ಮಾಜಿ ಸಚಿವ ರಮೇಶ್ ಜಾರಕಿಹೊಳಿ 'ಸಿಡಿ' ಬಿಡುಗಡೆ ತನಿಖೆ ಆರಂಭ!
ಬೆಂಗಳೂರು, ಮಾ. 11: ತಮ್ಮ ಕುರಿತು ಬಿಡುಗಡೆಯಾಗಿರುವ ವಿಡಿಯೋ ಸಿಡಿ ಹಿಂದೆ ಷಡ್ಯಂತ್ರ ಇದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ರ ಬರೆದಿದ್ದರು, ಅವರ ಪತ್ರದ ಆಧಾರದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಸಿಡಿ ಬಿಡುಗಡೆ ಹಿಂದೆ ಷಡ್ಯಂತ್ರ ಇದೆ ಎಂದು ಪತ್ರ ಬರೆದಿದ್ದರು. ಹೀಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ ಎಂದಿದ್ದಾರೆ.
ಇಂತಿಷ್ಟೇ ದಿನದಲ್ಲೆ ತನಿಖೆ ಮುಗಿಸಿ ಎಂದು ಸಮಯ ನಿಗದಿ ಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಪೊಲೀಸರಿಗೆ ಪೂರ್ಣ ಸ್ವತಂತ್ರ ಕೊಟ್ಟದ್ದೇವೆ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ ಎಂದು ಶೀಘ್ರವಾಗಿ ತನಿಖೆ ನಡೆಸಿ ವರದಿ ಕೊಡಲು ಹೇಳಿದ್ದೇವೆ ಎಂದರು.
ಎಸ್ ಐ ಟಿ ತಂಡ ಸಂಪೂರ್ಣ ತನಿಖೆ ನಡೆಸುತ್ತಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಾಪಸ್ ಪಡೆದಿದ್ದು, ಎಲ್ಲವನ್ನೂ ಎಸ್ಐಟಿ ತನಿಖೆಯಲ್ಲಿ ಪರಿಗಣಿಸುತ್ತದೆ. ರಮೇಶ್ ಜಾರಕಿಹೊಳಿ ಪತ್ರದ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆಸಿ, ತನಿಖೆಯಲ್ಲಿ ಏನು ಬೆಳವಣಿಗೆ ಆಗುತ್ತದೆ ಎನ್ನುವುದನ್ನು ನೋಡಿ ಅವಶ್ಯಕತೆ ಬಿದ್ದರೆ ಎಫ್ಐಆರ್ ದಾಖಲಾಗುತ್ತದೆ ಎಂದರು.
Recommended Video
ನಕಲಿ ಸಿಡಿ ಆದ ಮೇಲೆ ತನಿಖೆ ಏಕೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಸಿದ ಬೊಮ್ಮಾಯಿ, ನಕಲಿ ಸಿಡಿ ಮಾಡಿದವರು ಯಾರು? ಅದರ ಹಿನ್ನೆಲೆಯಲ್ಲಿ ಯಾರು ಕೆಲಸ ಮಾಡಿದ್ದಾರೆ? ಎಲ್ಲೆಲ್ಲಿ ಸಿಡಿ ಮಾಡಲಾಗಿದೆ? ಎಲ್ಲವೂ ತನಿಖೆ ಆಗಬೇಕು. ಶರ್ಟ್, ಪ್ಯಾಂಟ್ ಬಿಚ್ಚಲಿಕ್ಕೆ ಕಾಂಗ್ರೆಸ್ ಪಕ್ಷದವರು ಕಾರಣವಾ? ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತದೆ. ಎಲ್ಲಾ ಆಯಾಮ ತನಿಖೆ ನಡೆಯುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.