ಪ್ರಧಾನಿ + ಮಾಜಿ ಪ್ರಧಾನಿ + ಚುನಾವಣೆ = ಸ್ಕೆಚ್ ಹೀಗಿರಬಹುದಾ?
ಬೆಂಗಳೂರು, ಡಿಸೆಂಬರ್ 13: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಬಿಜೆಪಿಯು ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ಕರುನಾಡಿನಲ್ಲಿ ಕೇಸರಿ ಬಾವುಟ ಹಾರಿಸುವುದಕ್ಕೆ ಬಿಜೆಪಿ ನಾಯಕರು ರಾಜಕೀಯ ತಂತ್ರಗಾರಿಕೆ ಶುರುವಿಟ್ಟುಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆರೋಪ-ಪ್ರತ್ಯಾರೋಪದ ನಡುವೆ ರಾಜಕೀಯ ದಾಳ ಉರುಳಿಸುವುದಕ್ಕೆ ಕೇಂದ್ರದ ಬಿಜೆಪಿ ನಾಯಕರೇ ಅಖಾಡಕ್ಕೆ ಇಳಿದಂತೆ ತೋರುತ್ತಿದೆ.
ಕರ್ನಾಟಕವು ಈಗಾಗಲೇ ವಿಧಾನಸಭಾ ಚುನಾವಣಾ ವರ್ಷದಲ್ಲಿದೆ. 2023ರಲ್ಲಿ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ಲೆಕ್ಕಾಚಾರವನ್ನು ಹಾಕುತ್ತಿವೆ. ಇದರ ಮಧ್ಯೆ ಒಂದೇ ಒಂದು ಫೋಟೋ ರಾಜ್ಯ ರಾಜಕಾರಣದ ಚಿತ್ರಣವನ್ನು ಸಾರಿ ಹೇಳುತ್ತಿದೆ. ಮುಂದೇನು ಎನ್ನುವ ಬಿಜೆಪಿಗರ ಲೆಕ್ಕಾಚಾರಕ್ಕೆ ಪ್ರಧಾನಮಂತ್ರಿ ಕೊಟ್ಟಿರುವ ಸಂದೇಶದಂತೆ ತೋರುತ್ತಿದೆ. ಪ್ರಧಾನಿ ಮತ್ತು ಮಾಜಿ ಪ್ರಧಾನಿ ನಡುವಿನ ಭಾವಚಿತ್ರವು ರಾಜಕೀಯದಲ್ಲಿ ಭಾವನಾತ್ಮಕ ಬದಲಾವಣೆಗೆ ನಾಂದಿ ಹಾಡುತ್ತದೆಯೇ ಎಂಬ ಅನುಮಾವನ್ನು ಹುಟ್ಟು ಹಾಕುತ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಪ್ರಧಾನಿ ಮೋದಿಗೆ ದೇವೇಗೌಡರ ಬಗ್ಗೆ ವಿಶೇಷ ಅಭಿಮಾನ
ರಾಜ್ಯದ ಮಣ್ಣಿನ ಮಗ ಎನಿಸಿರುವ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಗೌರವವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಎದುರಾಗಿರುವ ವಿಧಾನಸಭೆ ಚುನಾವಣೆ ಮತ್ತು ರಾಜಕೀಯದಿಂದ ಈ ಬಾಂಧವ್ಯ ಹೊರತಾಗಿದೆ. ದೆಹಲಿ ಅಂಗಳಕ್ಕೆ ದೇವೇಗೌಡರು ಕಾಲಿಟ್ಟರೂ ಅಲ್ಲಿ ನರೇಂದ್ರ ಮೋದಿಯಿಂದ ಅನೇಕ ಬಾರಿ ಗೌರವಾತಿಥ್ಯವನ್ನು ಸ್ವೀಕರಿಸಿದ ಉದಾಹರಣೆಗಳಿವೆ. ಪ್ರತಿಬಾರಿ ರಾಜ್ಯಕ್ಕೆ ಕಾಲಿಟ್ಟ ಸಂದರ್ಭಗಳಲ್ಲಿ ಹಾಗೂ ಈ ಹಿಂದಿನ ರಾಜಕೀಯ ಭಾಷಣಗಳಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ದೇವೇಗೌಡರನ್ನು ಹಾಡಿ ಹೊಗಳಿದ್ದೂ ಇದೆ.

ಮೋದಿ ಭೇಟಿ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಟ್ವೀಟ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ. "ನಾನು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ಎಂದಿನಂತೆ, ಅವರು ನನ್ನನ್ನು ತುಂಬಾ ಪ್ರೀತಿಯಿಂದ ಬರಮಾಡಿಕೊಂಡರು. ಒಕ್ಕಲಿಗರ ಕುಂಚಿಟಿಗ ಉಪಜಾತಿಯನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದೆ. ಕಾವೇರಿ ನದಿ ನೀರು ಮತ್ತು ಹಾಸನ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆಯೂ ಚರ್ಚಿಸಿದ್ದೇನೆ. ಪ್ರಧಾನಿಯವರ ಸಮಯಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ," ಎಂದು ಟ್ವೀಟ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಜೆಡಿಎಸ್ ಪಂಚರತ್ನ ಯಾತ್ರೆಗೆ ಸಖತ್ ಸ್ಪಂದನೆ
ದಕ್ಷಿಣ ಕರ್ನಾಟಕ ಭಾಗದಲ್ಲಿ ತನ್ನದೇ ಸಾಮರ್ಥ್ಯವನ್ನು ಹೊಂದಿರುವ ಜೆಡಿಎಸ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಲಕ್ಷ್ಯ ನೆಟ್ಟಿದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆಯನ್ನು ನಡೆಸುತ್ತಿದ್ದಾರೆ. ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳ ಹೊರತಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಗೆ ಭಾರೀ ಜನಸ್ಪಂದನೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಕೇಂದ್ರ ನಾಯಕರು ಫುಲ್ ಅಲರ್ಟ್ ಆಗಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದರೇನು ಗತಿ ಎನ್ನುವ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಮುಂದೆ ಜೆಡಿಎಸ್ ಬೆಂಬಲವೇ ಗತಿ?
ಜೆಡಿಎಸ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸದಾ ಮೃದು ಧೋರಣೆಯನ್ನು ಪ್ರದರ್ಶಿಸುತ್ತಲೇ ಬಂದಿರುತ್ತಾರೆ. ಕರ್ನಾಟಕದಲ್ಲಿ ಭವಿಷ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಪಕ್ಷವು ಬೆಂಬಲವಾಗಿ ನಿಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ. 2023ರಲ್ಲಿ ಚುನಾವಣೆ ನಡೆದು ಆಗ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗದ ಪಕ್ಷದಲ್ಲಿ ಜೆಡಿಎಸ್ ಬೆಂಬಲವನ್ನು ಪಡೆದುಕೊಂಡು ಸರ್ಕಾರವನ್ನು ರಚಿಸುವ ಬಗ್ಗೆ ಬಿಜೆಪಿಯು ಯೋಜನೆ ಹಾಕಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಭೇಟಿಯು ಸಾಕಷ್ಟು ಮಹತ್ವ ಪಡೆದುಕೊಂಡಿದೆ.












Click it and Unblock the Notifications