ನಂದಿನಿ ಹಾಲಿನ ದರ ಏರಿಕೆ ಪ್ರಶ್ನಿಸಿದ್ದ ಪಿಐಎಲ್ ವಜಾ
ಬೆಂಗಳೂರು, ಜುಲೈ 25: ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಏರಿಕೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಈ ವಿಚಾರವು ಸರ್ಕಾರದ ನೀತಿ ನಿರ್ಧಾರಕ್ಕೆ ಒಳಪಟ್ಟಿರುತ್ತದೆ, ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಂದಿನಿ ಹಾಲಿನ ದರ 2 ರೂ. ಏರಿಕೆ ಮಾಡಿ ಜೂನ್ 26 ರಂದು ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ನಗರದ ಬಿಳೇಕಳ್ಳಿಯ ಲೆಕ್ಕ ಪರಿಶೋಧಕಿ ಡಾ. ಆರ್. ಅಮೃತಾಲಕ್ಷ್ಮಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಹೇಳಿದ್ದೇನು?: ವಾದ ಆಲಿಸಿದ ನ್ಯಾಯಪೀಠ, ಬೆಲೆ ಏರಿಕೆ ತಜ್ಞರ ಅಭಿಪ್ರಾಯ ಹಾಗೂ ಸರ್ಕಾರದ ನೀತಿಯಿಂದ ನಿರ್ಣಯವಾಗುತ್ತದೆ. ಇಲ್ಲಿಯೂ ಕರ್ನಾಟಕ ಹಾಲು ಒಕ್ಕೂಟ ( ಕೆಎಂಎಫ್) ವಾಣಿಜ್ಯ ಉದ್ದೇಶದಿಂದ ತಜ್ಞರನ್ನೊಳಗೊಂಡು ಬೆಲೆ ಹೆಚ್ಚಳ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಶಾಸನ ಬದ್ಧ ನೀತಿ ಉಲ್ಲಂಘನೆ ಮಾಡಿದ ಸಂದರ್ಭ ಹೊರತುಪಡಿಸಿ ಇದನ್ನು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ವಿಚಾರಣೆಗೆ ಪರಿಗಣಿಸಲಾಗುವುದಿಲ್ಲ. ಈ ಎಲ್ಲ ಅಂಶಗಳಿಂದಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮಾರುಕಟ್ಟೆಯಲ್ಲಿ ನಂದಿನಿ ಹಾಲು ಭಿನ್ನ ಗುಣಮಟ್ಟ ಹೊಂದಿರುವ ಪ್ಯಾಕೆಟ್ಗಳನ್ನು ದೊರಕುತ್ತದೆ. ಇದರಲ್ಲಿ ಹೆಚ್ಚು ಗುಣಮಟ್ಟದ ಹಾಲಿಗೂ ಕಡಿಮೆ ಗುಣಮಟ್ಟದ ಹಾಲಿಗೂ ಸೇರಿದಂತೆ ಎಲ್ಲ ಮಾದರಿಗಳ ಹಾಲಿನ ದರವನ್ನು ಪ್ರತಿ ಪ್ಯಾಕೆಟ್ಗೆ 2 ರೂ. ಹೆಚ್ಚಳ ಮಾಡಲಾಗಿದೆ.
ಈ ಬೆಲೆ ಏರಿಕೆಯನ್ನು ಕಡಿಮೆ ಸತ್ವವಿರುವ ಹಾಲಿನ ಪ್ಯಾಕೇಟ್ ಖರೀದಿಸಿ ಸೇವಿಸುವ ಬಡ ಗ್ರಾಹಕರು ಭರಿಸಬೇಕಾಗುತ್ತದೆ ಎಂದರು. ಹಾಗಾಗಿ ಸರ್ಕಾರದ ಈ ಕ್ರಮವು ವಾಣಿಜ್ಯ ಬುದ್ಧಿವಂತಿಕೆಗೆ ಹಾಗೂ ಸಂವಿಧಾನದ ಪರಿಚ್ಛೇದ 14ರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪೀಠದ ಮುಂದೆ ವಿವರಿಸಿದರು.
ಅಲ್ಲದೆ, ಬೆಲೆ ಏರಿಕೆಯೊಂದಿಗೆ ಪ್ರಮಾಣವೂ ಹೆಚ್ಚಾಗಿದೆ ಮತ್ತು ಈಗ ಹೆಚ್ಚುವರಿ 50 ಮಿಲಿ ಹಾಲು ಸ್ಯಾಚೆಟ್ಗಳಲ್ಲಿ ನೀಡಲಾಗುತ್ತದೆ. ಹಾಗಾಗಿ ಬೆಲೆ ಹೆಚ್ಚಳವು ತರ್ಕಬದ್ಧವಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಮೇಲ್ಮೋಟಕ್ಕೆ ಬೆಲೆ ಹೆಚ್ಚಳ ಮತ್ತು ಪ್ರಮಾಣ-ವೇರಿಯಂಟ್ ನಡುವೆ ಯಾವುದೇ ಸಂಬಂಧವಿಲ್ಲ ಎನ್ನುವುದು ತಿಳಿದು ಬರುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಕೆಎಂಎಫ್ ಹಾಲಿನ ದರ ಏರಿಕೆ ಮಾಡಿದ್ದನ್ನು ರಾಜ್ಯದ ಪ್ರತಿಪಕ್ಷ ಬಿಜೆಪಿಯೂ ಖಂಡನೆ ಮಾಡಿತ್ತು. 'ಭ್ರಷ್ಟ, ಲೂಟಿಕೋರ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಎಲ್ಲವೂ ದುಬಾರಿ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ತರಕಾರಿ ದರ ಏರಿಕೆ, ಅಗತ್ಯ ವಸ್ತಗಳ ಬೆಲೆ ಏರಿಕೆ, ನಂದಿನಿ ಹಾಲಿನ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಬೆಲೆ ಏರಿಕೆಯಿಂದ ಈಗಾಗಲೇ ಹೈರಾಣಾಗಿರುವ ಜನತೆಗೆ ಮತ್ತೊಂದು ಹೊಡೆತ ನೀಡಲು, ಏರಿಕೆಗೆ ಮತ್ತೇನಿದೆ ಎಂದು ಹುಡುಕುತ್ತಿದ್ದಾರೆ. ಬೆಲೆಯೇರಿಕೆಯಿಂದ ಕನ್ನಡಿಗರ ಬದುಕನ್ನು ಬೀದಿಗೆ ತರುವ 6ನೇ ಗ್ಯಾರಂಟಿ ಜಾರಿಯಲ್ಲಿದೆ' ಎಂದು ಪಕ್ಷ ಟೀಕೆ ಮಾಡಿತ್ತು.
ಹಾಲಿನ ದರ ಏರಿಕೆ ಸಮರ್ಥಿಸಿಕೊಂಡಿದ್ದ ಕೆಎಂಎಫ್, 'ಉತ್ತಮ ಮಳೆಯಿಂದಾಗಿ ಹೈನೋದ್ಯಮವು ಪುಟಿದೆದ್ದಿದ್ದು, ರಾಜ್ಯದಲ್ಲಿ ದಿನದ ಸರಾಸರಿ ಹಾಲು ಉತ್ಪಾದನೆ ಪ್ರಮಾಣವು ಕೋಟಿ ಲೀಟರ್ನ ಸನಿಹಕ್ಕೆ ಬಂದಿದೆ. ರೈತರಿಂದ ಹಾಲಿನ ಪೂರೈಕೆಯು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ನೇರವಾಗಿ ದರ ಏರಿಕೆ ಮಾಡದೇ ಅರ್ಧ ಲೀಟರ್ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೇಟ್ಗೆ 50 ಮಿಲಿ ಪ್ರಮಾಣ ಹೆಚ್ಚಿಸಿ, ಹೆಚ್ಚುವರಿ ಹಾಲಿಗೆ ರೂ. 2ರಂತೆ ಸೇರ್ಪಡಿಸಿ ದರ ನಿಗದಿಪಡಿಸಲಾಗಿದೆ' ಎಂದು ಸ್ಪಷ್ಟನೆ ನೀಡಿತ್ತು.
'ಹೊರರಾಜ್ಯಗಳ ಹಾಲಿನ ಮಾರಾಟ ದರಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ಮಾರಾಟ ದರ ಈಗಲೂ ಅತ್ಯಂತ ಕಡಿಮೆ. ನಂದಿನಿ ಹಾಲಿನ ದರ ಈಗಲೂ ರಾಷ್ಟ್ರದಲ್ಲೇ ಅತ್ಯಂತ ಕಡಿಮೆ ಇದ್ದು, ಜನರಿಗೆ ಕೈಗೆಟಕುವ ದರದಲ್ಲೇ ಲಭ್ಯವಿದೆ' ಎಂದು ತಿಳಿಸಿತ್ತು.












Click it and Unblock the Notifications