ಐಟಿ ದಾಳಿ ಸುಳಿವು 'ಪವರ್' ಫುಲ್ ಸಚಿವರಿಗೆ ಸಿಗಲಿಲ್ಲವೇ?
ಬೆಂಗಳೂರು, ಆ.2 : ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ಮುಖಂಡ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಪ್ರಭಾವಿ ಸಚಿವರಿಗೆ ತಮ್ಮ ಮನೆ ಮೇಲೆ ಐಟಿ ದಾಳಿ ನಡೆಯುವ ಬಗ್ಗೆ ಸುಳಿವು ಸಿಗಲಿಲ್ಲವೇ ಎಂಬುದು ಪ್ರಶ್ನೆ.
ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ
ಬುಧವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಡಿ.ಕೆ.ಶಿವಕುಮಾರ್ ಅವರ ಕನಕಪುರ, ಸದಾಶಿವನಗೆ, ದೆಹಲಿ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನಲ್ಲಿರುವ ಸಂಬಂಧಿಕರ ಮನೆ ಮತ್ತು ಡಿ.ಕೆ.ಶಿವಕುಮಾರ್ ಇದ್ದ ಬಿಡದಿ ಬಳಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಮೇಲೆಯೂ ದಾಳಿ ನಡೆದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಗುಪ್ತಚರ ಇಲಾಖೆ, ಗೃಹ ಇಲಾಖೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದೆ. ಆದರೂ, ದಾಳಿಯ ಬಗ್ಗೆ ಸುಳಿವು ಸಿಗಲಿಲ್ಲವೇ ಎಂಬುದು ಪ್ರಶ್ನೆ. ದಾಳಿಗೂ ಮುನ್ನವೇ ಈ ಮಾಹಿತಿ ಸೋರಿಕೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿದ್ದರು.
ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?
ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ದಾಳಿಗೆ ಬಳಸಿಕೊಂಡರೆ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದಿದ್ದರಿಂದ, ಕೇಂದ್ರಿಯ ಭದ್ರತಾಪಡೆಗಳನ್ನು ಅಧಿಕಾರಿಗಳು ಬಳಸಿಕೊಂಡರು. ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ಮಾಡುವಾಗ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಗಳ ನೆರವನ್ನು ಪಡೆದರು.
ಐಟಿ ದಾಳಿ ಸಂದರ್ಭದಲ್ಲಿ ನಿಯಮದಂತೆ ಸ್ಥಳೀಯ ಪೊಲೀಸ್ ನೆರವು ಪಡೆಯಬೇಕು. ಆದರೆ ನಿಯಮ ಉಲ್ಲಂಘಿಸಿ ಸಿಆರ್ ಪಿಎಫ್ ಸಿಬ್ಬಂದಿಯ ದುರ್ಬಳಕೆ. ಇದು ಖಂಡನೀಯ.#ದ್ವೇಷದರಾಜಕಾರಣ
— CM of Karnataka (@CMofKarnataka) August 2, 2017
ಎಲ್ಲಾ ವಾಹನಗಳ ತಪಾಸಣೆ : ರೆಸಾರ್ಟ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಲ್ಲಿನ ಎಲ್ಲಾ ವಾಹನಗಳನ್ನು ಪರಿಶೀಲಿಸಿದ್ದಾರೆ. ವಾಹನಗಳಲ್ಲಿ ಹಣವಿರಬಹುದು ಎಂದು ಶಂಕಿಸಿ ಪರಿಶೀಲನೆ ನಡೆಸಲಾಗಿದೆ. ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಗುಜರಾತ್ ನ ಎಲ್ಲಾ ಶಾಸಕರ ಬಳಿಯಿದ್ದ ಬಿಲ್ ಗಳನ್ನು ಪರಿಶೀಲಿಸಲಾಗಿದೆ.
ರೆಸಾರ್ಟ್, ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿದ ಸುಮಾರು 80 ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರೆಸಾರ್ಟ್ ನಿಂದ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವ ನಗರದ ನಿವಾಸಕ್ಕೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.