ಕೋಲಾರ : ಮರ್ಯಾದಾ ಹತ್ಯೆ, ತಂದೆಯಿಂದ ಮಗಳ ಕೊಲೆ
ಕೋಲಾರ, ಮೇ 23 : ಕೋಲಾರದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳ ಹತ್ಯೆ ಮಾಡಿದ್ದಾನೆ. ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿಯಾ ರೆಡ್ಡಿ (17) ತಂದೆಯಿಂದಲೇ ಕೊಲೆಯಾದವಳು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಮಟಂಪಲ್ಲಿ ಗ್ರಾಮದ ಬೈರಾ ರೆಡ್ಡಿ ಭಾನುವಾರ ರಾತ್ರಿ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. [ಮಂಡ್ಯ : ಮೋನಿಕಾಳದ್ದು ಮರ್ಯಾದಾ ಹತ್ಯೆ]

ಪ್ರಿಯಾ ರೆಡ್ಡಿ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಮನೆಯವರು ಆಕೆಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದ್ದರು. ಆದರೆ, ಆಕೆ ಕೇಳಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ಬಳಿಕ ಬೈರಾ ರೆಡ್ಡಿ ಮಗಳನ್ನು ಕೊಲೆ ಮಾಡಿದ್ದಾನೆ. [ಕರ್ನಾಟಕವನ್ನು ತಲ್ಲಣಿಸುವಂತೆ ಮಾಡಿರುವ ಮರ್ಯಾದಾ ಹತ್ಯೆಗಳು]
ಗ್ರಾಮದ ವೆಂಕಟರಾಮ ರೆಡ್ಡಿ ಎಂಬುವವರು ಗೌನಿಪಲ್ಲಿ ಪೊಲೀಸ್ ಠಾಣೆಗೆ ಮರ್ಯಾದಾ ಹತ್ಯೆ ಕುರಿತು ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಬೈರಾ ರೆಡ್ಡಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. [ರಾಮನಗರದಲ್ಲಿ ಮರ್ಯಾದಾ ಹತ್ಯೆ, ಪೋಷಕರ ಬಂಧನ]
ಬಡ ಕುಟುಂಬ : ಪ್ರಿಯಾ ರೆಡ್ಡಿಯ ತಂದೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ತಾಯಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಪ್ರಿಯಾ ರೆಡ್ಡಿ ಎಸ್ಎಸ್ಎಲ್ಸಿ ಓದುವಾಗಲೇ ಬೋವಿ ಜನಾಂಗದ ಹುಡುಗನ ಪರಿಚಯವಾಗಿತ್ತು. ವಿಜಯಾದ್ರಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪಾಸಾಗಿದ್ದ ಅವಳು ಈ ಬಾರಿ ದ್ವಿತೀಯ ಪಿಯುಸಿಗೆ ಹೋಗಬೇಕಿತ್ತು.
ಪ್ರಿಯಾ ರೆಡ್ಡಿ ಬೋವಿ ಜನಾಂಗದ ಹುಡುಗನನ್ನು ಪ್ರೀತಿಸುತ್ತಿದ್ದ ವಿಷಯ ಆಕೆಯ ಅಣ್ಣ ಶೇಖರ ರೆಡ್ಡಿಗೆ ತಿಳಿದಿತ್ತು. ಆತ ಈ ಕುರಿತು ಬುದ್ಧಿವಾದ ಹೇಳಿದ್ದ. ಆದರೆ, ಆಕೆ ಅದನ್ನು ಕೇಳಿರಲಿಲ್ಲ. ಶೇಖರ ರೆಡ್ಡಿ ಈ ಕುರಿತು ತಾಯಿಗೂ ಮಾಹಿತಿ ನೀಡಿದ್ದ. ನಂತರ ಕುಟುಂಬವರಿಗೆ ವಿಷಯ ತಿಳಿದಿತ್ತು.
ತಂದೆ-ತಾಯಿಯೂ ಈ ಕುರಿತು ಬುದ್ಧಿವಾದ ಹೇಳಿದ್ದರು. ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದೇವೆ. ಪ್ರೀತಿ ಪ್ರೇಮ ಬಿಡು ಸಂಪ್ರದಾಯದಂತೆ ಮದುವೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೂ ಪ್ರಿಯಾ ಕೇಳಿರಲಿಲ್ಲ. ಭಾನುವಾರವೂ ಮನೆಯಲ್ಲಿ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ನಂತರ ಆಕೆಯ ಹತ್ಯೆ ನಡೆದಿದೆ.












Click it and Unblock the Notifications