ಕೊಪ್ಪಳ ರಾಜಕೀಯದಲ್ಲಿ ದೇವೇಗೌಡರ ಚಾಣಾಕ್ಷ ನಡೆ!
Recommended Video

ಬೆಂಗಳೂರು, ಫೆಬ್ರವರಿ 6 : ಕೊಪ್ಫಳ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಹೆಚ್ಚಿದೆ. ಮಾಜಿ ಶಾಸಕ, ಸಂಸದ ಎಚ್.ಜಿ.ರಾಮುಲು ಅವರು ಪುತ್ರ ಎಚ್.ಆರ್.ಶ್ರೀನಾಥ್ ಜೊತೆ ಜೆಡಿಎಸ್ ಸೇರಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ಎಚ್.ಜಿ.ರಾಮುಲು ಅವರ ನಿವಾಸಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಪುತ್ರನ ಜೊತೆ ಪಕ್ಷ ಸೇರಿದರು.
ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಎಚ್.ಜಿ.ರಾಮುಲು ಸಕ್ರಿಯರಾಗಿದ್ದರು. ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಸೇರುವ ಮೂಲಕ ಹೊಸ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಎಚ್.ಆರ್.ಶ್ರೀನಾಥ್ ಅವರಿಗೆ ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಗಂಗಾವತಿ ಕ್ಷೇತ್ರದ ಶಾಸಕರು ಇಕ್ಬಾಲ್ ಅನ್ಸಾರಿ. ಜೆಡಿಎಸ್ ಪಕ್ಷದಿಂದ ಅವರನ್ನು ಅಮಾನತು ಮಾಡಿದ್ದು, ಅವರು ಕಾಂಗ್ರೆಸ್ ಸೇರಲಿದ್ದಾರೆ.
ದೇವೇಗೌಡರು ಎಚ್.ಜಿ.ರಾಮುಲು ಮತ್ತು ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಕೊಪ್ಪಳದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಹುಟ್ಟುಹಾಕಿದ್ದಾರೆ.

ಕಾಂಗ್ರೆಸ್ ತೊರೆದಿದ್ದರು
ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಎಚ್.ಜಿ.ರಾಮುಲು ಮತ್ತು ಅವರ ಕುಟುಂಬ ಸದಸ್ಯರು 2017ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ತೊರೆದಿದ್ದರು. ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಪಕ್ಷ ಬಿಟ್ಟಿದ್ದರು.

ಎಚ್.ಆರ್.ಶ್ರೀನಾಥ್ಗೆ ಟಿಕೆಟ್
ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್ ಅವರು ಇಕ್ಬಾಲ್ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣಕ್ಕೆ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

4 ಬಾರಿ ಸಂಸದರಾಗಿದ್ದರು
ಎಚ್.ಜಿ.ರಾಮುಲು ಅವರ ಚಿಕ್ಕಪ್ಪ ಶ್ರೀರಾಮುಲು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1973-74ರಲ್ಲಿ ಅವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ಎದುರಾಯಿತು. ಆಗ ಎಚ್.ಜಿ.ರಾಮುಲು ಅವರು ಶಾಸಕರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದರು. 1984 ರಿಂದ 2004ರ ತನಕ ನಾಲ್ಕು ಬಾರಿ ಕೊಪ್ಪಳ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಕಾಡಾ ಅಧ್ಯಕ್ಷರಾಗಿದ್ದರು
ಎಚ್.ಆರ್.ಶ್ರೀನಾಥ್ ಅವರು 2000-01ರಲ್ಲಿ ಕಾಡಾ ಅಧ್ಯಕ್ಷರಾಗಿದ್ದರು. 2004-2010ರ ತನಕ ವಿಧಾನಪರಿಷತ್ ಸದಸ್ಯರಾಗಿದ್ದರು. 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಬೆಂಬಲಿಗರ ರಾಜೀನಾಮೆ
ಎಚ್.ಆರ್.ಶ್ರೀನಾಥ್ ಬೆಂಬಲಿಗರಾಗಿರುವ ನಗರಸಭೆಯ 7 ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿಯ ಕೆಲ ಸದಸ್ಯರು ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದರಿಂದ ಕೊಪ್ಪಳದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲಿದೆ.

ಎಚ್.ವಿಶ್ವನಾಥ್, ಮಧು ಬಂಗಾರಪ್ಪ
ಮಾಜಿ ಶಾಸಕ, ಸಂಸದ ಎಚ್.ಜಿ.ರಾಮುಲು ಅವರು ಜೆಡಿಎಸ್ ಸೇರುವಾಗ ಎಚ್.ವಿಶ್ವನಾಥ್, ಮಧು ಬಂಗಾರಪ್ಪ ಮುಂತಾದ ನಾಯಕರು ಉಪಸ್ಥಿತರಿದ್ದರು.












Click it and Unblock the Notifications