ಅಚ್ಚರಿಯ ಆಯ್ಕೆ ಹಿಂದಿದೆಯಾ ಸಿಎಂ ಯಡಿಯೂರಪ್ಪ ಬದಲಾವಣೆ ತಂತ್ರ?
ಬೆಂಗಳೂರು, ಜೂ. 09: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಆ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಗುರುತಿಸಿದೆ ಎಂದು ಬಿಜೆಪಿ ಹೈಕಮಾಂಡ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಂದು ರೀತಿಯಲ್ಲಿ ಅದು ನಿಜ ಕೂಡ. ಹಣಬಲ, ತೋಳ್ಬಲ ಇಲ್ಲದವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎನ್ನುವ ಕಾಲದಲ್ಲಿ ಇಡೀ ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಗಿದೆ. ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳು ಕೂಡ ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವಾಗತಿಸಿದ್ದಾರೆ.
ಬಿಜೆಪಿ ಕೇಂದ್ರ ಚುನಾವಣೆ ಸಮಿತಿಯ ನಡೆ ಈ ಅಚ್ಚರಿಗೆ ಕಾರಣವಾಗಿದೆ. ಆದರೆ ನಿರ್ಧಾರದ ಹಿಂದೆ ಬಿಜೆಪಿ ಹೈಕಮಾಂಡ್ ಇದೆ ಎಂಬುದು ಸ್ಪಷ್ಟ. ಈ ಮಧ್ಯೆ ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಒಂದೇ ಒಂದು ನಿರ್ಧಾರದಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಮೇಲ್ನೋಟಕ್ಕೆ ಇದು ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ಕೊಟ್ಟಿರುವ ಕೊಡುಗೆ ಎಂದೇ ಹೇಳಲಾಗುತ್ತಿದೆ. ಒಂದು ಹಂತದಲ್ಲಿ ಅದು ನಿಜ ಕೂಡ. ಆದರೆ ಬಿಜೆಪಿ ಅಂತರಾಳದಲ್ಲಿ ಬೇರೆಯದ್ದೆ ಲೆಕ್ಕಾಚಾರವಿದೆ. ಬಿಜೆಪಿ ತನ್ನ ಲೆಕ್ಕಾಚಾರದ ನಡೆಯ ಮೂಲಕ ಮುಂದಿನ ಬಹುದೊಡ್ಡ ಮುನ್ಸೂಚನೆಯಿದೆ.
ರಾಜ್ಯಸಭೆ: ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
ಕೇಂದ್ರಕ್ಕೆ ಪಟ್ಟಿ ರವಾನೆ
ಎರಡು ದಿನಗಳ ಹಿಂದೆ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರು ಸಭೆ ಸೇರಿದ್ದರು. ಸಭೆಯಲ್ಲಿ ತಮ್ಮ ಮೇಲಿನ ಒತ್ತಡವನ್ನು ಸಿಎಂ ಯಡಿಯೂರಪ್ಪ ಅವರು ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಒಟ್ಟು 5 ಹೆಸರುಗಳಿದ್ದ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಕಳುಹಿಸಲಾಗಿತ್ತು.
ಇವತ್ತು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಚ್ಚರಿಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಆದರೆ ಅಭ್ಯರ್ಥಿಗಳ ಆಯ್ಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಿರ್ಧಾರ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯ ಬಿಜೆಪಿ ಕಳುಹಿಸಿದ್ದ ಪ್ರಭಾಕರ್ ಕೊರೆ, ರಮೇಶ್ ಕತ್ತಿ, ಹೊಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹಾಗೂ ಪ್ರೊ ಎಂ. ನಾಗರಾಜ್ ಅವರುಗಳ ಹೆಸರುಗಳಿದ್ದ ಪಟ್ಟಿಯನ್ನು ಸಂಪೂರ್ಣವಾಗಿ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದೆ.
ಲಿಂಗಾಯತ, ಸವಿತಾ ಸಮಾಜ
ಮೂರು ಅಭ್ಯರ್ಥಿಗಳ ಪಟ್ಟಿಯ ನಿರೀಕ್ಷೆಯಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಯಾಗುವಂತೆ ಹೈಕಮಾಂಡ್ ಕೇವಲ ಇಬ್ಬರು ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಕಳುಹಿಸಿದೆ. ಆ ಮೂಲಕ ಬಹುದೊಡ್ಡ ಸಂದೇಶವನ್ನು ಹಳುಹಿಸಿದೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಈರಣ್ಣ ಕಡಾಡಿ ಅವರನ್ನು ರಾಜ್ಯಸಭೆಗೆ ಅನಿರೀಕ್ಷಿತವಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಸಧ್ಯ ಈರಣ್ಣ ಕಡಾಡಿ ಅವರು ಬಿಜೆಪಿ ಬೆಳಗಾವಿ ವಿಭಾಗೀಯ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ, ಸವಿತಾ ಸಮುದಾಯಕ್ಕೆ ಸೇರಿರುವ ಅಶೋಕ್ ಗಸ್ತಿ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ರಾಯಚೂರು ಮೂಲದ ಅಶೋಕ ಗಸ್ತಿಯವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಅಚ್ಚರಿಯ ನಡೆ ಪ್ರದರ್ಶಿಸಿದೆ. ರಾಯಚೂರು ವಿಭಾಗೀಯ ಬಿಜೆಪಿ ಪ್ರಭಾರಿ ಆಗಿರುವ ಅಶೋಕ್ ಗಸ್ತಿ ಆಯ್ಕೆ ಮೂಲಕ ಹಿಂದುಳಿದ ವರ್ಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬಂಡಾಯಕ್ಕೆ ಬಿಸಿನೀರು
ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಮಾಜಿ ಸಂಸದರಾದ ರಮೇಶ್ ಕತ್ತಿ ಹಾಗೂ ಪ್ರಭಾಕರ್ ಕೋರೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಲಿಂಗಾಯತ ಸಮುದಾಯ ಎಂಬ ಒತ್ತಡ ಹಾಕಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಲಿಂಗಾಯತ ಸಮುದಾಯ ಎಂದರೆ ನೀವಷ್ಟೆ ಅಲ್ಲ ಎಂಬ ಖಡಕ್ ಸಂದೇಶವನ್ನು ಹೈಕಮಾಂಡ್ ಕೊಟ್ಟಿದೆ. ಆಮೂಲಕ ಬಂಡಾಯ ಸಭೆ ನಡೆಸಿದ್ದ ಲಿಂಗಾಯತ ನಾಯಕರಿಗೆ ಎಚ್ಚರಿಕೆಯನ್ನು ಬಿಜೆಪಿ ಹೈಕಮಾಂಡ್ ರವಾನಿಸಿದೆ.
ಲಿಂಗಾಯತ
ಸಮುದಾಯಕ್ಕೆ
ಹೈಕಮಾಂಡ್
ಅನ್ಯಾಯ
ಮಾಡಿದೆ
ಎಂದು
ಹೇಳುವಂತೆಯೂ
ಇಲ್ಲದ
ಹಾಗೆ
ಲಿಂಗಾಯತ
ಸಮುದಾಯದ
ಅಭ್ಯರ್ಥಿಯನ್ನು
ಚುನಾವಣೆಗೆ
ನಿಲ್ಲಿಸಿದೆ.
ರಾಜ್ಯಸಭಾ ಚುನಾವಣೆ: ದೇವೇಗೌಡರ ಹಾದಿ ಸುಗಮವಾಗಿದ್ದು ಹೀಗೆ!
ರಾಜ್ಯ ಬಿಜೆಪಿ, ಸಿಎಂ ನಿರ್ಲಕ್ಷ
ರಾಜ್ಯ ಬಿಜೆಪಿ, ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ಸಿಎಂ ಅನುಮೋದಿಸಿ ಕಳಿಸಿದ್ದ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ತೆಗೆದು ನೋಡಿಲ್ಲ ಎಂಬುದು ಸುಳ್ಳಲ್ಲ. ರಾಜ್ಯ ಬಿಜೆಪಿಯಿಂದ ಹೋಗಿದ್ದ ಒಂದೂ ಹೆಸರನ್ನು ಕೇಂದ್ರ ಬಿಜೆಪಿ ಪರಿಗಣಿಸಿಲ್ಲ. ಆ ಮೂಲಕ ರಾಜ್ಯ ಬಿಜೆಪಿಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿಯೆ ಇಲ್ಲ ಎಂಬುದಂತೂ ಸತ್ಯ. ರಾಜ್ಯದಲ್ಲಿ ಪರ್ಯಾಯ ನಾಯಕರನ್ನು ಕೇಂದ್ರ ಬಿಜೆಪಿ ಹುಡುಕುತ್ತಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.
ಸಂತೋಷ್ ಆಪ್ತರು
ಹೈಕಮಾಂಡ್ ಅಚ್ಚರಿಯ ಆಯ್ಕೆಯ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೆರಳಿದೆ ಎನ್ನಲಾಗುತ್ತಿದೆ. ಖಂಡಿತವಾಗಿಯೂ ಅದು ಸಾಧ್ಯವಿದೆ. ಯಾಕಂದರೆ ರಾಜ್ಯಸಭಾ ಚುನಾವಣೆಗೆ ಅಮಿತ್ ಶಾ-ಮೋದಿ ಜೋಡಿ ವಿಶೇಷ ಸಮೀಕ್ಷೆಯನ್ನೇನೂ ಮಾಡಿಸಿರಲಿಕ್ಕಿಲ್ಲ. ಹಾಗಂತ ಗೊತ್ತಿಲ್ಲದೆಯೂ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ. ಅಭ್ಯರ್ಥಿಗಳು ಎರಡು ವಿಭಾಗಗಳ ಪ್ರಭಾರಿಗಳಾಗಿದ್ದಾರೆ.
ನಾಯಕತ್ವ ಬದಲಾವಣೆ?
ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯ ಕುರಿತು ಖುಷಿಯಾಗಿರುವ ಪಕ್ಷದಲ್ಲಿನ ಸಿಎಂ ಯಡಿಯೂರಪ್ಪ ಅವರ ವಿರೋಧಿಗಳು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಉಳಿದ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸುವುದು ಬಿಜೆಪಿ ಹೈಕಮಾಂಡ್ಗೆ ಕಷ್ಟದ ಕೆಲಸ.
ಕಳೆದ 6 ವರ್ಷಗಳಿಂದ ಪ್ರಯತ್ನ ಪಟ್ಟರೂ ರಾಜ್ಯಸಭೆಯಲ್ಲಿ ಬಹುಮತ ಪಡೆಯಲಿಕ್ಕೆ ಅಮಿತ್ ಶಾ-ಮೋದಿ ಜೋಡಿಯಿಂದ ಸಾಧ್ಯವಾಗಿಲ್ಲ. ಜೊತೆಗೆ ಅನೇಕ ರಾಜ್ಯಗಳಲ್ಲಿ ಅಧಿಕಾರವನ್ನೂ ಬಿಜೆಪಿ ಕಳೆದುಕೊಂಡಿದೆ. ಹೀಗಾಗಿ ಯಡಿಯೂರಪ್ಪ ಅವರು ಉಳಿದಿರುವ ಮೂರು ವರ್ಷಗಳ ಅವಧಿ ಪೂರೈಸಲು ಹೈಕಮಾಂಡ್ ಸಮಸ್ಯೆ ಮಾಡುವುದಿಲ್ಲ. ಆದರೆ ಲಿಂಗಾಯತ, ಹಿಂದುಳಿದ, ಒಕ್ಕಲಿಗ ಸೇರಿದಂತೆ ಯಾವುದೇ ಸಮುದಾಯದ ಲಾಬಿಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಸರ್ಕಾರ ಕೊಟ್ಟಿದೆ. ಸಧ್ಯ ರಾಜ್ಯ ಬಿಜೆಪಿ ಬಂಡಾಯ ತಣ್ಣಗಾಗದೆ ಬೇರೆ ವಿಧಿಯೆ ಇಲ್ಲದಂತಾಗಿದೆ.