ಬೆಂಗಳೂರು : ಅಕ್ರಮ ಪಾಕ್ ಪ್ರಜೆಗಳ ಗಡಿಪಾರಿಗೆ ಹೈಕೋರ್ಟ್ ಆದೇಶ
ಬೆಂಗಳೂರು, ಏಪ್ರಿಲ್ 26 : ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ತಕ್ಷಣ ಗಡಿಪಾರು ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. 2017ರಲ್ಲಿ ಇಬ್ಬರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದರು.
ಅಕ್ರಮವಾಗಿ ಬಂದು ಇಲ್ಲಿ ನೆಲೆಸಿ ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಪ್ರಜೆಗಳು ಒಂದು ನಿಮಿಷವೂ ಸಹ ನಮ್ಮ ದೇಶದಲ್ಲಿ ಇರಬಾರದು. 24 ಗಂಟೆಯೊಳಗೆ ಅವರನ್ನು ಗಡಿಪಾರು ಮಾಡಿ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.

24 ಗಂಟೆಯೊಳಗೆ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟ. ಆದ್ದರಿಂದ ಸಮಯಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ನ್ಯಾಯಾಲಯ 10 ದಿನಗಳ ಕಾಲಾವಕಾಶ ನೀಡಿ ಮೇ 5ರೊಳಗೆ ಗಡಿಪಾರಿಗೆ ಸೂಚನೆ ನೀಡಿದೆ.
ಏನಿದು ಪ್ರಕರಣ : ಕೇರಳ ಮೂಲದ ಸಿಹಾದ್ ಎಂಬ ಯುವಕ ಕರಾಚಿ ಮೂಲದ ಸಮೀರಾ ಎನ್ನುವ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆಯ ಬಳಿಕ ನಾದಿನಿ ಝೈನಬ್ ಹಾಗೂ ಬಾಮೈದ ಕಾಸೀಫ್ ಸಂಶುದ್ದೀನ್ ಅವರನ್ನು ಅಕ್ರಮವಾಗಿ ನೇಪಾಳ ಮಾರ್ಗವಾಗಿ ಭಾರತಕ್ಕೆ ಕರೆತಂದಿದ್ದ.
ನಾಲ್ವರು ಸಹ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡಿದ್ದರು. ಈ ವಿಚಾರವನ್ನು ತಿಳಿದ ಪೊಲೀಸರು ಮೇ 25, 2017ರಂದು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿದ್ದರು.
ಸಿಹಾತ್ ಮತ್ತು ಸಮೀರಾ ವಿವಾಹವಾದ ಕಾರಣ ಅವರಿಗೆ ಭಾರತದಲ್ಲಿ ನೆಲೆಸಲು ನ್ಯಾಯಾಲಯ ಅವಕಾಶ ನೀಡಿತ್ತು. ಆದರೆ, ಝೈನಬ್ ಮತ್ತು ಕಾಸೀಫ್ ಸಂಶುದ್ದೀನ್ ಅವರಿಗೆ ಸೆಷನ್ಸ್ ಕೋರ್ಟ್ 21 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಇಬ್ಬರು ತಮ್ಮ ಜೈಲು ಶಿಕ್ಷೆಯನ್ನು ಕಡಿಮೆ ಮಾಡಿ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರನ್ನು ಗಡಿಪಾರು ಮಾಡುವಂತೆ ಆದೇಶ ನೀಡಿದೆ.












Click it and Unblock the Notifications