ಹೈಕೋರ್ಟ್ನಲ್ಲಿ 'ಬೆಕ್ಕು ಪುರಾಣ' ಕೇಳಿ ಎಲ್ಲರೂ ಅಚ್ಚರಿಗೊಂಡರು!
ಬೆಂಗಳೂರು, ಜುಲೈ 23: ಬೆಕ್ಕು ಕಳವು ಪ್ರಕರಣವೊಂದು ಸೋಮವಾರ ಕರ್ನಾಟಕ ಹೈಕೋರ್ಟ್ನಲ್ಲಿ ನಗೆಯ ಕಡಲು ಮೂಡಿಸಿದ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ನ್ಯಾಯಮೂರ್ತಿಗಳು ಹಾಗೂ ಕೋರ್ಟ್ ಹಾಲ್ನಲ್ಲಿ ನೆರೆದಿದ್ದ ವಕೀಲರು ಬೆಕ್ಕು ಪುರಾಣ ಕೇಳಿ ಅಚ್ಚರಿಗೊಳಗಾದರು.
ಮನೆಯಲ್ಲಿ ಬೆಕ್ಕು ಇತ್ತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ವಿರುದ್ಧ ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆತಂದ ಆರೋಪದ ಮೇಲೆ ದೂರು ದಾಖಲಾಗಿತ್ತು. ಜೊತೆಗೆ, ಪೊಲೀಸರು ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಹ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಬೆಕ್ಕು ಮನೆಯಲ್ಲಿ ಕಾಣಿಸಿಕೊಂಡಿರುವುದಕ್ಕೂ ಮಹಿಳೆಯ ಘನತೆಗೆ ಧಕ್ಕೆ ತಂದ ಪ್ರಕರಣಕ್ಕೂ ಎಲ್ಲಿಂದ ಸಂಬಂಧವಯ್ಯಾ? ಎಂದು ಅಚ್ಚರಿಗೊಂಡರು.
ನ್ಯಾಯಮೂರ್ತಿಗಳಿಗೆ ಇಂತಹ ಪ್ರಕರಣಗಳನ್ನು ಪೋಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಬೇಸರವೂ ಮೂಡಿಸಿತು. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗೆ ತಡೆ ನೀಡಿತು.
"ತಹ ಹುಸೈನ್ ಅವರ ಮನೆಯ ಕಿಟಕಿಯಿಂದ ಬೆಕ್ಕು ಒಳ ಬರುತ್ತದೆ ಹಾಗೂ ಹೊರ ಹೋಗುತ್ತದೆ. ಹಾಗೆಂದು ಮಾತ್ರಕ್ಕೆ ಜೀವ ಬೆದರಿಕೆ, ಮಹಿಳೆಯ ಘನತೆಗೆ ಧಕ್ಕೆ ತಂದ ಮತ್ತು ಶಾಂತಿ ಭಂಗ ಅಪರಾಧ ಕೃತ್ಯ ಎಸಗಿದಂತಾಗುವುದಿಲ್ಲ" ಎಂಬ ಅರ್ಜಿದಾರರ ಪರ ವಕೀಲರು ವಾದವನ್ನು ನ್ಯಾಯಮೂರ್ತಿಗಳು ಪರಿಗಣಿಸಿದರು.
ಇಂತಹ ಪ್ರಕರಣದ ವಿಚಾರಣೆ ಮುಂದುವರಿಸಲು ಅನುಮತಿಸಿದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಭಂಗ ಉಂಟು ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದರು. ಹಾಗೆಯೇ, ಅರ್ಜಿದಾರರ ವಿರುದ್ಧ ದೂರು ಸಲ್ಲಿಸಿದ್ದ ಮಹಿಳೆಗೆ ತುರ್ತು ನೋಟಿಸ್ ಜಾರಿಗೊಳಿಸಿತು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ? ಏನಿದು. ಬೆಕ್ಕಿಗಾಗಿ ಕದನ?, ಅರ್ಜಿದಾರರು ಏಕೆ ಬೆಕ್ಕನ್ನು ಕಳವು ಮಾಡಿದ್ದಾರೇ?, ಬೆಕ್ಕನ್ನು ಏಕೆ ಹಿಡಿದುಕೊಂಡಿದ್ದರು?, ಅವರ ಮನೆಯಲ್ಲಿ ಬೆಕ್ಕು ಏಕೆ ಇತ್ತು?, ಮಹಿಳೆಯ ಘನತೆಗೆ ಧಕ್ಕೆ ತಂದಿರುವುದಕ್ಕೂ ಬೆಕ್ಕಿಗೂ ಏನು ಸಂಬಂಧ?, ಅರ್ಜಿದಾರರ ಪರ ವಕೀಲರನ್ನು ನ್ಯಾಯೂರ್ತಿಗಳು ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಬೆಕ್ಕು ಒಂದು ಕಾಪೌಂಡ್ನಿಂದ ಮತ್ತೊಂದು ಕಾಂಪೌಂಡ್ ಹಾರಿ ಹೋಗುತ್ತಿರುತ್ತದೆ. ಬೆಕ್ಕು ನಮ್ಮ ಮನೆಯ ಕಿಟಕಿಯಿಂದ ಒಳಗೆ ಬರುತ್ತದೆ ಹಾಗೂ ಹೊರ ಹೋಗುತ್ತದೆ. ಸಿಸಿಟಿವಿಯ ಆ ದೃಶ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಅರ್ಜಿದಾರರ ಮನೆಯ ರಸ್ತೆಯಲ್ಲಿ ಇರುವವರೆಲ್ಲರ ವಿರುದ್ಧವೂ ಬೆಕ್ಕು ಕಳೆದುಕೊಂಡ ಬಗ್ಗೆ ದೂರು ದಾಖಲಿಸಲಾಗಿದೆ. ಈಗಾಗಲೇ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಲ್ಲವಷ್ಟೇ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ: ಪಕ್ಕದ ಮನೆಯ ಡೇಸಿ ಎಂಬ ಹೆಸರಿನ ಬೆಕ್ಕು ತಮ್ಮ ಮನೆಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಬೆಕ್ಕು ಸಾಕುತ್ತಿರುವ ನಿಖಿತಾ ಅಂಜನಾ ಅಯ್ಯಂಗಾರ್ ದಾಖಲಿಸಿದ್ದ ದೂರು ಆಧರಿಸಿ ಆನೇಕಲ್ ತಾಲೂಕಿನ ಶಿಕಾರಿಪಾಳ್ಯದ ಸಿರಾಜ್ ಬಡಾವಣೆಯ 2ನೇ ಅಡ್ಡರಸ್ತೆಯ ನಿವಾಸಿ ತಹ ಹುಸೈನ್ ವಿರುದ್ಧ ಹೆಬ್ಬಗೋಡಿ ಠಾಣಾ ಪೊಲೀಸರು ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆತಂದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಬಳಿಕ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಆನೇಕಲ್ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು 2022ರ ಸೆ.2ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ತಮ್ಮ ವಿರುದ್ಧ ಪ್ರರಣ ರದ್ದು ಕೋರಿ ತಹ ಹುಸೈನ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications