ಉಡುಪಿಯಲ್ಲಿ ಈ ಬಾರಿಯ 'ಕಂಬಳ' ಕ್ರೀಡೆ ಮುಕ್ತ..ಮುಕ್ತ.. ಮುಕ್ತ..
ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ತುಳುನಾಡಿನ ಜಾನಪದ 'ಕಂಬಳ' ಕ್ರೀಡೆಗೆ ರಾಜ್ಯ ಉಚ್ಚ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ, ಈ ವರ್ಷ 'ಕಂಬಳ' ನಿರಾಂತಕವಾಗಿ ಸಾಗಲಿದೆ.
ಬೆಂಗಳೂರು, ಉಡುಪಿ, ಅ 30: ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ತುಳುನಾಡಿನ ಜಾನಪದ 'ಕಂಬಳ' ಕ್ರೀಡೆಗೆ ರಾಜ್ಯ ಉಚ್ಚ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ, ಈ ವರ್ಷ 'ಕಂಬಳ' ನಿರಾಂತಕವಾಗಿ ಸಾಗಲಿದೆ.
ಉಡುಪಿ ಜಿಲ್ಲಾಡಳಿತ ನೀಡಿದ್ದ ತಡೆಗೆ ಬ್ರೇಕ್ ಹಾಕಿರುವ ನ್ಯಾಯಾಲಯ, ಕೋಣಗಳು ಓಡಲು ಶಕ್ತವಿರುವ ಪ್ರಾಣಿಗಳು, ಜೊತೆಗೆ ಕಂಬಳ ವಿವಿಧ ಕೋಮಿನ ನಡುವೆ ಸಾಮರಸ್ಯ ನೀಡುವ ಸ್ಪರ್ಧೆಯಾಗಿದೆ ಎನ್ನುವ ವರದಿಯನ್ನು ಆಧರಿಸಿ ಈ ತೀರ್ಪು ನೀಡಿದೆ.
ಮಾರ್ಚ್ 2, 2016ರಂದು ಉಪ್ಪಿನಂಗಡಿ ಕಂಬಳ ಸಮಿತಿಯ ಪ್ರಮುಖ ಅಶೋಕ್ ರೈ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಕಂಬಳ ನಡೆಸಲು ಕೆಲವೊಂದು ಷರತ್ತಿನ ಮುಖಾಂತರ ಕೋರ್ಟ್ ಅನುಮತಿ ನೀಡಿತ್ತು. (ಈ ಬಾರಿಯೂ ಕಂಬಳ ನಡೆಯುವುದು ಡೌಟ್)
ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಚಾಲ್ತಿಯಲ್ಲಿರುವಾಗಲೇ ಉಡುಪಿ ಜಿಲ್ಲಾಡಳಿತ ಕಂಬಳಕ್ಕೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಮತ್ತೆ ಕೋರ್ಟ್ ಮೆಟ್ಟಲೇರಿತ್ತು.
ಸಮಿತಿಯ ಗೌರವಾಧ್ಯಕ್ಷರು ಮತ್ತು ಕರಾವಳಿಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಬಾರಕೂರು ಶಾಂತಾರಾಮ ಶೆಟ್ಟಿ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು. ಕಂಬಳ ಸಮಿತಿ ಪರ ಹಿರಿಯ ವಕೀಲ ಬಿವಿ ಆಚಾರ್ಯ ವಾದಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೋಪಣ್ಣ ಅವರ ನ್ಯಾಯಪೀಠ ಜಿಲ್ಲಾಡಳಿತದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದೆ. ಹೆಚ್ಚುಕಮ್ಮಿ ಕಂಬಳದ ರೀತಿಯಲ್ಲೇ ಆಚರಿಸಲಾಗುವ ತಮಿಳುನಾಡಿನ 'ಜಲ್ಲಿಕಟ್ಟು' ಕ್ರೀಡೆಗೆ ಕಳೆದ ವರ್ಷ ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಕೊನೇ ಮಾತು: ಪ್ರಾಣಿ ಹಿಂಸೆ ಮೂಲಕ ನಡೆಯುವ ಇಂತಹ ಕ್ರೀಡೆಗಳನ್ನು ಬ್ಯಾನ್ ಮಾಡಬೇಕು ಅನ್ನುತ್ತಿದ್ದ ಕೆಲವು ಅತೀ ಬುದ್ದಿವಂತರು, ಮಾಂಸ ತಿಂದರೆ ತಪ್ಪೇನಂದರಂತೆ!!