ಮತ್ತೆ ಭುಗಿಲೆದ್ದ ಅಸಮಾಧಾನ ; ನನಗೆ ಧಿಮಾಕು ಜಾಸ್ತಿನೇ ಇದೆ, ಯಾರನ್ನೂ ಕೇರ್ ಮಾಡಲ್ಲ: ಬಸವರಾಜ ರಾಯರೆಡ್ಡಿ
ಕೊಪ್ಪಳ, ಆಗಸ್ಟ್ 01: 135 ಸ್ಥಾನಗಳನ್ನು ಭರ್ಜರಿಯಾಗಿಯೇ ಗೆದ್ದು ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಜೋರಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರ ವಿರುದ್ದ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಅಸಮಾಧಾನ ಹೊರಹಾಕಿದ್ದ ನಾಯಕರು, ಇದೀಗ ಬಹಿರಂಗವಾಗಿಯೇ ಅಸಮಾಧಾನವನ್ನ ಹೊರ ಹಾಕುತ್ತಿದ್ದಾರೆ.
ಹೌದು, ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರ ಹಾಕಿದ್ದ ಶಾಸಕ ರಾಯರೆಡ್ಡಿ ಇದೀಗ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ನಾನು ಕೂಡ ಯಾರಿಗೂ ಕಡಿಮೆ ಇಲ್ಲ, ಯಾರನ್ನೂ ಕೇರ್ ಮಾಡಲ್ಲ. ಅವರಿಗಿಂತ ನನಗೆ ಸ್ವಲ್ಪ ಧಿಮಾಕು ಜಾಸ್ತಿನೇ ಇದೆ ಎಂದು ಹೇಳಿದ್ದಾರೆ.

ಆಳಂದ ಶಾಸಕ ಬಿಆರ್ ಪಾಟೀಲ್ ಅವರು ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಶಾಸಕರು ನಂತರ ಕ್ಷಮೆ ಕೋರಿದ್ದಾರೆ, ಮುಖ್ಯಮಂತ್ರಿಗಳಿಗೆ ಪತ್ರವನ್ನ ಬರೆಯಲಾಗಿದ್ದು, ಕೆಲ ಶಾಸಕರು ಸಹಿ ಸಂಗ್ರಹಿಸಿದ್ದರು. ಅದಕ್ಕೆ ನಾನು ಸಹಿ ಹಾಕಿದ್ದೆ. ಮುಖ್ಯಮಂತ್ರಿಗಳು ಸಹ ಏನೂ ತಪ್ಪು ತಿಳಿದುಕೊಂಡಿಲ್ಲ.
ಇನ್ನೂ ಸಚಿವರು ಹಾಗೂ ಶಾಸಕರ ಮಧ್ಯೆ ಸ್ವಲ್ಪ ಸಮನ್ವಯದ ಕೊರತೆ ಇತ್ತು. ಅದಕ್ಕಾಗಿ ಸಮನ್ವಯ ಸಮಿತಿ ರಚನೆಯಾದರೆ ತಪ್ಪೇನಿಲ್ಲ. ಶಾಸಕರಾದ ಬಿ ಆರ್ ಪಾಟೀಲ್ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಎಂದಿದ್ದಾರೆ. ನಾನು ಕೂಡ ಯಾರಿಗೂ ಕಡಿಮೆ ಇಲ್ಲ, ನಾನು ಯಾರಿಗೂ ಕೇರ್ ಮಾಡಲ್ಲ. ಅವರಿಗಿಂತ ನನಗೆ ಸ್ವಲ್ಪ ಧಿಮಾಕು ಜಾಸ್ತಿನೇ ಇದೆ ಎಂದು ರಾಯರೆಡ್ಡಿ ಹೇಳಿದ್ದಾರೆ.
ಶಾಸಕರು ಹಾಗೂ ಸಚಿವರ ನಡುವೆ ಅಸಮಾಧಾನವಿದೆಯೇ ಎಂಬ ಕುರಿತು ಮಾತನಾಡಿ, ಶಾಸಕರು ಹಾಗೂ ಸಚಿವರ ಮಧ್ಯೆ ಯಾವುದೇ ಅಸಮಾಧಾನವಿಲ್ಲ. ಯಾರಿಂದಲೂ ಈ ಸರ್ಕಾರವನ್ನು ಅಸ್ಥಿರ ಮಾಡೋಕೆ ಆಗುವುದಿಲ್ಲ. ಸರ್ಕಾರ ಬೀಳಿಸುವಷ್ಟು ಕೆಳಮಟ್ಟದ ಜನರು ನಾವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಸರ್ಕಾರ ಕೊಡುತ್ತೇವೆ ಎಂದು ಹೇಳಿದರು.
ಇನ್ನೂ ಹೈಕಮಾಂಡ್ ಬುಲಾವ್ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಹೈಕಮಾಂಡ್ ಕರೆದಿರುವ ಸಭೆಗೆ ನಾನು ಹೋಗುತ್ತಿಲ್ಲ. ನನಗೆ ಹೈಕಮಾಂಡ್ನಿಂದ ಅಧಿಕೃತ ಅಹ್ವಾನ ಬಂದಿಲ್ಲ. ನನ್ನ ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ. ನನಗೆ ತಿಳಿದ ಮಾಹಿತಿ ಪ್ರಕಾರ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ಕರೆದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications