ನೋಟಿಸ್ ನೀಡದೆ ಗೃಹ ರಕ್ಷಕ ಸಿಬ್ಬಂದಿ ಅಮಾನತು ಮಾಡಬಹುದು: ಹೈಕೋರ್ಟ್
ಬೆಂಗಳೂರು, ನವೆಂಬರ್ 26: ಪೂರ್ವಭಾವಿ ನೋಟಿಸ್ ನೀಡದೆ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಆದೇಶ ಹೊರಡಿಸಬಹುದು ಎಂದು ಹೇಳಿರುವ ಹೈಕೋರ್ಟ್, ಅಂತಹ ಒಂದು ಅಮಾನತು ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ.
ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಬೆಂಗಳೂರಿನ ಲಗ್ಗೆರೆಯ ವಾಸಿ ಕೆಂಪಾಮಣಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಸ್. ಜಿ. ಪಂಡಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, "ಕರ್ನಾಟಕ ಗೃಹ ರಕ್ಷಕ ಸಿಬ್ಬಂದಿ ನಿಯಮ 1963ರ ಸೆಕ್ಷನ್ 14ಬಿ ಅಡಿ ಗೃಹ ರಕ್ಷಕ ದಳದ ಕಮಾಂಡೆಂಟ್ ಅಥವಾ ಕಮಾಂಡ್ ಜನರಲ್ ಗೆ ಹೋಮ್ ಗಾರ್ಡ್ಗಳನ್ನು ಅಮಾನತುಗೊಳಿಸುವ ಅಧಿಕಾರಿವಿದೆ. ಅಮಾನತುಗೊಳಿಸಲು ನೋಟಿಸ್ ನೀಡುವ ಅಗತ್ಯವಿಲ್ಲ ಏಕೆಂದರೆ ಅಮಾನತು ಬಾಕಿ ಇರುತ್ತದೆ ಅಥವಾ ತನಿಖೆ ನಡೆಯುತ್ತಿರುತ್ತದೆ" ಎಂದು ಆದೇಶಿಸಿದೆ.

ಗೃಹ ರಕ್ಷಕ ಸಿಬ್ಬಂದಿ ಶಿಸ್ತಿಗೆ ಹೆಸರಾದ ಪಡೆ, ಅಲ್ಲದೆ, ಅಮಾನತು ಎನ್ನುವುದು ಶಿಕ್ಷೆಯಲ್ಲ. ಹಾಗಾಗಿ ಡಿಜಿಪಿ ಹೊರಡಿಸಿರುವ ಅಮಾನತು ಆದೇಶ ಸರಿಯಾಗಿದೆ. ಅದಕ್ಕೆ ಮಧ್ಯಪ್ರವೇಶ ಮಾಡಲಾಗದು ಎಂದು ಹೇಳಿರುವ ನ್ಯಾಯಾಲಯ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಅದರೆ ಅರ್ಜಿದಾರರು, ಅಮಾನತು ಆದೇಶಕ್ಕೂ ತಮ್ಮ ಅಹವಾಲು ಆಲಿಸಬೇಕಿತ್ತು ಎಂದು ಸಲ್ಲಿಸಿರುವ ಮನವಿಯನ್ನು ಪ್ರತಿವಾದಿ ಗೃಹ ರಕ್ಷಕ ದಳದ ಡಿಜಿಪಿ ಪರಿಗಣನೆ ಮಾಡಬೇಕೆಂದು ನಿರ್ದೇಶನ ನೀಡಿ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಕೆಂಪಾಮಣಿ ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 348ಎ, 323, 504, 506 ಮತ್ತು 343 ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಹಿನ್ನೆಲೆಯಲ್ಲಿ ತಮ್ಮನ್ನು ಹೋಂ ಗಾರ್ಡ್ಸ್ ಡಿಜಿಪಿ ಅಮಾನತುಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿದಾರರಿಗೆ ಜಾಮೀನು ದೊರೆತಿತ್ತು. ಆದರೆ ತಮ್ಮನ್ನು ಅಮಾನತುಗೊಳಿಸಿದ್ದ ಆದೇಶವನ್ನು ಅವರು ಪ್ರಶ್ನಿಸಿದ್ದರು.
2019ರಲ್ಲಿ ಕೆಲಸಕ್ಕೆ ಸೇರಿದ್ದ ಅವರು, ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎನ್ನುವ ಕಾರಣಕ್ಕೆ ತಮ್ಮನ್ನು ಸೇವೆಯಿಂದ ಅಮಾನತುಗೊಳಿಸುವ ಮುನ್ನ ನೋಟಿಸ್ ನೀಡಿಲ್ಲ, ನೋಟಿಸ್ ನೀಡದೆ ಅಮಾನತುಗೊಳಿಸಿರುವ ಕ್ರಮ ಕಾನೂನು ಬಾಹಿರ. ಹಾಗಾಗಿ ಅಮಾನತು ಆದೇಶ ರದ್ದುಗೊಳಿಸಬೆಕು ಎಂದು ವಾದಿಸಿದ್ದರು.












Click it and Unblock the Notifications