ವಿಧಾನಪರಿಷತ್ ಸ್ಥಾನ ಬೇಡವೆಂದ್ರು ಮಾಜಿ ಸಂಸದೆ ರಮ್ಯಾ
ವಿಜಯಪುರ, ಜನವರಿ 30 : 'ನಾನು ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ. ಉತ್ತಮವಾದ ಕಥೆ ಸಿಕ್ಕರೆ ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ' ಎಂದು ಮಂಡ್ಯದ ಮಾಜಿ ಸಂಸದೆ ರಮ್ಯಾ ಹೇಳಿದರು. ರಮ್ಯಾ ಮತ್ತು ಭಾವನಾ ಅವರನ್ನು ಪರಿಷತ್ ಸದಸ್ಯರಾಗಿ ನಾಮಕರಣ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
ಶನಿವಾರ ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ರಮ್ಯಾ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. 'ಈಗಾಗಲೇ ರಾಜಕೀಯದಲ್ಲಿ ಬ್ಯುಸಿಯಾಗಿದ್ದೇನೆ. ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ' ಎಂದು ಅವರು ಸ್ಪಷ್ಟಪಡಿಸಿದರು. [ವಿಧಾನಪರಿಷತ್ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?]
ಫೆಬ್ರವರಿ ಮೊದಲ ವಾರದಲ್ಲಿ ಇಬ್ಬರು ವಿಧಾನಪರಿಷತ್ ಸದಸ್ಯರು ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ರಮ್ಯಾ ಮತ್ತು ಭಾವನಾ ಅವರು ನಾಮನಿರ್ದೇಶನಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ, ರಮ್ಯಾ ಅವರು ಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ. [ನಾನ್ಯಾಕೆ ರಾಜಕೀಯ ಸನ್ಯಾಸ ಸ್ವೀಕರಿಸಲಿ : ಈಶ್ವರಪ್ಪ]
2015ರ ಡಿಸೆಂಬರ್ 27ರಂದು 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಆಗಲೂ ಮಂಡ್ಯ ಕ್ಷೇತ್ರದಿಂದ ರಮ್ಯಾ ಅವರ ಹೆಸರು ಕೇಳಿಬಂದಿತ್ತು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ನಡೆಸ ಸಭೆಯ ಬಳಿಕ ರಮ್ಯಾ ಅವರು ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದರು. ಅಂತಿಮವಾಗಿ ಮಂಡ್ಯದಿಂದ ಎಲ್.ಆರ್.ಶಿವರಾಮೇಗೌಡ ಅವರು ಸ್ಪರ್ಧಿಸಿದ್ದರು. ಆದರೆ, ಸೋಲು ಅನುಭವಿಸಿದ್ದರು........
ಪರಿಷತ್ ಸದಸ್ಯತ್ವ ಅಕಾಂಕ್ಷಿಯಲ್ಲ
ವಿಜಯಪುರದಲ್ಲಿ ಶನಿವಾರ ಮಾತನಾಡಿದ ನಟಿ ಮತ್ತು ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರು ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮೇಲ್ಮನೆಗೆ ನಾಮನಿರ್ದೇಶಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
2 ಸ್ಥಾನಗಳು ತೆರವಾಗಲಿವೆ
ಸದ್ಯ ಪರಿಷತ್ ಸದಸ್ಯರಾಗಿರುವ ಪಿ.ಕೃಷ್ಣಭಟ್ ಸೇರಿದಂತೆ ಇಬ್ಬರು ಸದಸ್ಯರು ಫೆಬ್ರವರಿ ಮೊದಲ ವಾರದಲ್ಲಿ ನಿವೃತ್ತರಾಗಲಿದ್ದು, ಅವರಿಂದ ಎರಡು ಸ್ಥಾನಗಳು ತೆರವಾಗಲಿವೆ. ಇವುಗಳಲ್ಲಿ ಒಂದು ಸ್ಥಾನಕ್ಕೆ ರಮ್ಯಾ ಅವರನ್ನು ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.
ಸಭೆಯಲ್ಲಿಯೂ ಚರ್ಚೆ ನಡೆದಿತ್ತು
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಸಭೆ ನಡೆಸಿದಾಗ ಪರಿಷತ್ತಿಗೆ ರಮ್ಯಾ ಮತ್ತು ಬಾಲಭವನದ ಅಧ್ಯಕ್ಷೆ ಭಾವನಾ ಅವರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಚರ್ಚೆ ನಡೆಸಿದ್ದರು.
ಸಿನಿಮಾದಲ್ಲಿ ನಟಿಸುತ್ತೇನೆ ಅಂದ್ರು
'ರಾಜಕೀಯದಲ್ಲಿ ಈಗ ಸಾಕಷ್ಟು ಬ್ಯುಸಿ ಇದ್ದೇನೆ. ಉತ್ತಮವಾದ ಕಥೆ ಸಿಕ್ಕರೆ ಸಿನಿಮಾಗಳಲ್ಲಿ ನಟಿಸುತ್ತೇನೆ' ಎಂದು ಹೇಳಿರುವ ರಮ್ಯಾ ಅವರು ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ. ಅಂದಹಾಗೆ ರಮ್ಯಾ ಅವರು ಕೊನೆಯದಾಗಿ ನಟಿಸಿದ ಚಿತ್ರ ಆರ್ಯನ್.
ಚುನಾವಣೆಗೆ ಸ್ಪರ್ಧಿಸೋಲ್ಲ ಅಂತ ಹೇಳಿದ್ರು
2015ರ ಡಿಸೆಂಬರ್ 27ರಂದು 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿಯೂ ರಮ್ಯಾ ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಮಂಡ್ಯ ಕ್ಷೇತ್ರದಿಂದ ಎಲ್.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡರ ವಿರುದ್ಧ ಸೋಲು ಅನುಭವಿಸಿದ್ದರು.