ದುನಿಯಾ ವಿಜಯ್ ಬಗ್ಗೆ ಹೀಗೊಂದು ಸುಳ್ಳು ಸುದ್ದಿ
ಬೆಂಗಳೂರು, ಜನವರಿ 31: ಜಿಮ್ ಟ್ರೈನರ್ ಮಾರುತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿಡಿದ್ದು, ಇದು ಸುಳ್ಳು ಸುದ್ದಿಯೆಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಧೃಡಪಡಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ 22 ರಂದು ನಗರದ ಅಂಬೇಡ್ಕರ್ ಭವನದಲ್ಲಿ ದುನಿಯಾ ವಿಜಯ್ ಮತ್ತು ಅವರ ಸಂಗಡಿಗರು ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನು ಅಪಹರಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದುನಿಯಾ ವಿಜಯ್ ಅಂಬೇಡ್ಕರ್ ಭವನದಲ್ಲಿ ಪಾನಿಪುರಿ ಕಿಟ್ಟಿಯ ಬಗ್ಗೆ ಅಗೌರವವಾಗಿ ಮಾತನಾಡಿದಾಗ ಜಿಮ್ ಟ್ರೈನರ್ ಮಾರುತಿ ಗೌಡ ದುನಿಯಾ ವಿಜಯ್ ವಿರುದ್ಧ ಮಾತನಾಡಿದ್ದಾನೆ ಆಗ ಅಲ್ಲಿಯೇ ಮಾರುತಿ ಗೌಡನ ಮೇಲೆ ಹಲ್ಲೆ ನಡೆದಿದೆ ಎಂದು ದೂರು ದಾಖಲಿಸಲಾಗಿತ್ತು.

ಪ್ರಕರಣ ಸಂಬಂಧ ದುನಿಯಾ ವಿಜಿ ಮತ್ತು ತಂಡದ ವಿರುದ್ಧ ಸೆಕ್ಷನ್ 326- ಉದ್ದೇಶಪೂರ್ವಕ ಮಾರಣಾಂತಿಕ ಹಲ್ಲೆ, 325- ಹಲ್ಲೆ ಮಾಡಿದ ವ್ಯಕ್ತಿಗೆ ಕಿರುಕುಳ, 342-ಅಕ್ರಮವಾಗಿ ಕರೆದೊಯ್ದು ಹಲ್ಲೆ, 363-ಅಪಹರಣ ಮತ್ತು ಹಲ್ಲೆ, 506-ಜೀವ ಬೆದರಿಕೆ ಒಡ್ಡಿದ ಪ್ರಕರಣಗಳು ದಾಖಲಾಗಿವೆ.
ಪ್ರಕರಣವು ತನಿಖೆ ಹಂತದಲ್ಲಿದ್ದು, ದುನಿಯಾ ವಿಜಯ್ ಅವರಿಗೆ ಪ್ರಕರಣದಲ್ಲಿ ಜಾಮೀನು ದೊರೆತಿದೆ.












Click it and Unblock the Notifications