Roundup: ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಹೇಗಿತ್ತು?
ಯುವಕರು ಒಂದೆಡೆ ಸೇರಿರುವ ದೃಶ್ಯಗಳು ಕಂಡು ಬಂದಿವೆ. ಮೈಸೂರಿನ ದೊಡ್ಡ ಕೆರೆ ಮೈದಾನದಲ್ಲಿ ಕ್ರಿಕೆಟ್ ನಡೆಯುತ್ತಿತ್ತು. ವಿಷಯ ತಿಳಿದು ನಜರಾಬಾದ್ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಯುವಕರು ಓಡಿ ಹೋಗಿ ಮನೆ ಸೇರಿಕೊಂಡಿದ್ದಾರೆ.
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳು ಸೇರಿದಂತೆ ಪ್ರಮುಖ ರಸ್ತೆಗಳು, ವೃತ್ತಗಳು ಖಾಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿದ್ದ ಪರಿಣಾಮ, ದಿನಸಿ ಅಂಗಡಿಗಳು, ಮೆಡಿಕಲ್ ಸ್ಟೋರ್ಗಳು ಎಂದಿನಂತೆ ಕೆಲಸ ನಿರ್ವಹಿಸಿದರೆ, ಉಳಿದ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಎರಡು ದಿನ ಬಾರ್, ಪಬ್, ರೆಸ್ಟೋರೆಂಟ್ಗಳಿಗೂ ಬೀಗ ಹಾಕಲಾಗಿತ್ತು.
ಬಸ್ ನಿಲ್ದಾಣ ಖಾಲಿಖಾಲಿ
ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ, ಜನರಿಲ್ಲದೆ ಮೈಸೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಣಗುಡುತ್ತಿದೆ. ಪ್ರಯಾಣಿಕರಿಲ್ಲದೆ ಮೈಸೂರು ಬೆಂಗಳೂರು ಮಾರ್ಗದ ಐರಾವತ, ರಾಜಹಂಸ ಬಸ್ಗಳು ನಿಂತಲ್ಲೇ ನಿಂತಿದ್ದು, ಜನರಿಲ್ಲದೆ ಬಸ್ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಅಗತ್ಯತೆಗನುಸಾರ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿದ್ದು, ಕೇವಲ ಬೆರಳೆಣಿಕೆ ಪ್ರಯಾಣಿಕರಿಗಷ್ಟೇ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿವೆ.

ಬೆಳಗಾವಿಯಲ್ಲಿ ಪೊಲೀಸ್ ತಪಾಸಣೆ
ಬೆಳಗಾವಿ ಕಿರ್ಲೋಸ್ಕರ್ ರಸ್ತೆ, ಮಾರುತಿಗಲ್ಲಿ, ರವಿವಾರ ಪೇಟೆ ಸಂಪೂರ್ಣ ಖಾಲಿ ಖಾಲಿಯಾಗಿರುವ ದೃಶ್ಯ ಕಂಡು ಬಂದಿದೆ. ಮೆಡಿಕಲ್, ಬೇಕರಿ ಹೊರತು ಪಡಿಸಿ ಬಹುತೇಕ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಮಾರುಕಟ್ಟೆ ಪ್ರವೇಶದ್ವಾರದಲ್ಲಿ ಪೊಲೀಸ್ ತಪಾಸಣೆ ನಡೆಸುತ್ತಿದ್ದು, ಮಾಸ್ಕ್ ಇಲ್ಲದೇ ಇರೋವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ.

ರಾಯಚೂರಿನಲ್ಲಿ ಜನರು ಕರ್ಫ್ಯೂ ನಿರ್ಲಕ್ಷ್ಯ
ಇನ್ನು ರಾಯಚೂರು ಜಿಲ್ಲೆಯಲ್ಲಿ ಜನರು ವೀಕೆಂಡ್ ಕರ್ಫ್ಯೂವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಬೆಳಗ್ಗೆ ಎಂದಿನಂತೆ ಜನರ ಓಡಾಟ ಇತ್ತು. ಬೆಳಗ್ಗೆ 10 ಗಂಟೆಯ ನಂತರ ಜನ ಸಂಚಾರ ಕಡಿಮೆಯಾಗಿದ್ದು, ಪೊಲೀಸರು ರೌಂಡ್ಸ್ ಹಾಕುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಮಾರಾಟಕ್ಕೆ ನಿಷೇಧ ಹಾಕಲಾಗಿದೆ. ಆದರೆ ಪಾನ್ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂತು.
ಪ್ರವಾಸಿ ಸ್ಥಳಗಳು ಖಾಲಿ ಖಾಲಿ
ವಾರಾಂತ್ಯ ಕರ್ಫ್ಯೂ ಹಿನ್ನೆಲೆ ರಾಜ್ಯದ ಎಲ್ಲ ಪ್ರವಾಸಿ ಸ್ಥಳಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ಹೆದ್ದಾರಿಗಳಲ್ಲಿಯೂ ವಾಹನಗಳ ಸಂಖ್ಯೆ ಕಡಿಮೆಯಾಗಿದ್ದು, ವ್ಯಾಪರಿಗಳು ನಷ್ಟ ಅನುಭವಿಸುವಂತಾಗಿದೆ. ಇನ್ನುಳಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ವೀಕೆಂಡ್ ಕರ್ಫ್ಯೂಗೆ ಜನರು ಬೆಂಬಲ ಸೂಚಿಸಿದ್ದಾರೆ.

ಮಂಗಳೂರಿನಲ್ಲಿ ಕ್ರಿಕೆಟ್, ಕಬಡ್ಡಿ ಆಡಿದ ಬಸ್ ಸಿಬ್ಬಂದಿ
ವಾರಾಂತ್ಯ ಕರ್ಫ್ಯೂ ಹಿನ್ನಲೆ ಮಂಗಳೂರಿನಲ್ಲಿ ಬಸ್ ಸಿಬ್ಬಂದಿಗಳು ಕ್ರಿಕೆಟ್ ಹಾಗೂ ಕಬಡ್ಡಿ ಆಟ ಆಡಿದ್ದಾರೆ. ಖಾಸಗಿ ಬಸ್ ಚಾಲಕರು, ನಿರ್ವಾಹಕರಿಂದ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಆಟ ಆಡಲಾಯಿತು. ಬಹುತೇಕ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರೇ ಇರಲಿಲ್ಲ.
ಕೊರೊನಾ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ದೇವಸ್ಥಾನಗಳು ಬಂದ್ ಆಗಿದ್ದು, ಧರ್ಮಸ್ಥಳ ದೇವಸ್ಥಾನದ ಮುಂದೆ ಬ್ಯಾರಿಕೇಡ್ ಅಳವಡಿಸಿದೆ. ಪ್ರವೇಶ ನೀಡದ ಹಿನ್ನಲೆಯಲ್ಲಿ ಭಕ್ತರು ವಾಪಸ್ ಊರಿಗೆ ಮರಳಿದರು.

ಚಿತ್ರದುರ್ಗದಲ್ಲಿ ಅನಗತ್ಯ ಓಡಾಟಕ್ಕೆ ಬ್ರೇಕ್, ಮಾಸ್ಕ್ ಧರಿಸದವರಿಗೆ ದಂಡ
ಚಿತ್ರದುರ್ಗದಲ್ಲಿ ಶುಕ್ರವಾರ ರಾತ್ರಿ 10ರಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಎರಡು ದಿನಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸಹ ಅನವಶ್ಯಕ ಓಡಾಟಕ್ಕೆ ಬ್ರೇಕ್ ಬಿದ್ದಿದ್ದು, ಅಗತ್ಯ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುವರಿಗೆ ಪೋಲಿಸರು ಎಚ್ಚರಿಕೆ ನೀಡಲಾಗಿದೆ. ಇನ್ನೂ ಮಾಸ್ಕ್ ಹಾಕದೆ ಸಂಚರಿಸುವವರಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.

ರಾಮನಗರದಲ್ಲಿ ಜನರಿಲ್ಲದೇ ಬಸ್ ನಿಲ್ದಾಣ ಬಿಕೋ
ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಸದಾ ಜನರಿಂದ ತುಂಬಿರುತ್ತಿದ್ದ ರಾಮನಗರ ಬಸ್ ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿರಲಿಲ್ಲ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳು ಕಂಡುಬಂದಿಲ್ಲ. ಹಾಲು, ತರಕಾರಿ ಸೇರಿದಂತೆ ಅವಶ್ಯಕ ಅಂಗಡಿಗಳು ಓಪನ್ ಆಗಿದ್ದು, ರಾಮನಗರದಲ್ಲೆಡೆ ಪೊಲೀಸರ ಸಂಚಾರವಿದೆ.
ಹಾಸನ ಜಿಲ್ಲೆಯಲ್ಲಿ ಬಸ್ ನಿಲ್ದಾಣ ಖಾಲಿಖಾಲಿ
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜನರಿಲ್ಲದೆ ಹಾಸನ ಸೇರಿದಂತೆ ಜಿಲ್ಲೆಯ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿದ್ದು, ಪ್ರಯಾಣಿಕರಿಲ್ಲದೆ ನಿಲ್ದಾಣದಲ್ಲೇ ಬಸ್ಗಳು ನಿಂತಿವೆ. ವಾರಾಂತ್ಯ ಕರ್ಫ್ಯೂ ಹಿನ್ನಲೆ ಹಾಸನ ಜಿಲ್ಲೆ ಬೇಲೂರಿನ ಐತಿಹಾಸಿಕ ಚನ್ನಕೇಶವ ದೇವಾಲಯ ಸಂಪೂರ್ಣ ಬಂದ್ ಆಗಿದೆ.

ದಾವಣಗೆರೆಯಲ್ಲಿ ವೀಕೆಂಡ್ ಕರ್ಫ್ಯೂಗಿಲ್ಲ ಕಿಮ್ಮತ್ತು
ಇನ್ನು ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿದೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ವೀಕೆಂಡ್ ಕರ್ಫ್ಯೂ ಆದೇಶ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಆದೇಶ ಹೊರಡಿಸಿದ್ದರು. ಜನರು ಮಾತ್ರ ಈ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದಾರೆ.
ಶನಿವಾರ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಜನರು ಪಾರ್ಸೆಲ್ ತೆಗೆದುಕೊಂಡು ಹೋಗದೇ ಇಲ್ಲಿಯೇ ಕುಳಿತು ಆಹಾರ ಸೇವಿಸಿದ್ದಾರೆ. ಅದೇ ರೀತಿಯಲ್ಲಿ ಟೀಂ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಕೆಲವೆಡೆ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟು ನಡೆಸಿದವು. ಜಿಲ್ಲಾಡಳಿತವು ದಿನಸಿ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಎಂದು ಹೇಳಿತ್ತು. ಆದರೆ ವ್ಯಾಪಾರಸ್ಥರು ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ದಿನದಂತೆಯೇ ಓಪನ್ ಮಾಡಿ ವ್ಯಾಪಾರ ನಡೆಸಿದ್ದಾರೆ.












Click it and Unblock the Notifications