ಬಿಎಸ್ ಯಡಿಯೂರಪ್ಪ ಕೈಗೊಂಬೆಯಂತೆ ಕೆಲಸ ಮಾಡುವರೇ ಮುಖ್ಯಮಂತ್ರಿ ಬೊಮ್ಮಾಯಿ!?
ಬೆಂಗಳೂರು, ಆಗಸ್ಟ್ 27: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಹರಿದಾಡುತ್ತಿರುವ ಸುದ್ದಿಗಳಿಗೆ ಯಾವುದೇ ಅರ್ಥವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ಎನ್ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ತಮಗೆ ಮುಕ್ತ ಹಸ್ತವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಸಿಎಂ ಬದಲಾವಣೆ ಸುದ್ದಿಯನ್ನು ನಿರಾಕರಿಸಿದ್ದಾರೆ.
ತಮ್ಮ ಹಿಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಯಾವುದೇ ಮುನ್ಸೂಚನೆಯಿಲ್ಲದೇ ತೆಗೆದು ಹಾಕಲಾಗಿತ್ತು. ರಾಜ್ಯದಲ್ಲಿ ಮತ್ತೊಮ್ಮೆ ಅಂಥದ್ದೇ ಸನ್ನಿವೇಶ ಎದುರಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಇಂಥ ಹಲವು ರಾಜಕೀಯ ಮೇಲಾಟಗಳ ಕುರಿತು ಬಸವರಾಜ ಬೊಮ್ಮಾಯಿ ಕೊಟ್ಟ ಉತ್ತರದಲ್ಲಿ ಏನಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಪ್ರತಿದಿನವೂ ಭಾನುವಾರವೇ ಎಂಬ ಸಿಎಂ ಮಾತಿನ ಅರ್ಥವೇನು?
ಬಿಎಸ್ ಯಡಿಯೂರಪ್ಪರನ್ನು ಯಾವುದೇ ಮುನ್ಸೂಚನೆ ನೀಡದೇ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ಪಡೆದುಕೊಳ್ಳಲಾಯಿತು. ಅದೇ ರೀತಿ ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು. ಪ್ರತಿವಾರವೂ ಭಾನುವಾರ ಆಗುವುದಿಲ್ಲ. ಹೈಕಮಾಂಡ್ ನಾಯಕರು ತಮಗೆ ಮುಕ್ತ ಅವಕಾಶವನ್ನು ನೀಡಿದ್ದಾರೆ ಎಂದು ಹೇಳಿದರು. ಇನ್ನು ವಿರೋಧ ಪಕ್ಷಗಳು ದೂಷಿಸುವಂತೆ ತಾವು ಬಿಎಸ್ ಯಡಿಯೂರಪ್ಪನವರ ಕೈಗೊಂಬೆ ಎಂಬ ಆರೋಪವನ್ನು ನಿರಾಕರಿಸಿದರು. ಮಾಜಿ ಮುಖ್ಯಮಂತ್ರಿಯಿಂದ ಸ್ಫೂರ್ತಿ ಪಡೆಯುತ್ತೇವೆ. ಆದರೆ ದೈನಂದಿನ ಕಾರ್ಯಗಳಲ್ಲಿ ಹಿರಿಯ ನಾಯಕರು ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪ ಸುಳ್ಳು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬಸವರಾಜ ಬೊಮ್ಮಾಯಿ ಎಂಬುವವರು ಬಿಎಸ್ ವೈ ಕೈಗೊಂಬೆಯೇ?
"ಬಿಎಸ್ ಯಡಿಯೂರಪ್ಪ ಕಾರ್ಯಕ್ರಮದಿಂದ ನಾನು ಸ್ಫೂರ್ತಿ ಪಡೆಯುತ್ತೇನೆ. ಅವರು ಮಾಸ್ ಲೀಡರ್. ನನಗೆ ಆಡಳಿತಕ್ಕೆ ಸಹಾಯ ಮಾಡುವುದು ಅವರ ಪಾತ್ರವಾಗಿದೆ. ಹಾಗೆಂದ ಮಾತ್ರಕ್ಕೆ ನನ್ನ ದೈನಂದಿನ ವ್ಯವಹಾರಗಳಲ್ಲಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಾರೆ ಎಂಬ ಅರ್ಥವಲ್ಲ. ತಾವು ಬಿಎಸ್ ಯಡಿಯೂರಪ್ಪನವರ ಕೈಗೊಂಬೆ ಎಂಬ ಆರೋಪದಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಕಡೆಗೆ ಬೊಟ್ಟು
ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಮತ್ತು ಕೋಮು ಸಂಘರ್ಷಕ್ಕೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಘಟನೆಗಳೇ ಕಾರಣವಾಗುತ್ತದೆ. ಅಂದು ಹಿಂದೂಗಳ ಮೇಲೆ ನಡೆದ ದಾಳಿಯ ಪ್ರತಿಫಲಗಳು ಸಮಾಜದಲ್ಲಿ ಅಸಮಾಧಾನ ಮತ್ತು ಕೋಪೋದ್ವೇಗ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಅಧಿಕೃತವಾಗಿ ದೃಢಪಡಿಸಿದೆ. ಅದಾಗ್ಯೂ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಊಹಾಪೋಹಗಳು ಸತ್ಯವಲ್ಲ ಎಂದು ಅವರು ನಿರಾಕರಿಸಿದರು.

ಸಿಎಂ ತಮ್ಮನ್ನು ಅಂಪೈರ್ ಎಂದುಕೊಂಡಿದ್ದು ಏಕೆ?
ತಮ್ಮನ್ನು ಅಂಪೈರ್ ಎಂದು ಉಲ್ಲೇಖಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. 'ಇಷ್ಟು ಕೊಲೆಗಳ ನಂತರವೂ ಏನೂ ಆಗುವುದಿಲ್ಲ ಎಂದು ನೀವು ನಿರೀಕ್ಷಿಸುತ್ತೀರಾ? ನನ್ನದು ಅಂಪೈರ್ ಪಾತ್ರ. ನಾನು ಶೀಘ್ರದಲ್ಲೇ ಮುಸ್ಲಿಂ ಸಂತ್ರಸ್ತರ ಮನೆಗೆ ಭೇಟಿ ನೀಡುತ್ತೇನೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ ಸರ್ಕಾರ ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡರು. "ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮತಾಂತರಗಳು ನಡೆಯುತ್ತಿವೆ. ನನ್ನ ಶಾಸಕರ ತಾಯಿಯೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ," ಎಂದು ಅವರು ಉಲ್ಲೇಖಿಸಿದರು.

ಈಶ್ವರಪ್ಪ ರಾಜೀನಾಮೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಕರ್ನಾಟಕದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪರ ಬ್ಯಾಟ್ ಬೀಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲಾಗಿದೆ ಎಂದು ಹೇಳಿದರು. ಈ ಗುತ್ತಿಗೆದಾರರು ಮಾಡಿರುವ ಆರೋಪವು ರಾಜಕೀಯಪ್ರೇರಿತವಾಗಿದ್ದು, ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಪ್ರಕರಣ ನೈತಿಕ ಹೊಣೆಯನ್ನು ಹೊತ್ತು, ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದರು. ಈ ಭ್ರಷ್ಟಾಚಾರ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಭ್ರಷ್ಟಾಚಾರ ಆರೋಪ ಮಾಡುವ ಗುತ್ತಿಗೆದಾರರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
(ಕೃಪೆ: NDTV)












Click it and Unblock the Notifications