ಮೋದಿ ಮೆಚ್ಚುಗೆ, ಸ್ವಚ್ಛ ಭಾರತದ ಬಗ್ಗೆ ದೇವೇಗೌಡ್ರು
ಹಾಸನ, ಅ.5: ಗಾಂಧಿ ಜಯಂತಿ ದಿನದಂದು ಪ್ರಧಾನಮಂತ್ರಿ ನರೇಂದ್ರಮೋದಿಯವರು ಪೊರಕೆ ಹಿಡಿದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ದೇಶವ್ಯಾಪ್ತಿ ಹಬ್ಬಿದ್ದಲ್ಲದೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೂಡಾ ಕಸ ಗುಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಬಗ್ಗೆ ತಿಳಿದುಕೊಂಡ ಮೋದಿ ಅವರು ದೇವೇಗೌಡರನ್ನು ಶ್ಲಾಘಿಸಿದರು. ಅದರೆ, ಮೋದಿ ಮೆಚ್ಚುಗೆ ಮಾತುಗಳನ್ನು ದೇವೇಗೌಡರು ತಳ್ಳಿ ಹಾಕಿದ್ದಾರೆ.
'ಅಕ್ಟೋಬರ್ 2ರಂದು ಗಾಂಧೀ ಜಯಂತಿ ದಿನ ಪ್ರಧಾನಮಂತ್ರಿ ನರೇಂದ್ರಮೋದಿಯವರು ಪೊರಕೆ ಹಿಡಿದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಒಂದು ಒಳ್ಳೆ ಉದ್ದೇಶ ಇಟ್ಟುಕೊಂಡು ಈ ಯೋಜನೆ ಹಮ್ಮಿಕೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಸ್ವತಃ ಮೋದಿ ಅವರೇ ಹೇಳಿಕೊಂಡಿದ್ದಾರೆ. ದೇಶದ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನಾನು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ಭಾಗಿಯಾಗಿದ್ದೆ ಅಷ್ಟೇ' ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. [ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ]

ಮೋದಿ ಅವರು ಚಾಲನೆ ನೀಡಿದ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾತ್ರಕ್ಕೆ ನಾನು ಮೋದಿ ಬೆಂಬಲಿಗ ಎಂದು ಕರೆಯುವಂತಿಲ್ಲ. ನಾನು ಜಾತಿವಾದಿ ರಾಜಕೀಯವನ್ನು ಧಿಕ್ಕರಿಸುತ್ತೇನೆ. ಉದಾಹರಣೆಗೆ ವಿಜಯದಶಮಿ ಅಂಗವಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ನಾಗಪುರದಲ್ಲಿ ಮಾಡಿದ ಭಾಷಣವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಯಿತು. ಇಂಥದ್ದನ್ನೆಲ್ಲ ಸರ್ಕಾರ ತಡೆಗಟ್ಟಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವೇಗೌಡರಿಗೆ ಟ್ವಿಟರ್ ಮೂಲಕ ಶುಭಕೋರಿರುವ ಮೋದಿ ಸ್ವಚ್ಛ ಭಾರತ ಅಭಿಯಾನದಲ್ಲಿ ನೀವು ಪಾಲ್ಗೊಂಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಮಾಜಿ ಪ್ರಧಾನಿಯಾಗಿ ನೀವು ನನ್ನ ಕರೆಗೆ ಓಗೊಟ್ಟು ಅಭಿಯಾನದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಶ್ಲಾಘನೀಯ. ನಿಮ್ಮನ್ನು ವೈಯಕ್ತಿಕವಾಗಿ ನಾನು ಅಭಿನಂದಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದರು.
ಪ್ರಧಾನಿಯವರ ಕರೆ ಮೇರೆಗೆ ನಾನೇ ಪಾಲ್ಗೊಂಡಿದ್ದೇನೆ. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅರಿತುಕೊಳ್ಳಬೇಕು. ದೇಶವನ್ನು ಸ್ವಚ್ಛಗೊಳಿಸುವುದೆಂದರೆ ನಮ್ಮ ಮನಸ್ಸನ್ನೇ ಸ್ವಚ್ಛಗೊಳಿಸುವುದು ಎಂಬಂತಾಗಿದೆ ಎಂದು ದೇವೇಗೌಡರು ಆಭಿಪ್ರಾಯಪಟ್ಟಿದ್ದರು.












Click it and Unblock the Notifications