ಮಹಾಲಕ್ಷ್ಮೀ ಲೇಔಟ್ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಕಸರತ್ತು!
ಬೆಂಗಳೂರು, ಜನವರಿ 17 : ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಗೆಲುವಿಗಾಗಿ ಕಾಂಗ್ರೆಸ್, ಬಿಜೆಪಿ ಸಿದ್ಧತೆ ಆರಂಭಿಸಿವೆ. ಕ್ಷೇತ್ರ ಜೆಡಿಎಸ್ ವಶದಲ್ಲಿದ್ದು ಕೆ.ಗೋಪಾಲಯ್ಯ ಶಾಸಕರು. ಕ್ಷೇತ್ರದಲ್ಲಿ ಪಕ್ಷ ಸಾಕಷ್ಟು ಪ್ರಬಲವಾಗಿದೆ.
ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರವಿದು. ಹಾಲಿ ಶಾಸಕರಾಗಿರುವ ಕೆ.ಗೋಪಾಲಯ್ಯ ಅವರೇ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ. ಗೋಪಾಲಯ್ಯ ಪತ್ನಿ ಹೇಮಲತಾ ಗೋಪಾಲಯ್ಯ ಬಿಬಿಎಂಪಿ ಸದಸ್ಯರು.
ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ನೆ.ಲ.ನರೇಂದ್ರ ಬಾಬು, ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಎಂ.ನಾಗರಾಜ್ ಬಿಜೆಪಿ ಸೇರಿದ್ದರಿಂದ ಕ್ಷೇತ್ರದಲ್ಲಿ ಪಕ್ಷದ ಬಲ ಹೆಚ್ಚಿದೆ.
2013ರ ಚುನಾವಣೆಯಲ್ಲಿ ಕೆ.ಗೋಪಾಲಯ್ಯ 66,127 ಮತಗಳನ್ನು ಪಡೆದು ಗೆದ್ದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ನೆ.ಲ.ನರೇಂದ್ರಬಾಬು ಅವರು ಈಗ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ನಿಂದ ಸಾರಿಗೆ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅಭ್ಯರ್ಥಿಯಾಗಬಹುದು ಎಂಬ ಸುದ್ದಿಗಳು ಹಬ್ಬಿವೆ.
7 ಬಿಬಿಎಂಪಿ ವಾರ್ಡ್ಗಳನ್ನು ಹೊಂದಿರುವ ಕ್ಷೇತ್ರ ಮಹಾಲಕ್ಷ್ಮೀ ಲೇಔಟ್. 4 ವಾರ್ಡ್ಗಳಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಇದು ಪಕ್ಷದ ಬಲ ಹೆಚ್ಚಿಸಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಯಾವ ತಂತ್ರ ಮಾಡುತ್ತವೆ? ಎಂದು ಕಾದು ನೋಡಬೇಕು.

ಪತಿ, ಪತ್ನಿಯಿಂದ ಬಿರುಸಿನ ಪ್ರಚಾರ
ಕೆ.ಗೋಪಾಲಯ್ಯ ಮತ್ತು ಹೇಮಲತಾ ಗೋಪಾಲಯ್ಯ ಅವರು ಕ್ಷೇತ್ರದಲ್ಲಿ ಈಗಾಗಲೇ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಹೇಮಲತಾ ಅವರು ಬಿಬಿಎಂಪಿಯ ಮಾಜಿ ಉಪ ಮೇಯರ್. ಮನೆ-ಮನೆಗೂ ತೆರಳಿ ಪತಿ ಮತ್ತು ಪತ್ನಿ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ಗಿಂತ ಮೊದಲೇ ಪ್ರಚಾರ ಆರಂಭಿಸಿದ್ದಾರೆ.

ನೆ.ಲ.ನರೇಂದ್ರಬಾಬು ಬಿಜೆಪಿಗೆ
ಕ್ಷೇತ್ರದ ಕಾಂಗ್ರೆಸ್ ನಾಯಕರಾದ ನೆ.ಲ.ನರೇಂದ್ರ ಬಾಬು, ಎಂ.ನಾಗರಾಜ್ ಸೇರಿದಂತೆ ಹಲವರು ಬಿಜೆಪಿ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಗಿದೆ. ಎಂ.ಶಿವರಾಜ್, ಡಾ.ಜಿ.ಪರಮೇಶ್ವರ ಅವರ ರಾಜಕೀಯ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಮುಂತಾದವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು.

ಹೈಕಮಾಂಡ್ ಮುಂದೆ ರೇವಣ್ಣ ಹೆಸರು
ವಿಧಾನಪರಿಷತ್ ಸದಸ್ಯ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಕಮಾಂಡ್ ಚಿಂತನೆ ನಡೆಸುತ್ತಿದೆ. ರೇವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಟಿಕೆಟ್ ಸಿಕ್ಕರೆ ಆಶ್ವರ್ಯವಿಲ್ಲ ಎನ್ನುವುದು ಸದ್ಯದ ಮಾಹಿತಿ.

ಬಿಜೆಪಿಯಿಂದ ಅಭ್ಯರ್ಥಿ ಯಾರು?
ಬಿಜೆಪಿಯಿಂದ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಮಾಜಿ ಉಪಮಹಾಪೌರ ಎಸ್.ಹರೀಶ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ಈಗಷ್ಟೇ ಪಕ್ಷ ಸೇರಿರುವ ನೆ.ಲ.ನರೇಂದ್ರಬಾಬು ಅವರಿಗೂ ಟಿಕೆಟ್ ಸಿಗಬಹುದು. (ಚಿತ್ರ : ಎಸ್ ಹರೀಶ್)

ಪಕ್ಷದ ಬಲ ಹೆಚ್ಚು
7 ಬಿಬಿಎಂಪಿ ವಾರ್ಡ್ಗಳನ್ನು ಹೊಂದಿರುವ ಕ್ಷೇತ್ರವಿದು. 4 ವಾರ್ಡ್ಗಳಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಎರಡು ವಾರ್ಡ್ಗಳಲ್ಲಿ ಕಾಂಗ್ರೆಸ್ ಮತ್ತು ಒಂದು ವಾರ್ಡ್ನಲ್ಲಿ ಮಾತ್ರ ಬಿಜೆಪಿ ಸದಸ್ಯರಿದ್ದಾರೆ. ಆದ್ದರಿಂದ, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲ ಹೆಚ್ಚಿದೆ.

ಯಾರಿಗೆ ಸಿಕ್ಕ ಮತವೆಷ್ಟು?
2013ರ ಚುನಾವಣೆಯಲ್ಲಿ ಕೆ.ಗೋಪಾಲಯ್ಯ 66,127 ಮತಗಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನೆ.ಲ.ನರೇಂದ್ರಬಾಬು 50,757 ಮತ, ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಹರೀಶ್ 23,545 ಮತಗಳನ್ನು ಪಡೆದಿದ್ದರು.











Click it and Unblock the Notifications