MP Patil: ಕಾಂಗ್ರೆಸ್ ನಲ್ಲಿ ಮತ್ತೆ ಸಿಎಂ ಚರ್ಚೆ: ಸಿದ್ದರಾಮಯ್ಯ, ಡಿಕೆಶಿಯಂತೆ ಸಿಎಂ ಸ್ಥಾನಕ್ಕೆ ನಾನು ಸಮರ್ಥ ಎಂದ ಎಂಬಿ ಪಾಟೀಲ
ವಿಜಯಪುರ, ಏಪ್ರಿಲ್22: ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಾವು ಜೋರಾಗಿದೆ. ಪದೇ ಪದೇ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಇದೀಗ ಚುನಾವಣಾ ಪ್ರಚಾರದ ವೇಳೆ ಲಿಂಗಾಯತ ಮುಖ್ಯಮಂತ್ರಿ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕರು ಲಿಂಗಾಯತ ಮುಖ್ಯಮಂತ್ರಿಯನ್ನ ತಾಕತ್ತಿದ್ದರೆ ಘೋಷಿಸಲಿ ಎಂದು ಸವಾಲು ಹಾಕಿದ್ದು, ಸದ್ಯ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರ ಚರ್ಚೆಯಾಗುತ್ತಿರುವಾಗಲೇ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಲಿಂಗಾಯತ ಮುಖಂಡ ಎಂ ಪಿ ಪಾಟೀಲ್ ನಾನು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಸಮರ್ಥನಿದ್ದೇನೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಂತೆ ನಾನು ಕೂಡ ಮುಖ್ಯಮಂತ್ರಿ ಆಗಲು ಸಮರ್ಥ ಇದ್ದೇನೆ ಎಂದು ಹೇಳುವ ಮೂಲಕ ಲಿಂಗಾಯತ ಮುಖ್ಯಮಂತ್ರಿ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.ಎಲ್ಲಾ ಶಾಸಕರ ಒಮ್ಮತದ ಅಭಿಪ್ರಾಯ ಬಂದರೆ, ಹೈಕಮಾಂಡ್ ಶಾಸಕರ ಮಾತಿಗೆ ಅಸ್ತು ಎಂದರೇ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಇನ್ನೂ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಹಳಷ್ಟು ಜನ ಸಮರ್ಥರು ಇದ್ದೇವೆ. ಸಿದ್ದರಾಮಯ್ಯ ಇದ್ದಾರೆ, ಡಿಕೆ ಶಿವಕುಮಾರ್ ಇದ್ದಾರೆ. ಆರ್ವಿ ದೇಶಪಾಂಡೆ ಇದ್ದಾರೆ ಹಾಗೂ ನಾನು ಇದ್ದೇನೆ ಎಂದು ಹೇಳಿದರು.
ನಾನು ಕರ್ನಾಟಕದ ಮುಖ್ಯಮಂತ್ರಿ ಆಗಲು ಸಮರ್ಥ ಇದ್ದೇನೆ. ಅವಕಾಶ ಇದ್ದರೆ ಅದು ಆಗುತ್ತದೆ. ಎಐಸಿಸಿ ಅಧ್ಯಕ್ಷರು ಸೇರಿ ಎಲ್ಲರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಬಯಸಿದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬಹುದು ಎಂದು ಎಂ ಬಿ ಪಾಟೀಲ್ ಹೇಳಿದರು.
ಇತ್ತ ಬಿಜೆಪಿ ಪಕ್ಷದಲ್ಲಿ ಹಲವು ಜನ ಲಿಂಗಾಯತ ನಾಯಕರಿಗೆ ಅನ್ಯಾಯವಾಗಿದೆ. ಹೀಗಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿ ನಾಯಕರು ಏನೇ ಟೀಕೆ ಮಾಡಿದರೂ ಜನರಿಗೆ ಗೊತ್ತಿದೆ. ವಿರೇಂದ್ರ ಪಾಟೀಲ್ ಅವರನ್ನು ಅನಾರೋಗ್ಯದ ಕಾರಣಕ್ಕೆ ಆಡಳಿತ ಸರಿ ಆಗುವುದಿಲ್ಲ ಎಂದು ಇಳಿಸಲಾಗಿತ್ತು. ಆದರೆ, ಬಿಎಸ್ ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ಆಪರೇಷನ್ ಕಮಲ ಮಾಡಿ ಅವರನ್ನು ತೆಗೆದು ಹಾಕಿದರು ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಒಬ್ಬ ಲಿಂಗಾಯತರನ್ನು ತೆಗೆದು ಮತ್ತೊಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವುದು ಬಿಜೆಪಿ ಅವರ ಉದ್ದೇಶ ಆಗಿರಲಿಲ್ಲ. ಈ ಕುರಿತು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಲಿಂಗಾಯತರು ಹೋರಾಟ ಶುರು ಮಾಡಿದಾಗ ಹೆದರಿ ಬಿಜೆಪಿಯವರು ಲಿಂಗಾಯತರನ್ನ ಮುಖ್ಯಮಂತ್ರಿ ಮಾಡಿದರು. ಬಸವರಾಜ ಬೊಮ್ಮಾಯಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವರು ಎಂದು ಎಂಬಿ ಪಾಟೀಲ್ ಹೇಳಿದರು.
ಬಿಜೆಪಿಯಿಂದ ಲಿಂಗಾಯತ ಸಿಎಂ ಅಸ್ತ್ರ ಬಳಕೆ ವಿಚಾರವಾಗಿ ಸಚಿವ ವಿ ಸೋಮಣ್ಣ ಮಾತನಾಡಿ, ಒಂದು ವರ್ಷದ ಹಿಂದೆಯೇ ಅಮಿತ್ ಷಾ ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎಂದು ಹೇಳಿದರು. ಇದನ್ನು ನೀವೆ ಅರ್ಥ ಮಾಡಿಕೊಳ್ಳಬೇಕು, ಮುಂದಿನ ಮುಖ್ಯಮಂತ್ರಿ ಆಗುವ ಬಗ್ಗೆ ನಾನು ಭ್ರಮೆ ಇಟ್ಟುಕೊಂಡಿಲ್ಲ. ಇನ್ನು ಇಪ್ಪತ್ತು ದಿನ ಕಾಯಿರಿ, ಎಲ್ಲಾ ಸರಿಹೋಗುತ್ತೆ. ತಾಯಿ ಚಾಮುಂಡಿ ಏನು ಹೇಳ್ತಾಳೆ ಅದನ್ನು ಕೇಳ್ತೀನಿ ಎಂದು ಚಾಮರಾಜನಗರದಲ್ಲಿ ವಿ.ಸೋಮಣ್ಣ ಹೇಳಿದರು.












Click it and Unblock the Notifications