Breaking: ಗಾಂಧಿ ಕುಟಂಬದ ಹೆಸರು, ಕೈ ನಾಯಕರಿಗೆ ಬಿಜೆಪಿ ಟ್ವೀಟ್ ಬಾಣ
ಬೆಂಗಳೂರು ಜುಲೈ 22: ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಹೇಳಿಕೆ ಕೈ ನಾಯಕರನ್ನು ಪೇಚಿಗೆ ಸಿಲುಕಿಸುವಂತಿದೆ. ಈ ಬಗ್ಗೆ ಬಿಜೆಪಿ ಟ್ವಿಟ್ ಮೂಲಕ ಕಾಂಗ್ರೆಸ್ ಕಾಲೆಳೆದಿದ್ದು, ಕೆಪಿಸಿಸಿ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಮಂತ್ರಿಗಳು ಎಷ್ಟು ತಲೆಮಾರುಗಳಿಗೆ ಹಣ ಮಾಡಿಕೊಂಡಿದ್ದಾರೆ? ಎಂದು ಪ್ರಶ್ನಿಸಿದೆ.
ಟ್ವೀಟ್ನಲ್ಲಿ 'ತಲೆಮಾರುದೇಶಮಾರು' ಎಂದು ಹ್ಯಾಶ್ ಟ್ಯಾಗ್ ಹಾಕಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು. ಬಂಡೆಯನ್ನು ಈ ಹಿಂದೆ ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು.
ಇನ್ನೊಮ್ಮೆ ಬಂಡೆ ಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಧಿಕಾರದಲ್ಲಿದ್ದಾಗ ನಡೆದ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು ಎಂದು ಹೇಳಿದೆ. ಈ ಮೂಲಕ ಡಿ. ಕೆ. ಶಿವಕುಮಾರ್ ಅವರ ಬಳಿ ಇಡಿ ದಾಳಿ ಬಳಿಕವು ಸಾಕಷ್ಟು ಅಕ್ರಮ ಆಸ್ತಿ, ಹಣ ಇದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಅವಧಿಯಲ್ಲಿ ಸಚಿವರಾಗಿದ್ದ ಕೆ. ಜೆ. ಜಾರ್ಜ್ ಸಾಹೇಬರು ಮುಂದಿನ ಅದೇಷ್ಟೋ ತಲೆಮಾರುಗಳವರೆಗೆ ಹಾದು ಹೋಗುವಷ್ಟು ಸ್ಟೀಲ್ ಬ್ರಿಡ್ಜ್ ಕಾಮಗಾರಿಯ ಅಭಿವೃದ್ಧಿ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಇನ್ನು ಐದು ವರ್ಷ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯಮುಂದಿನ ಎಷ್ಟು ತಲೆಮಾರಿಗೆ ಬೇಕಾಗುವಷ್ಟು ಆಸ್ತಿ ಮಾಡಿಟ್ಟಿರಬಹುದು? ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಹಪಹಪಿಸುತ್ತಿದ್ದಾರೆ. ಈ ಮೂಲಕ ಮತ್ತೆಷ್ಟು ತಲೆಮಾರುಗಳಿಗೆ ಮಾಡಿಕೊಳ್ಳಲು ಯೋಜಿಸಿರಬಹುದು ಎಂದು ಬಿಜೆಪಿ ದೂರಿದೆ.
ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಅರ್ಕಾವತಿ ರೀಡು ಅವ್ಯವಹಾರ ನಡೆಯಿತು. ಖುದ್ದು ಸಿದ್ದರಾಮಯ್ಯ ಅವರೇ ಮುಂದೆ ನಿಂತು ನ್ಯಾಯಾಲಯದ ಆದೇಶ ತಿರುಚಿ ಅಕ್ರಮ ಎಸಗಿದರು. ಈ ನೂರಾರು ಕೋಟಿ ಮೊತ್ತದ ಹಗರಣದಿಂದ ಸಿದ್ದರಾಮಯ್ಯ 3-4 ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದು ನಿಜವಲ್ವೇ? ರಮೇಶ್ ಕುಮಾರ್ ಎಂದು ಬಿಜೆಪಿ ಪ್ರಶ್ನಿಸುವ ಮೂಲಕ ಹಲವು ಹಗರಣಗಳನ್ನು ಉಲ್ಲೇಖಿಸಿದೆ.
ಗಾಂಧಿ ಕುಟುಂಬದ ಹೆಸರಿನಲ್ಲಿ ನಾಯಕರೇ ಮೂರು ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದಾರೆ ಎಂದಾದರೆ, ಆ ನಕಲಿ ಗಾಂಧಿ ಕುಟುಂಬದವರು ಎಷ್ಟು ಮಾಡಿರಬಹುದು?. ಇದರ ಲೆಕ್ಕ ಕೇಳಲು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರೆ, ಹಣ ಕೂಡಿಟ್ಟ ನಾಯಕರು ಋಣ ತೀರಿಸಲು ಬೀದಿಗಿಳಿಯಲೇ ಬೇಕಲ್ಲವೇ? ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಲೇವಡಿ ಮಾಡಿದೆ.
ಸಾಂವಿಧಾನಿಕ ಹುದ್ದೆ ಅಲಂಕರಿಸಿದವರಿಂದ ಸತ್ಯ; ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ. ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು. ಅಂತವರು ಸುಳ್ಳು ಹೇಳಲು ಸಾಧ್ಯವೇ. ಅವರು ಸತ್ಯವನ್ನೇ ಹೇಳಿದ್ದಾರೆ. ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ ಎಂದು ಬಿಜೆಪಿ ಕುಟುಕಿದೆ.
Recommended Video