ಹುಬ್ಬಳ್ಳಿ ಗಲಭೆ: ಡಿಕೆಶಿ ಭಯ ಪಡಬೇಕಾಗಿಲ್ಲ, ಸಿಎಂ ಬೊಮ್ಮಾಯಿ
ಶಿವಮೊಗ್ಗ, ಏಪ್ರಿಲ್ 20: "ಮಾಧ್ಯಮದವರನ್ನು ಬಿಟ್ಟು ರಾಜಕಾರಣಿಗಳಿಲ್ಲ, ನಮ್ಮನ್ನು ಬಿಟ್ಟು ನೀವಿಲ್ಲ. ಹುಬ್ಬಳ್ಳಿ ಗಲಭೆಯ ಸಂಬಂಧದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಸತ್ಯಾಸತ್ಯತೆಯ ಹೊರ ತರುವ ವಿಚಾರದಲ್ಲಿ ಸರಕಾರ ಮತ್ತು ಮುಖ್ಯಮಂತ್ರಿಗಳು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪದ ಬಗ್ಗೆ ಮಾತನಾಡುತ್ತಾ, "ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಕಾನೂನುಬದ್ದ ತನಿಖೆ ನಡೆಯುತ್ತಿದೆ"ಎಂದು ಸಿಎಂ ಸ್ಪಷ್ಟನೆಯನ್ನು ನೀಡಿದರು.
"ಶಾಂತಿ ಕದಡುವವರ ವಿರುದ್ದ ಬುಲ್ಡೋಜರ್ ಬಳಸುವ ಪರಿಸ್ಥಿತಿ ರಾಜ್ಯದಲ್ಲಿ ಇನ್ನೂ ಬಂದಿಲ್ಲ. ಡಿ.ಕೆ.ಶಿವಕುಮಾರ್ ಅವರು ಯಾಕೆ ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ"ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಧರ್ಮದವರು ಶಾಂತಿಯನ್ನು ಕಾಪಾಡಲು ಸಹಕರಿಸಬೇಕು, ಇಲ್ಲದಿದ್ದರೆ ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರಿಗೆ ಸಹಕರಿಸಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿಕೆಯನ್ನು ನೀಡಿದ್ದರು. ಈ ವಿಚಾರದಲ್ಲೂ ಸಿಎಂ ಸ್ಪಷ್ಟನೆಯನ್ನು ನೀಡಿದ್ದಾರೆ.

ಹುಬ್ಬಳ್ಳಿ ಗಲಭೆಯ ತನಿಖೆ ಸಾಕ್ಷಿ ಆಧಾರದ ಮೇಲೆ ನಡೆಯುತ್ತಿದೆ
"ಹುಬ್ಬಳ್ಳಿ ಗಲಭೆಯ ತನಿಖೆ ಸಾಕ್ಷಿ ಆಧಾರದ ಮೇಲೆ ನಡೆಯುತ್ತಿದೆ, ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಸತ್ಯ ಎಲ್ಲವೂ ಹೊರಗಡೆ ಬರುತ್ತದೆ. ಮಂಗಳೂರು, ಪಾದರಾಯನಪುರ, ಡಿ.ಜೆ.ಹಳ್ಳಿಯಲ್ಲೂ ಇಂತಹ ಘಟನೆ ಹಿಂದೆ ನಡೆದಿದೆ, ಈಗ ಹಳೇ ಹುಬ್ಬಳ್ಳಿಯ ಸರದಿ. ಈ ಎಲ್ಲಾ ಹಿನ್ನಲೆಯನ್ನು ಇಟ್ಟುಕೊಂಡು ತನಿಖೆ ನಡೆಸಲಾಗುವುದು"ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಾನು ಡಿ.ಕೆ.ಶಿವಕುಮಾರ್ ಅವರಿಗೆ ಹೇಳಲು ಇಷ್ಟ ಪಡುತ್ತೇನೆ
"ನಾನು ಡಿ.ಕೆ.ಶಿವಕುಮಾರ್ ಅವರಿಗೆ ಹೇಳಲು ಇಷ್ಟ ಪಡುತ್ತೇನೆ, ತಾವೇನು ಆತಂಕ ಭಯಕ್ಕೆ ಒಳಗಾಗಬೇಡಿ. ಕಾನೂನು ಬದ್ದವಾಗಿ ಯಾರ್ಯಾರು ಕಿಡಿಗೇಡಿಗಳು ಇದ್ದಾರೋ ಅವರ ಮೇಲೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು. ಮುಲಾಜಿಯಿಲ್ಲದೇ ಕ್ರಮ ತೆಗೆದುಕೊಳ್ಳಿ ಎನ್ನುವ ಹೇಳಿಕೆಯನ್ನು ಡಿಕೆಶಿ ನೀಡಬೇಕೆಂದು ನಾನು ನಿರೀಕ್ಷೆ ಮಾಡುತ್ತೇನೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಏನೇನೋ ಹೇಳಿಕೆಯನ್ನು ನೀಡಿ ಪ್ರಭಾವ ಬೀರುವಂತಹ ಅವಶ್ಯಕತೆಯಿಲ್ಲ"ಎಂದು ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯಲ್ಲೂ ಕಲ್ಲು ತೂರಾಟ
"ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಸಾಕಷ್ಟು ವಿಡಿಯೋ ಸಾಕ್ಷಿಗಳು ಲಭ್ಯವಾಗಿವೆ. ಪ್ರಕರಣದ ಹಿಂದೆ ಯಾರಿದ್ದಾರೆ, ಪ್ರಚೋದನೆ ನೀಡಿದವರಾರು ಎನ್ನುವ ಅಂಶವೂ ಹೊರಬೀಳಲಿದೆ. ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯಲ್ಲೂ ಕಲ್ಲು ತೂರಾಟ ನಡೆಸಲಾಗಿತ್ತು, ಹುಬ್ಬಳ್ಳಿಯಲ್ಲೂ ಅದೇ ರೀತಿ ಆಗಿದೆ. ಹಾಗಾಗಿ, ಇಲ್ಲೂ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದವರಿಂದಲೇ ಪರಿಹಾರ ಹಣ ವಸೂಲಿ ಮಾಡಲಾಗುವುದು"ಎಂದು ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆಯನ್ನು ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಮಾಫಿಯಾ, ಕಿಡಿಗೇಡಿಗಳ ವಿರುದ್ದ ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮ ಮತ್ತು ಆಸ್ತಿಪಾಸ್ತಿ ಮುಟ್ಟುಗೋಲಿಗೆ ಬುಲ್ಡೋಜರ್ ಮಾದರಿ ಎಂದು ಕರೆಯಲಾಗುತ್ತಿದೆ. ರಾಜ್ಯದ ಜನರು ಶಾಂತಿ ಕಾಪಾಡಲು ಸಹಕರಿಸಬೇಕು, ಇಲ್ಲದಿದ್ದರೆ ಬುಲ್ಡೋಜರ್ ಅನಿವಾರ್ಯತೆ ಬೀಳಲಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದರು. ತಮ್ಮದೇ ಸಂಪುಟದ ಸದಸ್ಯರೊಬ್ಬರ ಹೇಳಿಕೆಗೂ ಸಿಎಂ ಬೊಮ್ಮಾಯಿ ಸ್ಪಷ್ಟನೆಯನ್ನು ನೀಡಿದ್ದಾರೆ.












Click it and Unblock the Notifications