನ್ನೂ ಅಂಗೀಕಾರ ಮಾಡಿಲ್ಲವೆಂದು ರಮೇಶ್ ಕುಮಾರ್ ಹೇಳಿದ್ದು, ಅವರಿಗೆ ನಿಯಮದಂತೆ 17 ನೇ ತಾರೀಖಿನ ವರೆಗೆ ಕಾಲಾವಕಾಶ ನೀಡಿದ್ದೇನೆ ಎಂದು ಹೇಳಿದ್ದಾರೆ.
ರಾಜೀನಾಮೆಯನ್ನು ರಾತ್ರೋರಾತ್ರಿ ಅಂಗೀಕಾರ ಮಾಡುವುದಕ್ಕೆ ಸಾಧ್ಯವಿಲ್ಲ, ಅದಕ್ಕೆ ನಿಯಮಗಳಿವೆ ಅವುಗಳಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ರಮೇಶ್ ಕುಮಾರ್ ಮೇಲೆ ಬಿಜೆಪಿ ಅಸಮಾಧಾನ
ರಮೇಶ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ರಾಜೀನಾಮೆ ಅಂಗೀಕಾರ ತಡ ಮಾಡುತ್ತಿದ್ದಾರೆ ಎಂದು ಬಿಜೆಪಿಯು ಆರೋಪಿಸಿದ್ದು, ಇಂದು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದೆ. ಅಷ್ಟೆ ಅಲ್ಲದೆ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ವಿರುದ್ಧ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ.

ರಮೇಶ್ ಕುಮಾರ್ ನಡೆಯಿಂದ ಬಿಜೆಪಿಗೆ ಹಿನ್ನಡೆ
ರಮೇಶ್ ಕುಮಾರ್ ಅವರ ಈ ನಡೆ ಬಿಜೆಪಿಗೆ ಭಾರಿ ಹಿನ್ನಡೆ ತಂದಿದ್ದು, ರಮೇಶ್ ಕುಮಾರ್ ದೆಸೆಯಿಂದ ದೊರೆತಿರುವ ಕಾಲಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಈಗಾಗಲೇ ಕಾಂಗ್ರೆಸ್ ಹೆಜ್ಜೆ ಇರಿಸಿದ್ದು, ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಿ ಅತೃಪ್ತರ ಭೇಟಿ ಆಗುವ ಸಾಹಸ ಮಾಡಿದ್ದಾರೆ.

ಸ್ಪೀಕರ್ ನಿರ್ಣಯದ ವಿರುದ್ಧ ಸುಪ್ರಿಂ ಗೆ ಮನವಿ
ಆದರೆ ಬಿಜೆಪಿ ಸಹ ಸ್ಪೀಕರ್ ವಿರುದ್ಧ ಇಂದು ಅಸಮಾಧಾನ ಹೊರಹಾಕಿದ್ದು, ಸ್ಪೀಕರ್ ವಿರುದ್ಧ ಸುಪ್ರಿಂ ಕೋರ್ಟ್ನಲ್ಲಿ ಅತೃಪ್ತರಿಂದ ಅರ್ಜಿಯನ್ನು ಗುಜರಾಯಿಸಿದ್ದಾರೆ.

ಸ್ಪೀಕರ್ ಬದಲಾಯಿಸಲು ಸಿದ್ಧವಾಗಿದೆ ಬಿಜೆಪಿ
ಅಷ್ಟೆ ಅಲ್ಲದೆ, ಜುಲೈ 12 ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಪ್ರಕಟಿಸಿ ಸ್ಪೀಕರ್ ಅನ್ನು ಹುದ್ದೆಯಿಂದ ಕೆಳಗೆ ಇಳಿಸಿ, ಆ ಹುದ್ದೆಗೆ ತಮ್ಮ ಪಕ್ಷದವರನ್ನೇ ಆಯ್ಕೆ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡಲಿದೆ.

ಇಂದು ಇಬ್ಬರು ಶಾಸಕರ ರಾಜೀನಾಮೆ
ಇಂದು ಇಬ್ಬರು ಕಾಂಗ್ರೆಸ್ ಶಾಸಕರು ಏಕಾ-ಏಕಿ ರಾಜೀನಾಮೆ ನೀಡಿದ್ದಾರೆ. ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.











Click it and Unblock the Notifications