ಹಿಜಾಬ್ ನಿರ್ಬಂಧ ಅಧಿಕಾರ ಕಾಲೇಜು ಸಮಿತಿಗಿಲ್ಲ: ಅರ್ಜಿದಾರರ ಪ್ರಬಲ ವಾದ
ಬೆಂಗಳೂರು, ಫೆ.14: ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ಹಿಜಾಬ್ ಕುರಿತಂತೆ ಹೈಕೋರ್ಟ್ನಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಯಿತು.
ಹಿಜಾಬ್ ಧಾರಣೆಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೈಬುನ್ನೀಸಾ ಅವರಿದ್ದ ಪೂರ್ಣ ಪೀಠ ವಾದ ಆಲಿಸಿತು.
ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರ ವಾದ ಆಲಿಸಿದ ನ್ಯಾಯಪೀಠ ಪುನಃ ನಾಳೆ (ಮಂಗಳವಾರ) ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿ ಮುಂದೂಡಿತು.

ದೇವದತ್ ಕಾಮತ್, ಸರ್ಕಾರ ಫೆ.5ರಂದು ಹೊರಡಿಸಿರುವ ಆದೇಶ ಕಾನೂನು ಬಾಹಿರ ಎಂದು ಪುನಃ ಪ್ರತಿಪಾದಿಸಿರಲ್ಲದೆ, ಕಾಲೇಜು ಅಭಿವೃದ್ಧಿ ಸಮಿತಿಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ ಎಂದರು.
ಆಗ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಅತ್ಯಗತ್ಯ ಧಾರ್ಮಿಕ ಆಚರಣೆಗಳೂ ಪರಿಪೂರ್ಣ ಹಕ್ಕೇ? ಸರ್ಕಾರ ಈ ಆಚರಣೆಗಳಿಗೂ ನಿಬಂಧನೆ ವಿಧಿಸಬಹುದೇ? ಎಂದ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಕಾಮತ್, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ನಿರ್ಬಂಧಿಸಬಹುದು ಎಂದರು.
ಕೇಂದ್ರೀಯ ವಿವಿಗಳಲ್ಲಿ ಹಿಜಾಬ್ಗಿಲ್ಲ ನಿರ್ಬಂಧ:
ಹಿಜಾಬ್ ಬಗ್ಗೆ ಕೇಂದ್ರೀಯ ವಿದ್ಯಾಲಯದ ನಿಯಮಗಳಲ್ಲೇ ಹೇಳಲಾಗಿದೆ. ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮಹಿಳೆಯ ಫೋಟೋ ಪ್ರಶ್ನಿಸಲಾಗಿತ್ತು. ಅಜ್ಮಲ್ ಖಾನ್ ಎಂಬುವರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 'ಪರದಾ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಆದರೆ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ' ಎಂದು ಹೈಕೋರ್ಟ್ ಹೇಳಿತ್ತೆಂದು ದೇವದತ್ ಕಾಮತ್ ಹೇಳಿದರು.
''ಸಂವಿಧಾನದ 30 ನೇ ವಿಧಿಯಡಿ ಹೆಚ್ಚಿನ ಹಕ್ಕಿದೆ. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಸಂವಿಧಾನದತ್ತ ಹಕ್ಕಿದೆ. ಆದರೆ ಇದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲ್ಲ. ಹಿಜಾಬ್ ಧರಿಸಿ ಬರಬೇಕೇ ಬೇಡವೆ ಎಂದು ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು,'' ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು ಎಂದು ಕಾಮತ್ ತಿಳಿಸಿದರು.
ಇನ್ನೂ ಮುಂದುವರಿದು, ದೇವದತ್ ಕಾಮತ್ ಸಂವಿಧಾನದ 25(1) ರಡಿ ಇರುವ ಹಕ್ಕುಗಳನ್ನು ಉಲ್ಲೇಖಿಸಿ ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ಮಾತ್ರ ನಿರ್ಬಂಧಿಸಬಹುದು. ಕಾಲೇಜು ಅಭಿವೃದ್ದಿ ಸಮಿತಿಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಸಂವಿಧಾನದ 25(1)ನೇ ವಿಧಿಯ ರಕ್ಷಣೆ ಹೊಣೆ ಸಮಿತಿಗೆ ನೀಡಿದೆ. ಸರ್ಕಾರದ ನಡೆ ಸಂಪೂರ್ಣ ಕಾನೂನುಬಾಹಿರವಾಗಿದ್ದು ಎಂದರು.
ಖುರಾನ್ ನಲ್ಲಿನ ಎಲ್ಲ ಅಂಶ ಒಪ್ಪುತ್ತೀರಾ? ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಪವಿತ್ರ ಖುರಾನ್ ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖಿಸಲಾಗಿದೆ. ಅದು ಅಗತ್ಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆಚರಣೆಗಳಲ್ಲಿ ಒಂದು ಭಾಗ ಎಂದರು.
ಆಗ ನ್ಯಾ. ಕೃಷ್ಣ ದೀಕ್ಷಿತ್, ಖುರಾನ್ ಇಸ್ಲಾಂ ಧರ್ಮದ ಮೊದಲ ಮೂಲವಾಗಿದೆಯಲ್ಲವೇ, ಅದರ ಎಲ್ಲ ಅಂಶಗಳನ್ನು ಒಪುತ್ತೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಕಾಮತ್ಬ, ಇಲ್ಲ ಎಂದರು. ಅಲ್ಲದೆ, ಇಸ್ಲಾಂ ಧರ್ಮಕ್ಕೆ ನಾಲ್ಕು ಮೂಲಗಳಿವೆ. ಖುರಾನ್, ಹದೀತ್, ಇಜ್ಮಾ, ಕಿಯಾಸ್ . ಆದರೆ ಖುರಾನ್ ನಲ್ಲಿರುವ ಯಾವುದನ್ನೂ ಇಸ್ಲಾಂ ವಿರೋಧಿ ಎನ್ನಲಾಗದು ಎಂದು ಸಮರ್ಥಿಸಿಕೊಂಡರು.
ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಿ: "ತಡೆಯಿರದ ಪ್ರತಿಭಟನೆಗಳಿಂದ ಶಾಲಾ-ಕಾಲೇಜುಗಳು ಬಂದ್ ಆಗಬಾರದು. ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಕಾಲ ಬಂದ್ ಆಗುವುದು ಸಂತೋಷದ ವಿಷಯಲ್ಲ. ಈ ಪ್ರಕರಣದ ವಿಚಾರಣೆಯನ್ನು ತುರ್ತು ಆಧಾರದ ಮೇಲೆ ನಡೆಸಲಾಗುವುದು, ಶೈಕ್ಷಣಿಕ ವರ್ಷವನ್ನು ವಿಳಂಬಿಸುವುದರಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ. ಪ್ರಸಕ್ತ ಶೈಕ್ಷ ಕ್ಷಣಿಕ ವರ್ಷ ಇನ್ನೇನು ಅಂತ್ಯವಾಗುತ್ತಿದೆ. ಸಂಬಂಧಪಟ್ಟವರೆಲ್ಲಾ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕು. ಹೀಗಾಗಿ ಶಿಕ್ಷಣ ಸಂಸ್ಥೆ ತೆರೆದು ವಿದ್ಯಾರ್ಥಿಗಳು ಮರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ'' ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications