ಪ್ರಜ್ವಲ್ ಪ್ರಕರಣಕ್ಕೆ ಡಿ ಕೆ ಶಿವಕುಮಾರ್ ಖಳನಾಯಕ: ರಾಜೀನಾಮೆಗೆ ಆಗ್ರಹ
ಬೆಂಗಳೂರು, ಮೇ 08: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಂಚಿದ ಪಿತೂರಿ ಆರೋಪಕ್ಕೆ ಗುರಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಒತ್ತಾಯ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಜೆಡಿಎಸ್ ಕಚೇರಿ ಜೆಪಿ ಭವನದ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣಕ್ಕೆ ಡಿ ಕೆ ಶಿವಕುಮಾರ್ ಖಳನಾಯಕ. ಅಶ್ಲೀಲ ವಿಡಿಯೋಗಳನ್ನು ಯಾರು ಸೋರಿಕೆ ಮಾಡಿದರು ಎನ್ನುವ ಅಂಶವನ್ನು ಬಿಜೆಪಿ ನಾಯಕ, ವಕೀಲ ದೇವರಾಜ್ ಗೌಡ ಅವರು ಬಹಿರಂಗ ಮಾಡಿದ್ದಾರೆ. ಅವರು ನೇರವಾಗಿಯೇ ಸಾಕ್ಷಿ ಸಮೇತ ಡಿಕೆಶಿ ಹೆಸರು ಹಾಗೂ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರ ಹೆಸರನ್ನು ಹೇಳಿದ್ದಾರೆ ಎಂದರು.

ಇಷ್ಟು ಸೂಕ್ಷ್ಮ ಪ್ರಕರಣದ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ಉಪ ಮುಖ್ಯಮಂತ್ರಿ, ರಾಜಕೀಯ ಸ್ವಾರ್ಥಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು, ಅದಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಧಕ್ಕೆ ಉಂಟು ಮಾಡುವ ಏಕೈಕ ಉದ್ದೇಶದಿಂದ ಈ ಸಂಚು ನಡೆಸಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಜೆಡಿಎಸ್ ಕಾರ್ಯಕರ್ತರು ಡಿಕೆಶಿ ವಿರುದ್ಧ ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಪಕ್ಷದ ನೂರಾರು ಮಹಿಳಾ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ತಂದೆ ತಾಯಿ ನೋವಿನಲ್ಲಿದ್ದಾರೆ: ಕುಮಾರಸ್ವಾಮಿ
ನಮ್ಮ ತಂದೆ ತಾಯಿ ನೋವಿನಲ್ಲಿದ್ದಾರೆ. ಅವರನ್ನು ನೋಡಲು ಹೋದರೆ ಸಿಎಂ ಆದವರು, ಪ್ರಜ್ವಲ್ ಮತ್ತು ರೇವಣ್ಣ ಅವರನ್ನು ರಕ್ಷಣೆ ಮಾಡಲು ಕುಮಾರಸ್ವಾಮಿ, ದೇವೇಗೌಡರು ವಕೀಲರ ಜತೆ ಸಮಾಲೋಚನೆ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. " ಮನುಷ್ಯರೇನ್ರಿ ನೀವು? ಕುಮಾರಸ್ವಾಮಿ -ರೇವಣ್ಣ ಕುಟುಂಬದ ಸಂಘಟಿತ ಪಾಪ ಎಂದು ಹೇಳಿದ್ದೀರಿ. ನಮ್ಮ ಮನೆಗಳ ಮುಂದೆ ಇದ್ದ ಕ್ಯಾಮೆರಾಗಳ ವಿಡಿಯೋಗಳನ್ನು ತರಿಸಿ ನೋಡಿ. ಯಾವ ವಕೀಲರು ಬಂದಿದ್ದರು ಎನ್ನುವುದು ಗೊತ್ತಾಗುತ್ತದೆ " ಎಂದು ಕಿಡಿ ಕಾರಿದರು ಕುಮಾರಸ್ವಾಮಿ ಅವರು.
ತಂದೆ ತಾಯಿ ಬಾಂಧವ್ಯ ನಿಮಗೆ ಗೊತ್ತಿಲ್ಲದೇ ಇಲ್ಲರಬಹುದು. ಆದರೆ ನಮಗೆ ಆ ಬಾಂಧವ್ಯ ಇದೆ. ಮಾತೇತ್ತಿದರೆ ದೇವೆಗೌಡರ ನಿವಾಸ ಅಂತಿರಾ..? ಅದು ದೇವೆಗೌಡರ ನಿವಾಸ ಅಲ್ಲ, ಅದು ಅವರ ಮಗಳ ಮನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತೆಗೆದು ಗದ್ದುಗೆ ಹಿಡಿಯಲು ಈ ಪ್ರಕರಣ ಬಳಸುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಅದಕ್ಕೆ ನಾನು ಬಿಡಲ್ಲ. ರಾಜಿಗೆ ಒಳಗಾಗಲ್ಲ. ವಕೀಲ ದೇವರಾಜೇಗೌಡರನ್ನ ಏಕೆ ಕರೆಸಿದ್ದೀರಿ? ಅವರನ್ನು ಏಕೆ ಕರೆಸಿದ್ದು? ಈಗ ಅವರನ್ನೇ ಇದರಲ್ಲಿ ಸಿಲುಕಿಸಲು ಸಂಚು ಮಾಡುತ್ತಿದ್ದೀರಿ. ಇಡೀ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪಾತ್ರದ ದೊಡ್ಡದು. ವಿಡಿಯೋಗಳನ್ನು ಲೀಕ್ ಮಾಡಿದವರು ಅವರೇ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೊ ಅಥವಾ ನ್ಯಾಯಾಂಗ ತನಿಖೆಗೆ ಕೊಡಬೇಕು. ಡಿಕೆ ಶಿವಕುಮಾರ್ ಅವರನ್ನ ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ ಅವರು; ಈ ವಿಷಯವನ್ನು ಇಲ್ಲಿಗೆ ಬಿಡಲ್ಲ ಎಂದರು.












Click it and Unblock the Notifications