ಉಪಚುನಾವಣೆ: ಹೊಸಕೋಟೆಯಲ್ಲಿ ಎಂಟಿಬಿಗೆ ಗೆಲುವು ಸುಲಭದ ತುತ್ತೇನಲ್ಲ!
ಇನ್ನೂ, ಸರ್ವೋಚ್ಚ ನ್ಯಾಯಾಲಯದಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಬರಬೇಕಿದೆ, ಅದಾದ ನಂತರವಷ್ಟೇ ಉಪಚುನಾವಣೆಯ ಮಾತು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಕಸರತ್ತನ್ನು ಆರಂಭಿಸಿದೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ಗೆ ಗೆಲುವೇನು ಸುಲಭವಾಗಿ ದಕ್ಕಿರಲಿಲ್ಲ. ಬಿಜೆಪಿಯ ಶರತ್ ಬಚ್ಚೇಗೌಡ, ಜಿದ್ದಾಜಿದ್ದಿನ ಫೈಟ್ ಅನ್ನು ನೀಡಿದ್ದರು. ಇವರಿಬ್ಬರ ನಡುವೆ ಇದ್ದ ವೋಟ್ ಶೇರ್ ವ್ಯತ್ಯಾಸ ಕೇವಲ ಶೇ. 3.94. ಇನ್ನು ಜೆಡಿಎಸ್ಸಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು.
ಇದೆಲ್ಲಾ ಈಗ ಇತಿಹಾಸ, ಯಾಕೆಂದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಎಂಟಿಬಿ ನಾಗರಾಜ್, ಕಾಂಗ್ರೆಸ್ ನಿಂದ ಹೊರಬಂದು ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎಂದು ಹೇಳಿದ್ದ ಎಂಟಿಬಿಯ ನಿಷ್ಠೆ ಬಿಜೆಪಿಯ ಮೇಲಿದೆ ಎನ್ನುವುದು ಅತ್ಯಂತ ಸ್ಪಷ್ಟ.
ಮುಂದೆ ನಡೆಯಬೇಕಾದ ಉಪಚುನಾವಣೆಯಲ್ಲಿ ಒಂದೋ ಎಂಟಿಬಿ ಇಲ್ಲವೇ ಅವರ ಪುತ್ರ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವುದು ಖಚಿತ, ಹಾಗಾದರೆ, ಕ್ಷೇತ್ರದ ಪ್ರಭಾವಿ ಬಿಜಿಪಿ ನಾಯಕ, ಯುವ ಮುಖಂಡ ಶರತ್ ಬಚ್ಚೇಗೌಡ ಅವರ ರಾಜಕೀಯ ಕಥೆ ಏನು? ಇಲ್ಲೇ ಇರುವುದು, ಎಂಟಿಬಿಗೆ ತಲೆನೋವಿನ ಲೆಕ್ಕಾಚಾರ.

ಸಂಭಾವ್ಯ ನಾಲ್ಕು ಜನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಶರತ್ ಬಚ್ಚೇಗೌಡ
ಗಮನಿಸಬೇಕಾದ ಅಂಶವೇನಂದರೆ, ಹೊಸಕೋಟೆಯ ಸಂಭಾವ್ಯ ನಾಲ್ಕು ಜನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಶರತ್ ಬಚ್ಚೇಗೌಡ ಅವರ ಹೆಸರೂ ಇರುವುದು. ಆದರೆ, ಬಚ್ಚೇಗೌಡ್ರು, ತಮ್ಮ ಮಗನಿಗೇ ಟಿಕೆಟ್ ನೀಡಬೇಕೆಂದು, ಮುಖ್ಯಮಂತ್ರಿಯ ಯಡಿಯೂರಪ್ಪನವರಿಗೆ ಒತ್ತಡ ತರುತ್ತಿರುವುದು, ಬಿಎಸ್ವೈಗೆ ಮತ್ತು ಬಿಜೆಪಿಗೆ ಹೊಸ ತಲೆನೋವು ತಂದಿದೆ. ಡಿ ಕೆ ಶಿವಕುಮಾರ್ ಈಗಾಗಲೇ ಆಖಾಡಕ್ಕೆ ಇಳಿದಿದ್ದಾರೆ.

ಎಂಟಿಬಿ ಮತ್ತು ಬಚ್ಚೇಗೌಡ್ರು ಕುಟುಂಬದ ನಡುವೆ ನೇರ ಸ್ಪರ್ಧೆ
ಹೊಸಕೋಟೆಯಲ್ಲಿ ಎಂಟಿಬಿ ಮತ್ತು ಬಚ್ಚೇಗೌಡ್ರು ಕುಟುಂಬದ ನಡುವೆ ನೇರ ಸ್ಪರ್ಧೆ. 2013ರಲ್ಲಿ ಬಚ್ಚೇಗೌಡ್ರನ್ನು ಮತ್ತು 2018ರಲ್ಲಿ ಶರತ್ ಬಚ್ಚೇಗೌಡರನ್ನು ಎಂಟಿಬಿ ಸೋಲಿಸಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಚ್ಚೇಗೌಡ್ರಿಗೆ, ವೀರಪ್ಪ ಮೊಯ್ಲಿ ವಿರುದ್ದ ಹೊಸಕೋಟೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಲೀಡ್ ಸಿಕ್ಕಿತ್ತು. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಕೋಟೆ ಇಲ್ಲಿ ಬಲಗೊಳ್ಳುತ್ತಾ ಸಾಗುತ್ತಿದೆ. ಇದಕ್ಕೆ ಕಾರಣ, ಬಚ್ಚೇಗೌಡ ಎಂಡ್ ಫ್ಯಾಮಿಲಿ.

ಡಿಕೆಶಿ , ಶರತ್ ಅವರನ್ನು ಕಾಂಗ್ರೆಸ್ಸಿನತ್ತ ಸೆಳೆಯುವ ಕೆಲಸಗಳನ್ನು ಮಾಡುತ್ತಿದ್ದಾರೆ
ಎಂಟಿಬಿ ನಾಗರಾಜ್ ಅವರು ಬಿಜೆಪಿಗೆ ಬಂದರೆ ಅಲ್ಲಿನ ಬಿಜೆಪಿ ಕಾಯಕರ್ತರು ಏನು ಮಾಡಲಿದ್ದಾರೆ? ಶರತ್ ಬಚ್ಚೇಗೌಡರ ನಿಲುವೇನು ಎನ್ನುವುದು ಕುತೂಹಲ ಮೂಡಿಸಿದೆ. ಯಾಕೆಂದರೆ, ಒಕ್ಕಲಿಗ ವೋಟ್ ಬ್ಯಾಂಕ್. ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿದವರು ನಾವು, ನಮಗೇ ಟಿಕೆಟ್ ಕೊಡಬೇಕು ಎನ್ನುವುದು ಬಚ್ಚೇಗೌಡರ ವಾದ ಎಂದು ಹೇಳಲಾಗುತ್ತಿದೆ. ಇನ್ನು, ಡಿಕೆಶಿ ಬೇರೆ ದಾರಿಯ ಮೂಲಕ, ಶರತ್ ಅವರನ್ನು ಕಾಂಗ್ರೆಸ್ಸಿನತ್ತ ಸೆಳೆಯುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ.

ಎಂಟಿಬಿ ನಾಗರಾಜ್
ಕುಮಾರಸ್ವಾಮಿಯವರ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಡಿ ಕೆ ಶಿವಕುಮಾರ್, " ನನ್ನ ಮತ್ತು ಎಂಟಿಬಿ ನಡುವಿನ ಹೋರಾಟ ಇನ್ನೇನಿದ್ದರೂ, ರಾಜಕೀಯ ರಣರಂಗದಲ್ಲಿ, ಹೊಸಕೋಟೆಯಲ್ಲಿ ನನ್ನ ತಾಕತ್ ಅನ್ನು ತೋರಿಸುತ್ತೇನೆ" ಎಂದು ಹೇಳಿದ್ದಾರೆ. ಅದರಂತೇ, ಕಾರ್ಯೋನ್ಮುಖರಾಗಿದ್ದಾರೆ ಕೂಡಾ.. ಎಂಟಿಬಿಯವರನ್ನು ಬಗೆಬಗೆಯಾಗಿ ಮನವೊಲಿಸಿ, ಸಿದ್ದರಾಮಯ್ಯನವರ ಮುಂದೆ ತಂದು ಡಿಕೆಶಿ ನಿಲ್ಲಿಸಿದ್ದರೂ, ಆಗಿದ್ದು ಇನ್ನೊಂದು. ಈ ಸಿಟ್ಟು, ಅವಮಾನ, ಡಿಕೆಶಿಯವರ ಬಳಿ ಇನ್ನೂ ಜೀವಂತವಾಗಿ ಇದ್ದಂತಿದೆ.

ಎಂಟಿಬಿಗಾಗಲಿ ಅವರ ಕುಟುಂಬದವರಿಗಾಗಲಿ, ಗೆಲುವು ಸುಲಭದ ತುತ್ತೇನೂ ಅಲ್ಲ
ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ ತನ್ನತ್ತ ಸೆಳೆದರೆ, ಕ್ಷೇತ್ರದ ಚಿತ್ರಣವೇ ಬದಲಾಗಲಿದೆ, ಮಗ ಸ್ಪರ್ಧಿಸಿದರೆ ಬಚ್ಚೇಗೌಡ್ರು, ಶರತ್ ಪರ ಪ್ರಚಾರ ಮಾಡಬೇಕಾಗುತ್ತದೆ ಎನ್ನುವುದು ಡಿ ಕೆ ಶಿವಕುಮಾರ್ ಲೆಕ್ಕಾಚಾರ. ಹಾಗಾಗಿ, ಶರತ್ ಅವರ ಮಾವನ ಮೂಲಕ, ಡಿಕೆಶಿ, ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಶರತ್, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದರೆ, ಬಿಜೆಪಿ ಕಾರ್ಯಕರ್ತರೂ ಶರತ್ ಪರ ಕೆಲಸ ಮಾಡಬಹುದು. ಹಾಗಾಗಿ, ಎಂಟಿಬಿಗಾಗಲಿ ಅವರ ಕುಟುಂಬದವರಿಗಾಗಲಿ, ಹೊಸಕೋಟೆ ಉಪಚುನಾವಣೆ ಗೆಲುವು ಸುಲಭದ ತುತ್ತೇನೂ ಅಲ್ಲ.












Click it and Unblock the Notifications