ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಫೆ.15ರಂದು ರಾಜ್ಯವ್ಯಾಪಿ ಪ್ರತಿಭಟನೆ
ಬೆಂಗಳೂರು, ಫೆ.11: ರಾಜ್ಯಾದ್ಯಂತ ಯೋಜಿತವಾಗಿ ನಡೆಯುತ್ತಿರುವ ಕೋಮು ವಿಭಜನಾಕಾರಿ ಕೃತ್ಯಗಳನ್ನು ಖಂಡಿಸಿ, ಸೌಹಾರ್ದತೆ ಕಾಪಾಡಲು ವಿಫಲವಾಗಿರುವ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ, ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಮತ್ತು ಜನ ಸಮುದಾಯದಲ್ಲಿ ಸೌಹಾರ್ದತೆ ರಕ್ಷಣೆಗಾಗಿ ಅಗತ್ಯ ಕ್ರಮ ವಹಿಸಲು ಆಗ್ರಹಿಸಿ ರಾಜ್ಯಾದ್ಯಂತ ಫೆ.15 ರಂದು ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ವ್ಯಕ್ತಪಡಿಸಲು ಸಂಯುಕ್ತ ಹೋರಾಟ-ಕರ್ನಾಟಕ ತನ್ನ ಎಲ್ಲಾ ಸಹಭಾಗಿ ಸಂಘಟನೆಗಳಿಗೆ ಹಾಗೂ ರಾಜ್ಯದ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ ಯುವಜನರಿಗೆ ಕರೆ ನೀಡಿದೆ.
ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿ ಹಿನ್ನೆಲೆಯಲ್ಲಿ ರಾಜ್ಯದ ರೈತರು ರಾಜ್ಯ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸುತ್ತಿದ್ದಾರೆ. ರಾಜ್ಯ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ತಲೆ ಎತ್ತುತ್ತಿರುವ ಖಾಸಗಿ ಕೃಷಿ ಮಾರುಕಟ್ಟೆಗಳ ವಿರುದ್ಧ ಬೆಳಗಾವಿ ಮುಂತಾದ ಕಡೆ ಪ್ರತಿಭಟನೆಗಳು ಎದ್ದಿವೆ. ರಾಗಿ -ಭತ್ತ ಖರೀದಿ ಆಗದೇ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ರಾಜ್ಯದ ರೈತರು ತಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸದ ಕಾರಣ ಸ್ವತಃ ಮುಖ್ಯಮಂತ್ರಿ ತವರು ಜಿಲ್ಲೆ ಸೇರಿದಂತೆ ಚುನಾವಣಾ ಹಿನ್ನಡೆ ಅನುಭವಿಸುತ್ತಿದ್ದಾರೆ. ನಿರುದ್ಯೋಗದ ವಿರುದ್ಧ ಆತಿಥಿ ಉಪನ್ಯಾಸಕರು ಸೇರಿದಂತೆ ಯುವಜನರು ಹೋರಾಟಕ್ಕಿಳಿದಿದ್ದಾರೆ.
ನಾರಾಯಣ ಗುರುಗಳ ಸ್ಥಬ್ದ ಚಿತ್ರ, ಡಾ.ಬಿಆರ್ ಅಂಬೇಡ್ಕರ್ ರವರ ಭಾವಚಿತ್ರ ತೆರವು ಘಟನೆಗಳಿಂದ ಸರ್ಕಾರ ಮುಖಭಂಗಕ್ಕೀಡಾಗಿದೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚಲು ಸಂಘ ಪರಿವಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅನಗತ್ಯ ವಿವಾದವನ್ನು ಸೃಷ್ಟಿಸಿ ಶಾಲಾ /ಕಾಲೇಜುಗಳ ಶಾಂತಿಗೆ ಭಂಗ ತಂದಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಅಪಾದಿಸುತ್ತದೆ.

ಕೆಲವು ವಿದ್ಯಾರ್ಥಿನಿಯರು ಹಿಜಾಬ್ (ತಲೆವಸ್ತ್ರ) ಧರಿಸುವುದು ಹಲವಾರು ವರ್ಷಗಳಿಂದ ಸಮವಸ್ತ್ರದ ಭಾಗವಾಗಿಯೇ ಬಂದಿದೆ. ವಿದ್ಯಾರ್ಥಿನಿಯರು ಸಮವಸ್ತ್ರ ದ ಜೊತೆಗೆ ಹಿಜಾಬ್ (ತಲೆವಸ್ತ್ರ) ಧರಿಸುವ ಪರಂಪರೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಸಮವಸ್ತ್ರದ ಬಣ್ಣಕ್ಕೆ ಒಪ್ಪುವ ತಲೆವಸ್ತ್ರ ವನ್ನು ನಿಗದಿಪಡಿಸಿರುವುದೂ ಇದೆ. ಹೀಗಾಗಿ ಸಾಮಾನ್ಯ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಸಂಘ ಪರಿವಾರದ ಅಪಪ್ರಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಅಭಿಪ್ರಾಯಪಡುತ್ತದೆ. ಇದೇ ಸಂದರ್ಭದಲ್ಲಿ ಹಿಜಾಬ್ ಪ್ರಶ್ನೆಯನ್ನು ಮುಂದೆ ಮಾಡಿ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿರುವ ಕೆಲವು ಮುಸ್ಲಿಂ ಮೂಲಭೂತವಾದಿ ಶಕ್ತಿಗಳ ಪ್ರಯತ್ನಗಳನ್ನು ಸಂಯುಕ್ತ ಹೋರಾಟ-ಕರ್ನಾಟಕ ಖಂಡಿಸುತ್ತದೆ.
ಸಾಮಾನ್ಯವಾಗಿ ದುರ್ಬಲ ವರ್ಗದ ಹೆಣ್ಣು ಮಕ್ಕಳು, ಅದರಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುವುದೇ ಕ?ಕರವಾಗಿರುವಾಗ, ಕೆಲವು ಚೌಕಟ್ಟುಗಳಿಗೆ ಒಳಪಟ್ಟು ಶಾಲಾ/ಕಾಲೇಜುಗಳಿಗೆ ಬರುತ್ತಾರೆ. ಅವರ ಶಿಕ್ಷಣಾಸಕ್ತಿಯನ್ನು ಬೆಂಬಲಿಸುವ ಮನೋಭಾವವನ್ನು ಎಲ್ಲಾ ವಿದ್ಯಾರ್ಥಿಗಳಲ್ಲೂ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಅದ್ದರಿಂದ ಹಿಜಾಬ್ ಪ್ರಶ್ನೆಯನ್ನು ಕೋಮು ಪ್ರಶ್ನೆಯನ್ನಾಗಿ ಬಿಂಬಿಸುವ ಪ್ರಯತ್ನಗಳನ್ನು ಸೋಲಿಸಬೇಕು ಎಂದು ಸಂಯುಕ್ತ ಹೋರಾಟ-ಕರ್ನಾಟಕ ರಾಜ್ಯದ ಎಲ್ಲಾ ಜಾತ್ಯಾತೀತ, ಪ್ರಗತಿಪರ, ಪ್ರಜಾಸತ್ತಾತ್ಮಕ ಶಕ್ತಿಗಳಲ್ಲಿ ಮನವಿ ಮಾಡುತ್ತದೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದರ ನೇರ ಹೊಣೆಗಾರಿಕೆ ಗೃಹ ಸಚಿವರದ್ದಾಗಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಂಯುಕ್ತ ಹೋರಾಟ-ಕರ್ನಾಟಕ ಆಗ್ರಹಿಸುತ್ತದೆ.
ಕರ್ನಾಟಕದ ಹಿಜಾಬ್ ಕೇಸ್: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು (ಭಾಗ್ವಾ) ಅಥವಾ ಬೇರಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ. ಪ್ರಕರಣದ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ಜಾರಿಯಲ್ಲಿದೆ.
"ನಮ್ಮದು ಹಲವು ಸಂಸ್ಕೃತಿಗಳನ್ನು ಒಳಗೊಂಡ ಬಹುಸಂಸ್ಕೃತಿಯ ನಾಡು ಎಂದು ವಿವರಿಸುವ ಅಗತ್ಯವಿಲ್ಲ. ಜಾತ್ಯತೀತವಾದ ನಮ್ಮ ರಾಷ್ಟ್ರವು ಯಾವುದೇ ಒಂದು ನಿರ್ದಿಷ್ಟ ಧರ್ಮದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪ್ರಜೆಯು ತಮ್ಮ ಇಚ್ಛೆಯ ನಂಬಿಕೆ ಪಾಲಿಸುವ ಹಕ್ಕು ಹೊಂದಿದ್ದಾರೆ ಎಂಬುದು ಸತ್ಯ. ಅದಾಗ್ಯೂ, ಅದು ಪರಿಪೂರ್ಣವಾಗಿಲ್ಲ. ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಸಂವಿಧಾನದಲ್ಲಿ ಹೇಳಲಾಗಿದೆ" ಎಂದು ಪೀಠವು ವಿವರಿಸಿದೆ.












Click it and Unblock the Notifications