ಗೃಹ ಸಚಿವರಾಗಿ ಕೆಜೆ ಜಾರ್ಜ್ ಎಡವಿರುವುದು ಎಲ್ಲೆಲ್ಲಿ?

ಸಿದ್ದರಾಮಯ್ಯ ಸರಕಾರ ಎರಡೂವರೆ ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿಕೊಂಡಾಗ ಸಚಿವ ಸಂಪುಟದ ಬಟವಾಡೆಯಲ್ಲಿ ಅಚ್ಚರಿಯ ಪೋರ್ಟ್ ಫೋಲಿಯೋ ದಕ್ಕಿದ್ದು ಕೆಜೆ ಜಾರ್ಜ್ ಅವರಿಗೆ.

ಮುಖ್ಯಮಂತ್ರಿಯ ನಂತರದ ಆಯಕಟ್ಟಿನ ಸಚಿವ ಸ್ಥಾನವಾಗಿರುವ ಗೃಹ ಇಲಾಖೆಯ ಗುರುತರ ಜವಾಬ್ದಾರಿ ಜಾರ್ಜ್ ಅವರಿಗೆ ಸಿಕ್ಕಿದ್ದು ಹೈಕಮಾಂಡಿನ ಕೃಪಾಕಟಾಕ್ಷದಿಂದಲೇ ಎನ್ನುವ ಮಾತಿದೆ. (ಐಪಿಎಲ್, ಕೆಪಿಎಲ್ ನಿಂದಾಗಿ ಬೆಟ್ಟಿಂಗ್ ಅಧಿಕ)

ಈ ಹಿಂದೆ ವೀರೇಂದ್ರ ಪಾಟೀಲ್ ಸರಕಾರದಲ್ಲಿ ಸಾರಿಗೆ ಮತ್ತು ಬಂಗಾರಪ್ಪನವರ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಜಾರ್ಜ್, ಗೃಹ ಸಚಿವರಾದ ಮೇಲೆ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಮಾತು ಸಾರ್ವಜನಿಕರಿಂದ ಮತ್ತು ಸ್ವಪಕ್ಷೀಯರಿಂದಲೇ ಕೇಳಿ ಬರುತ್ತಿರುವ ದೂರು.

ಕೊಲೆ, ಸುಲಿಗೆ, ಸರಣಿ ಕಳ್ಳತನ, ಇರಾನಿಗಳ ಕಾಟ, ಲಿಂಗಭೇದವಿಲ್ಲದೇ ನಡೆಯುತ್ತಿರುವ ಅತ್ಯಾಚಾರ , ನೈತಿಕ ಪೊಲೀಸ್ ಗಿರಿ ಮುಂತಾದ ಘಟನೆಗಳಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅನ್ನೋದು ಎಲ್ಲಿದೆ ಸ್ವಾಮಿ ಎನ್ನುವಂತಾಗಿದೆ.

ಮಿತಭಾಷಿಯಾಗಿರುವ ಜಾರ್ಜ್ ಈ ರಾಜ್ಯ ಕಂಡ ಅತ್ಯಂತ ನಿಷ್ಪ್ರಯೋಜಕ ಗೃಹಮಂತ್ರಿ ಎಂದು ಬಿಜೆಪಿ ಮತ್ತು ಜೆಡಿಎಸ್ ಲೇವಡಿ ಮಾಡಿದ್ದುಂಟು. ಬಿಎಸ್ವೈ ಕಾಲದಲ್ಲಿ ಇದ್ದ ಹಾಗೇ ರಾಷ್ಟ್ರೀಯ ವಾಹಿನಿಗಳ ಟಾರ್ಗೆಟ್ ಅಷ್ಟಾಗಿ ಸಿದ್ದು ಸರಕಾರದ ಮೇಲೆ ಇಲ್ಲ ಎನ್ನುವುದೇ ಸರಕಾರಕ್ಕೆ ನೆಮ್ಮದಿ ತರುವಂತಹ ಸಂಗತಿ.

ಸಮಾಜದ್ರೋಹಿಗಳಿಗೆ ಖಡಕ್ ಸಂದೇಶ ರವಾನಿಸುವಲ್ಲಿ ಜಾರ್ಜ್ ವಿಫಲರಾದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವರ ಸಲಹೆಗಾರರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ನೇಮಕ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಕೆಂಪಯ್ಯ ನೇಮಕವನ್ನು ಸಮರ್ಥಿಸಿಕೊಂಡಿದ್ದರೂ ಕೂಡಾ.

ಜಾರ್ಜ್ ಅಧಿಕಾರಕ್ಕೆ ಬಂದ ನಂತರ ತನ್ನ ಮೇಲೆ ಬಂದಂತಹ ಕೆಲವೊಂದು ಆರೋಪಗಳು, ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯಗಳ ಪಟ್ಟಿ ಸ್ಲೈಡಿನಲ್ಲಿ..

ರಾಜ್ಯದ ಮಾಧ್ಯಮಗಳ ಮೇಲೆ ಗೂಬೆ

ರಾಜ್ಯದ ಮಾಧ್ಯಮಗಳ ಮೇಲೆ ಗೂಬೆ

ಅತ್ಯಾಚಾರದ ಸುದ್ದಿಗಳನ್ನು ರಾಜ್ಯ ಮಾಧ್ಯಮಗಳು ವೈಭವೀಕರಿಸುತ್ತಿವೆ. ಟಿಆರ್‌ಪಿಗಾಗಿ ಈ ಸುದ್ದಿಯನ್ನು ಸೆನ್ಸೇಷನಲ್ ಮಾಡುತ್ತಿದೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಅತ್ಯಾಚಾರದ ಬಗ್ಗೆ ಸಿಲ್ಲಿ ಸ್ಟೇಟ್ಮೆಂಟ್

ಅತ್ಯಾಚಾರದ ಬಗ್ಗೆ ಸಿಲ್ಲಿ ಸ್ಟೇಟ್ಮೆಂಟ್

ಕೆಲವು ದಿನಗಳ ಹಿಂದೆ ಟೆಂಪೋ ಟ್ರಾವೆಲರ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಜಾರ್ಜ್, ಇಬ್ಬರು ರೇಪ್ ಮಾಡಿದರೆ ಅದು ಹೇಗೆ ಗ್ಯಾಂಗ್ ರೇಪ್ ಆಗುತ್ತೆ. ನೀವಿದನ್ನು ಸಾಮೂಹಿಕ ಅತ್ಯಾಚಾರ ಎಂದು ಹೇಗೆ ಹೇಳುತ್ತೀರಾ? ಅವರೇನು ನಾಲ್ಕೈದು ಜನ ಇದ್ರಾ? ಕೃತ್ಯ ನಡೆಸಿದವರು ಇಬ್ಬರೇ. ಅದು ಹೇಗೆ ಸಾಮೂಹಿಕ ಅತ್ಯಾಚಾರವಾಗುತ್ತದೆ? ಎನ್ನುವ ಮತ್ತೊಂದು ವಿವಾದಕಾರಿ ಹೇಳಿಕೆಯನ್ನು ನೀಡಿದ್ದರು.

ಮದ್ಯಪಾನ ಮಾಡಿ ಮಗನಿಂದ ಪೊಲೀಸರ ಮೇಲೆ ಹಲ್ಲೆ

ಮದ್ಯಪಾನ ಮಾಡಿ ಮಗನಿಂದ ಪೊಲೀಸರ ಮೇಲೆ ಹಲ್ಲೆ

ಮದ್ಯಪಾನ ಮಾಡಿದ ತನ್ನ ಸ್ನೇಹಿತರನ್ನು ಬಿಡಿಸಲು ಕರ್ತವ್ಯನಿರತ ಪೊಲೀಸರ ಮೇಲೆಯೇ ಗೃಹ ಸಚಿವ ಜಾರ್ಜ್‌ ಅವರ ಪುತ್ರ ಹಲ್ಲೆ ನಡೆಸಿದ್ದಾರೆ. ಗೃಹ ಸಚಿವರು ಅತ್ಯಾಚಾರ ಪ್ರಕರಣಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್‌ ಒತ್ತಡದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾರ್ಜ್‌ ರಾಜೀನಾಮೆ ಪಡೆಯಲು ಅಸಮರ್ಥರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಷಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರವನ್ನೂ ಬರೆದಿದ್ದರು.

ಮಲ್ಲಿಕಾರ್ಜುನ ಬಂಡೆ ಶೂಟೌಟ್ ವಿವಾದ

ಮಲ್ಲಿಕಾರ್ಜುನ ಬಂಡೆ ಶೂಟೌಟ್ ವಿವಾದ

ಸಿಂಗಂ ಎಂದೇ ಹೆಸರು ಮಾಡಿದ್ದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕಲಬುರಗಿಯಲ್ಲಿ ಸುಫಾರಿ ಹಂತಕ ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗುಂಡೇಟು ತಿಂದು ಸಾವನ್ನಪ್ಪಿದ್ದರು. ಬಂಡೆ ಅವರ ಸಾವಿನ ಪ್ರಕರಣದಲ್ಲಿಯೂ ಗೃಹ ಸಚಿವರ ಅಸಮರ್ಥತೆ ಇದೆ ಎಂಬ ಆರೋಪ ಕೇಳಿಬಂದಿತ್ತು. ಬಂಡೆ ಸಾವಿನ ಪ್ರಕರಣವನ್ನು ಕೊನೆಗೆ ಸಿಐಡಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿತು.

ಪೊಲೀಸರ ಸಾಮೂಹಿಕ ವರ್ಗಾವಣೆ ವಿವಾದ

ಪೊಲೀಸರ ಸಾಮೂಹಿಕ ವರ್ಗಾವಣೆ ವಿವಾದ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳುಗಳಲ್ಲಿಯೇ ಪೊಲೀಸರ ಸಾಮೂಹಿಕ ವರ್ಗಾವಣೆ ನಡೆದಿತ್ತು. ಆಗ ರಾಜ್ಯಪಾಲರಾಗಿದ್ದ ಎಚ್ ಆರ್ ಭಾರದ್ವಾಜ್ ಅವರು ಇದರ ವಿರುದ್ದ ಅತೃಪ್ತಿ ವ್ಯಕ್ತಪಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದ ಅವರು ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಇದನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಕಿವಿ ಹಿಂಡಿದ್ದರು.

ಕಾರ್ಪೋರೇಶನ್ ಬ್ಯಾಂಕ್ ಎಟಿಎಂ ನಲ್ಲಿ ಹಲ್ಲೆ

ಕಾರ್ಪೋರೇಶನ್ ಬ್ಯಾಂಕ್ ಎಟಿಎಂ ನಲ್ಲಿ ಹಲ್ಲೆ

ಬೆಂಗಳೂರಿನ ಕಾರ್ಪೊರೇಶನ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದ ಜ್ಯೋತಿ ಉದಯ್ ಎನ್ನುವ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನವೆಂಬರ್ 19, 2013ರಂದು ಈ ಘಟನೆ ನಡೆದಿತ್ತು. ಘಟನೆ ನಡೆದು ಎರಡು ವರ್ಷವಾದರೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಡಿ ಕೆ ರವಿ ಅಸಹಜ ಸಾವು ಮತ್ತು ಎಂಬೆಸಿ ತೆರಿಗೆ ವಂಚನೆ

ಡಿ ಕೆ ರವಿ ಅಸಹಜ ಸಾವು ಮತ್ತು ಎಂಬೆಸಿ ತೆರಿಗೆ ವಂಚನೆ

ಮಾಜಿ ಕೋಲಾರದ ಜಿಲ್ಲಾಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿದ್ದ ಡಿ ಕೆ ರವಿ ಅಸಹಜ ಸಾವಿಗೂ, ಎಂಬೆಸಿ ಸಮೂಹಕ್ಕೂ ಸಂಬಂಧ ಇದೆ ಎನ್ನುವ ಸುದ್ದಿ ಹರಡಿತ್ತು. ಎಂಬೆಸಿ ಸಂಸ್ಥೆ ಜಾರ್ಜ್ ಒಡೆತನದ್ದು. ಎಂಬೆಸಿ ಗಾಲ್ಫ್‌ ಲಿಂಕ್‌ ಗೆ ತೆರಿಗೆ ವಂಚನೆ ಆರೋಪದಡಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿಲ್ಲ. ಎಂಬೆಸಿ ಸಮೂಹ ಸ್ವತಂತ್ರವಾದುದು. ಆ ಕಂಪೆನಿಗೆ ನೀಡಿರುವ ನೋಟಿಸ್‌ಗೂ ನನಗೂ ಯಾವ ರೀತಿಯಲ್ಲೂ ಸಂಬಂಧ ಇಲ್ಲ. ನಮ್ಮ ಕುಟುಂಬದಿಂದ ಯಾವುದೇ ತೆರಿಗೆ ಬಾಕಿ ಇಲ್ಲ ಎಂದು ಜಾರ್ಜ್ ಹೇಳಿಕೆ ಹೇಳಿದ್ದರು.

ಎಸ್ ಆರ್ ಹಿರೇಮಠ್

ಎಸ್ ಆರ್ ಹಿರೇಮಠ್

ಗೃಹ ಸಚಿವ ಜಾರ್ಜ್​ ವಿರುದ್ದ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ವಾಗ್ದಾಳಿ ನಡೆಸಿ, ಜಾರ್ಜ್​ ಭೂ ಮಾಫಿಯದ ಜೊತೆ ಕೈಜೋಡಿಸಿದ್ದು, ತಮ್ಮ ಪ್ರಭಾವ ಬಳಸಿ ಸರಕಾರಿ ಜಮೀನು ಅಕ್ರಮವಾಗಿ ಕಬಳಿಸಿದ್ದಾರೆ. ಕೂಡಲೆ ಅವರು ಗೃಹ ಸಚಿವ ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಎಸ್.ಆರ್ ಹಿರೇಮಠ್ ಒತ್ತಾಯಿಸಿದ್ದರು. ಆರೋಪ ಮಾಡುವುದು ಹಿರೇಮಠ್ ಅವರ ಹವ್ಯಾಸ, ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಜಾರ್ಜ್ ಪ್ರತಿಕ್ರಿಯೆ ನೀಡಿದ್ದರು.

ಒಂದಂಕಿ ಲಾಟರಿ ಮತ್ತು ಐಪಿಎಲ್ ಬೆಟ್ಟಿಂಗ್

ಒಂದಂಕಿ ಲಾಟರಿ ಮತ್ತು ಐಪಿಎಲ್ ಬೆಟ್ಟಿಂಗ್

ಒಂದಂಕಿ ಲಾಟರಿ ಮತ್ತು ಐಪಿಎಲ್ ಹಗರಣದಲ್ಲಿ ಬಹುದೊಡ್ಡ ದಂಧೆ. ಇದರಲ್ಲಿ ರಾಜಾಕಾರಣಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು, ಗೃಹ ಇಲಾಖೆಯವರು ಭಾಗಿಯಾಗಿದ್ದಾರೆ. ಇದರಿಂದ ಇಲಾಖೆಯ ಮೇಲೆ ಜನ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಒಂದಂಕಿ ಲಾಟರಿ ಬಗ್ಗೆ 2013ರಲ್ಲೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆಗಲೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಜಾರ್ಜ್ ನಿಭಾಯಿಸುವ ಗೃಹ ಇಲಾಖೆಯ ಮೇಲೆ ಆರೋಪ ಹೊರಿಸಿದ್ದರು. ನಂತರ ಲಾಟರಿ ಹಗರಣವನ್ನು ಸರಕಾರ ಸಿಬಿಐಗೆ ವಹಿಸಿತು.

ಇತರ ಘಟನೆಗಳು

ಇತರ ಘಟನೆಗಳು

ಸರಣಿ ಅತ್ಯಾಚಾರ, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಕೇಸ್, ತೀರ್ಥಹಳ್ಳಿ ನಂದಿತಾ ಸಾವಿನ ಪ್ರಕರಣ, ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ, ಉಳ್ಳಾಲದಲ್ಲಿ ನಡೆದ ಕೋಮು ಗಲಭೆ, ನರಭಕ್ಷಕ ಹುಲಿಯನ್ನು ಬೆಳಗಾವಿಯ ಖಾನಾಪುರ ಅರಣ್ಯಕ್ಕೆ ಬಿಟ್ಟದ್ದಕ್ಕೆ ಜಾರ್ಜ್ ಪುತ್ರ ರಾಣಾ ಜಾರ್ಜ್ ವಿರುದ್ಧ ಎಫ್ಐಆರ್, ಖೋಟಾನೋಟು ದಂಧೆ, ವಿಬ್ ಗಯಾರ್ ಮತ್ತು ಕೇಂಬ್ರಿಡ್ಜ್ ಶಾಲೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರದ ಘಟನೆ ಮುಂತಾದವು ಜಾರ್ಜ್ ರಾಜಕೀಯ ಬದುಕಿನಲ್ಲಿನ ಕಪ್ಪುಚುಕ್ಕೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+