ನಾನು ಸಿಎಂ ಹುದ್ದೆ ಆಕಾಂಕ್ಷಿ ಅಲ್ಲ: ಆರ್.ವಿ.ದೇಶಪಾಂಡೆ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 01: ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಿಎಂ ಹುದ್ದೆಯ ಭರ್ಜರಿ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ತಾವು ಮತ್ತೆ ಸಿಎಂ ಆಗ್ತೀನಿ ಅಂದಿದ್ದಕ್ಕೆ ಕುಮಾರಸ್ವಾಮಿ ಅವರು ಆರ್.ವಿ.ದೇಶಪಾಂಡೆ ಕೂಡ ಸಿಎಂ ಆಕಾಂಕ್ಷಿ ಎಂದ್ದಿದ್ದರು. ಆದರೆ ಇದಕ್ಕೆ ಈ ಚರ್ಚೆಗೆ ದೇಶಪಾಂಡೆ ಶುಭಂ ಹಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಗೊಂದಲಗಳನ್ನು ನಿವಾರಿಸಲು ಹೇಳಿಕೆ ನೀಡಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು 'ನಾನು ಸಿಎಂ ಹುದ್ದೆ ಆಕಾಂಕ್ಷಿ ಆಗಿದ್ದೆ ಆದರೆ ಈಗಿಲ್ಲ' ಎಂದಿದ್ದಾರೆ.
ಆರ್.ವಿ.ದೇಶಪಾಂಡೆ ಸಿಎಂ, ಕುಮಾರಸ್ವಾಮಿ ಹೇಳಿಕೆಗೆ ನೂರೆಂಟು ಅರ್ಥ!
ಕುಮಾರಸ್ವಾಮಿ ಅವರೇ ದೇಶಪಾಂಡೆ ಅವರ ಹೆಸರನ್ನು ಸಿಎಂ ಹುದ್ದೆಗೆ ಸೂಚಿಸಿದ ಕಾರಣ, ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ನಂತರ ದೇಶಪಾಂಡೆ ಸಿಎಂ ಆಗುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು ಆದರೆ ಅದಕ್ಕೆ ದೇಶಪಾಂಡೆ ಅವರೇ ಎಳ್ಳು-ನೀರು ಬಿಟ್ಟಿದ್ದಾರೆ.
ಇಂದು ಕೆಪಿಸಿಸಿ ಜಿಲ್ಲಾ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ ಅವರು, ಕುಮಾರಸ್ವಾಮಿ ಅವರು ನನ್ನ ಹೆಸರನ್ನು ಸೂಚಿಸಿಲ್ಲ, ಬದಲಿಗೆ ದೇಶಪಾಂಡೆ ಸಿಎಂ ಹುದ್ದೆಗೆ ಅರ್ಹ ಎಂದು ಹೇಳಿದ್ದಾರಷ್ಟೆ' ಎಂದರು.
ಕೆಲವರು ಆರ್.ವಿ.ದೇಶಪಾಂಡೆ ಸಿಎಂ ಆಗ್ತಾರೆ ಅಂತಿದ್ದಾರೆ: ಸಿದ್ದುಗೆ ಎಚ್ಡಿಕೆ ಟಾಂಗ್
ಸಿದ್ದರಾಮಯ್ಯ ಅವರು ಹೊಳೆನರಸಿಪುರದ ಕಾರ್ಯಕ್ರಮವೊಂದರಲ್ಲಿ 'ನಾನು ಮತ್ತೆ ಸಿಎಂ ಆಗುತ್ತೇನೆ' ಎಂದಿದ್ದರು. ಇದು ಭಾರಿ ರಾಜಕೀಯ ಸಂಚಲನ ಸೃಷ್ಟಿಸಿತ್ತು. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕುಮಾರಸ್ವಾಮಿ ಅವರು, ಆರ್.ವಿ.ದೇಶಪಾಂಡೆ ಕೂಡ ಸಿಎಂ ಹುದ್ದೆಗೆ ಅರ್ಹ ವ್ಯಕ್ತಿ ಎಂದಿದ್ದರು.