ಮಲೆನಾಡು ಭಾಗದಲ್ಲಿ ಕಾಡಾನೆ, ಚಿರತೆ ಹಾವಳಿಗೆ ಜನ ತತ್ತರ: ಅರಣ್ಯ ಇಲಾಖೆ ವಿರುದ್ಧ ಜನಾಆಕ್ರೋಶ
ಚಿಕ್ಕಮಗಳೂರು/ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ, ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರ ಪರಿಣಾಮವಾಗಿ ಹಲವಾರು ಜನ ರೈತರು, ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಳೆದ ನಾಲ್ಕು ದಿನಗಳ ಹಿಂದೆ ಯಲ್ಲಪ್ಪ ಎನ್ನುವ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾದ ಘಟನೆ ಪುರ ಗ್ರಾಮದಲ್ಲಿ ನಡೆದಿತ್ತು.
ಈ ಪ್ರಕರಣಲ್ಲೆ ಸಂಬಂಧಿಸಿದಂತೆ ಕಾಡಾನೆಯನ್ನು ತಕ್ಷಣ ಸೆರೆಹಿಡಿಯುವಂತೆ ಸ್ಥಳೀಯ ರೈತರು ಅರಣ್ಯ ಇಲಾಖೆಯವರಿಗೆ ಆಗ್ರಹಪಡಿಸಿದ್ದು, ಪ್ರತಿಭಟನೆಯನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡಿಕೊಂಡಿರುವ ಕಾಡಾನೆಯನ್ನು ಸೆರೆಹಿಡಿಯಲು ಐದು ಸಾಕಾನೆಗಳ ತಂಡವನ್ನು ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮಕ್ಕೆ ಕರೆತರಲಾಗಿದೆ.

ಕಾಡಾನೆ ಇರುವ ಜಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳು ಬೀಡ ಬಿಟ್ಟಿವೆ. ಮೂರು ಕಾಡಾನೆಗಳಲ್ಲಿ ಒಂದು ನರಹಂತಕವನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಮೇರೆಗೆ ಶಿವಮೊಗ್ಗದ ಸಕ್ರೆಬೈಲಿನಿಂದ ಐದು ಸಾಕಾನೆಗಳ ತಂಡವನ್ನು ಕರೆತರಲಾಗಿದೆ ಎನ್ನಲಾಗಿದೆ. ಇನ್ನುಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಅದರ ಚಲನವಲನಗಳನ್ನು ಗಮನಿಸುವಂತೆ ತಿಳಿಸಲಾಗಿದೆ.
ತೀರ್ಥಹಳ್ಳಿ: 3 ಹಸುಗಳು ಚಿರತೆ ಪಾಲು
ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಉಪಟಳ ಮಾತ್ರವಲ್ಲದೇ ಚಿರತೆ ಸಹ ಪ್ರತ್ಯಕ್ಷವಾಗಿ ಆಗಾಗ ಸ್ಥಳೀಯರಿಗೆ, ರೈತರಿಗೆ ಕಾಟ ಕೊಡುತ್ತಿದೆ. ಹಗಲು ಹೊತ್ತು ಮನೆಯಿಂದ ಹೊರ ಹೋಗುವುದು, ಹೊಗ, ತೋಟಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುವಂತಾಗಿದೆ. ಮೂರು ಹಸುಗಳನ್ನು ಚಿರತೆ ಪಾಲಾದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಮಂಗ, ಕಾಡು ಕೋಣ ಹಾವಳಿ ಜೊತೆಗೆ ಚಿರತೆ ಹಾವಳಿ ಉಂಟಾಗಿದೆ. ತೀರ್ಥಹಳ್ಳಿಯಲ್ಲಿ ಅರಳಸುರಳಿ ಭಾಗದಲ್ಲಿ ಸದ್ದು ಮಾಡಿದ್ದ ಚಿರತೆಗಳು ಇದೀಗ ಈಚಲಬೈಲು ಭಾಗದಲ್ಲಿ ಕಾಣಿಸಿಕೊಂಡಿವೆ. ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈಚಲ ಬೈಲ್ ನಾಗೇಶ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಶುಕ್ರವಾರ ಬೆಳಗಿನ ಜಾವ ಹಸುಗಳನ್ನು ಚಿರತೆ ಕೊಂದು ರಕ್ತ ಹೀರಿವೆ. ಕಳೆದ ವಾರದ ಹಿಂದೆಯಷ್ಟೇ ಪಕ್ಕದ ಊರಿನ 2 ಹಸುಗಳು ಚಿರತೆ ದಾಳಿಗೆ ಬಲಿಯಾಗಿದೆ. ಈಚಲ ಬೈಲು, ಹಾಲಿಗೆ, ಸುಣ್ಣಧಮನೆ ಸೇರಿದಂತೆ ಈ ಭಾಗದಲ್ಲಿ ಚಿರತೆಗಳ ಹಾವಳಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅರಣ್ಯ ಇಲಾಖೆ ಭರವಸೆ ನೀಡಿದೆ.












Click it and Unblock the Notifications