ಸಿದ್ದು ಕೊಟ್ಟ ಏಟಿಗೆ ಪತರಗುಟ್ಟುತ್ತಿರುವ ಕರ್ನಾಟಕ ಬಿಜೆಪಿ!
ಬೆಂಗಳೂರು, ಜೂನ್ 21: ಸಿದ್ದರಾಮಯ್ಯ ಅವರು ಮತ್ತೊಮೆ ತಮ್ಮ ಚಾಣಾಕ್ಷ ರಾಜಕಾರಣದ ದಾಳ ಉರುಳಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ರಾಜ್ಯದಾದ್ಯಂತ ತಿರುಗಿಕೊಂಡು ಬಂದು, ಪರಿಶಿಷ್ಟರ ಮನೆಯಲ್ಲಿ ಉಂಡೆದ್ದು ಬಂದದ್ದನ್ನೆಲ್ಲ ಒಂದೇಟಿಗೆ ಸಿದ್ದು ಪಡ್ಚ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಮೂಗು ಹಿಡಿದಾದರೂ ರೈತರ ಸಾಲ ಮನ್ನಾ ಮಾಡಿಸ್ತೀನಿ ಎಂದು ಯಡಿಯೂರಪ್ಪನವರು ಎಲ್ಲೆಡೆ ಕೂಗಾಡಿ, ಕಿರುಚಾಡಿ ಮೈಲೇಜ್ ತೆಗೆದುಕೊಂಡು ಬಂದಿದ್ದರು. ಅಷ್ಟೇ ಅಲ್ಲ, ರೈತರನ್ನೆಲ್ಲ ಒಟ್ಟು ಮಾಡಿಕೊಂಡು ಬಂದು, ವಿಧಾನಸೌಧದ ಎದುರು ಪ್ರತಿಭಟನೆ ಮಾಡ್ತೀವಿ. ಆಗ ಹೇಗೆ ರೈತರ ಸಾಲ ಮನ್ನಾ ಮಾಡಲ್ಲ ನೋಡ್ತೀನಿ ಎಂದಿದ್ದರು.
ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ
ಯಡಿಯೂರಪ್ಪನವರು ಅದೆಷ್ಟು ಸಲ ಮೂಗು ಹಿಡಿಯುವ ಮಾತನಾಡಿದರೂ ಬಾಯಿ ಬಿಡದೆ ಸುಮ್ಮನಿದ್ದ ಸಿಎಂ ಸಿದ್ದರಾಮಯ್ಯ ಅವರು, ಈಗ ಏಕಾಏಕಿ ಸಾಲ ಮನ್ನಾ ಘೋಷಣೆ ಮಾಡಿದ್ದರ ಹಿಂದಿನ ಲೆಕ್ಕಾಚಾರ ಏನು ಗೊತ್ತೆ? ಸ್ಸಹಕಾರಿ ಬ್ಯಾಂಕ್ ಗಳಲ್ಲಿ ಐವತ್ತು ಸಾವಿರವರೆಗಿನ ರೈತರ ಕೃಷಿ ಸಾಲ ಮನ್ನಾ ಮಾಡುವುದು ಅಂದರೆ ಅದೇನು ಕಡಿಮೆ ಬಾಬತ್ತಿನದಲ್ಲ.
ಕೃಷಿ ಸಾಲ ಮನ್ನಾ ಮರೆತು ಬಿಡಿ, ಕೇಂದ್ರ ಬಿಡಿಗಾಸು ಕೊಡಲ್ಲ ಎಂದ ಜೇಟ್ಲಿ
ಹಾಗಿದ್ದರೆ ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಸಿದ್ದು ತಯಾರಿ ಹೇಗಿದೆ ಗೊತ್ತಾ?
ಅರುಣ್ ಜೇಟ್ಲಿ ಹೇಳಿದ ನಾಲ್ಕೈದು ದಿನಕ್ಕೆ ಸಾಲ ಮನ್ನಾ
ಸುಮ್ಮನೆ ಇದ್ದರಾದರೂ ಆಗ್ತಿತ್ತು. ಕೇಂದ್ರ ಸಚಿವ ಅರುಣ್ ಜೇಟ್ಲಿ ಯಾವುದೇ ಸಾಲ ಮನ್ನಾಗೆ ಕೇಂದ್ರದಿಂದ ಬಿಡಿಗಾಸೂ ಕೊಡಲ್ಲ ಅಂದರು. ಆ ಮಾತನಾಡಿದ ಬೆರಳೆಣಿಕೆ ದಿನಕ್ಕೆ ಸಿದ್ದರಾಮಯ್ಯ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಅಂದರೆ ಪ್ರತಿ ಪೈಸೆಯೂ ರಾಜ್ಯ ಸರಕಾರವೇ ಕೊಡುತ್ತಿದೆ ಎಂಬುದು ಜನರಿಗೆ ನಿಕ್ಕಿಯಾಯಿತು.
ಈಶು ಒಂಥರಾ, ಶೆಟ್ಟರ್ ಒಂಥರಾ
ಇನ್ನು ಮೊನ್ನೆ ಮೊನ್ನೆ ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪನವರು, ನೀವು ರೈತರ ಸಾಲ ಮನ್ನಾ ಮಾಡಿ. ಅದರ ಹೊರೆಯನ್ನು ಬಿಜೆಪಿ ಅಧಿಕಾರಕ್ಕೆ ಬಂದು ತೀರಿಸುತ್ತದೆ ಎಂದು ಸಿದ್ದರಾಮಯ್ಯನವರಿಗೆ ಹೇಳಿ ಪಕ್ಷವನ್ನು ಹೀರೋ ಮಾಡಿದ್ದರು. ಅಷ್ಟರಲ್ಲಿ ಬುಧವಾರ ಜಗದೀಶ್ ಶೆಟ್ಟರ್, ಸಾಲ ಮನ್ನಾ ಮಾಡಿದ ಹೊರೆಯನ್ನು ನೀವೇ ತೀರಿಸಿ, ಮುಂದಿನ ಸರಕಾರಕ್ಕೆ ಆನಿಸಬೇಡಿ ಎಂದಿದ್ದಾರೆ. ಏನು ಸ್ವಾಮಿ ಇದು ಒಂದೇ ಪಕ್ಷದೊಳಗೆ ಇಬ್ಬರು ಪ್ರಮುಖ ನಾಯಕರ ಮಧ್ಯೆ ಇಷ್ಟು ವ್ಯತ್ಯಾಸವೆ?
ಇಂದಿರಾ ಕ್ಯಾಂಟೀನ್ ಎಂಬ ಅನ್ನದ ಋಣ
ಇನ್ನು ಇಂದಿರಾ ಕ್ಯಾಂಟೀನ್ ನ ಬೆಂಗಳೂರಿನ ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಾ ತೊಂಬತ್ತೆಂಟು ವಾರ್ಡ್ ಗಳ ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತದೆ. ಅಗ್ಗದ ದರದಲ್ಲಿ ಊಟ-ತಿಂಡಿ ನೀಡುವ ಯೋಜನೆ ಇದು. ಅನ್ನ ಭಾಗ್ಯ, ಕ್ಯಾಂಟೀನ್ ಭಾಗ್ಯಗಳು ವೋಟು ತಂದುಕೊಡುವ ಲೆಕ್ಕಾಚಾರ ಇರುವುದಿಲ್ಲವೆ? ನಮ್ಮ ಜನ ಅನ್ನದ ಋಣ ಮರೆಯುತ್ತಾರಾ?
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ
ಇನ್ನು ಇತ್ತೀಚೆಗೆ ಲಿಂಗಾಯತ ಸಮಾಜದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸನ್ಮಾನ ಆಯೋಜಿಸಿದ್ದ ಸಂದರ್ಭದಲ್ಲಿ, ವೀರಶೈವ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸುವುದಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಆ ಜನಾಂಗದ ವೋಟುಗಳು ಎಷ್ಟು ಮುಖ್ಯವಾದವು, ಇಂಥ ಘೋಷಣೆಯಿಂದ ಕಾಂಗ್ರೆಸ್ ಗೆ ಹೇಗೆ ಅನುಕೂಲವಾಗಲಿದೆ ಎಂದು ಗೊತ್ತಾಗಲಿದೆ.
ಅನ್ನ, ಕೂಲಿ, ಮಕ್ಕಳ ಶಾಲೆ...
ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮುದ್ರಾ ಬ್ಯಾಂಕ್, ನೋಟು ನಿಷೇಧ...ಇಂಥ ಯಾವುದೇ ಯೋಜನೆಗಳು ತಳಮಟ್ಟದಲ್ಲಿ ಜೀವನ ನಡೆಸುತ್ತಿರುವವರನ್ನು ತಲುಪುವುದಿಲ್ಲ. ಅವೆಲ್ಲ ಮಧ್ಯಮ ವರ್ಗ ಮತ್ತು ಅದರ ಮೇಲ್ಪಟ್ಟವರಿಗೆ ತಗುಲುತ್ತವೆ, ತಲುಪುತ್ತವೆ. ಕೂಲಿ, ಅನ್ನ, ಸೂರು, ಬಸ್ಸು, ರಸ್ತೆ, ಆಸ್ಪತ್ರೆ...ಇಂಥವು ಹಸಿದವರ ಬೇಡಿಕೆಗಳು. ಮಕ್ಕಳಿಗೆ ಶಾಲೆ, ಮಧ್ಯಾಹ್ನದ ಊಟ, ಹಾಲು, ಮೊಟ್ಟೆ, ಕಡಿಮೆ ಬೆಲೆಯ ಅಕ್ಕಿ ಇಂಥವು ಸಿದ್ದರಾಮಯ್ಯನವರ ಟ್ರಂಪ್ ಕಾರ್ಡ್.
ಯಾವಾಗ ಏನು ಕೊಡಬೇಕು, ಯಾವಾಗ ಸುಮ್ಮನಿರಬೇಕು ಗೊತ್ತಿದೆ
ಶೇ ಎಪ್ಪತ್ತರಷ್ಟು ಮೀಸಲಾತಿಯನ್ನು ತರುವ ಆಲೋಚನೆ ಇದೆ ಎಂದಿರುವ ಸಿದ್ದರಾಮಯ್ಯ ಅವರ ಬತ್ತಳಿಕೆಯಲ್ಲಿ ಬಾಣಗಳೇನೂ ಬರಿದಾದಂತಿಲ್ಲ. ವೋಟು ಹಾಕುವ ಮತದಾರರಿಗೆ ಏನು ಕೊಡಬೇಕು? ಮಾತನಾಡುವವರು ಇರುವಾಗ ಸುಮ್ಮನಿರಬೇಕು ಎಂಬ ಪಾಠ ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲೇ ಗೊತ್ತಾಗಿದೆ.
ಜಾತಿ ಲೆಕ್ಕಾಚಾರದ ಪೈಲ್ವಾನ್ ಸಿದ್ದರಾಮಯ್ಯ
ಬರೀ ಯೋಜನೆಗಳಿಂದ ಯಾವುದೇ ಪಕ್ಷ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬರದೇ ಇರಬಹುದು. ಆದರೆ ತೀರಾ ಅಗತ್ಯ ಬಿದ್ದರೆ ಮತ್ತೊಬ್ಬರ ಜತೆ ದೋಸ್ತಿ ಮಾಡಿ ಸರಕಾರ ರಚಿಸುವಷ್ಟಕ್ಕೆ ಮೋಸ ಆಗುವುದಿಲ್ಲ ಅನ್ನೋದು ದೇವೇಗೌಡರ ಗರಡಿಯಲ್ಲಿ ಪೈಲ್ವಾನ್ ಆಗಿರುವ ಸಿದ್ದರಾಮಯ್ಯ ಅವರಿಗೆ ತಿಳಿಯದ್ದೇನಲ್ಲ. ಆ ಪಾಠಗಳದೇ ಪ್ರಾಕ್ಟಿಕಲ್ ಕ್ಲಾಸ್ ಈ ಬಾರಿ ಅವರು ಮಾಡುತ್ತಿದ್ದಾರೆ.