ಹುಟ್ಟುಹಬ್ಬದಂದು ಸಿಎಂ ಯಡಿಯೂರಪ್ಪ ದಿನಚರಿ ಏನು ಗೊತ್ತಾ?
ಬೆಂಗಳೂರು, ಫೆ. 26: ಫೆಬ್ರವರಿ 27 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಆಚರಣೆ ಅದ್ಧೂರಿಯಾಗಿ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 6 ಗಂಟೆಗೆ 'ದಣಿವರಿಯದ ಧೀಮಂತ' ಅಭಿನಂದನಾ ಸಮಾರಂಭ ನಡೆಯಲಿದೆ. ಪಕ್ಷಾತೀತವಾಗಿ ರಾಜಕೀಯ ನಾಯಕರನ್ನು ಆಹ್ವಾನಿಸಿರುವುದು ಸಮಾರಂಭದ ವಿಶೇಷ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ-78 ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ವಹಿಸಿಕೊಳ್ಳಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಇದರೊಂದಿಗೆ ಸರ್ಕಾರಿ ಬಂಗಲೆ 'ಕಾವೇರಿ'ಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಪೂಜೆ ಮಾಡಿಸಲಿದ್ದು, ಜೊತೆಗೆ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಇಡೀ ದಿನ ಬಿಎಸ್ವೈ ಭಾಗವಹಿಸುತ್ತಿದ್ದಾರೆ.
ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಟ್ವೀಟ್
ಸಂಜೆ 6ಕ್ಕೆ ಅರಮನೆ ಮೈದಾನದಲ್ಲಿ'ದಣಿವರಿಯದ ಧೀಮಂತ' ಕಾರ್ಯಕ್ರಮ
ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭ ಸಂಜೆ 6 ಕ್ಕೆ ಆರಂಭವಾಗಲಿದೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಎಸ್ ಎಂ ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು,ಸಂಸದರು, ರಾಜ್ಯಸಭೆ ಸದಸ್ಯರು, ರಾಜ್ಯದ ಸಚಿವರು, ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಕುರಿತ ಅಭಿನಂದನಾ ಗ್ರಂಥದ ಲೋಕಾರ್ಪಣೆ ಇದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಕುರಿತಾದ 'ಕಾಫಿ ಟೆಬಲ್' ಪುಸ್ತಕವನ್ನು ಬಿಡುಗಡೆ ಮಾಡಲಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಎಸ್ವೈ ಕುರಿತಾದ ಸಾಕ್ಷಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.
ಬೆಳಗ್ಗೆ ಸರ್ಕಾರಿ ಬಂಗಲೆ ಕಾವೇರಿಯಲ್ಲಿ ಪೂಜೆ
ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಸರ್ಕಾರಿ ನಿವಾಸ ಕಾವೇರಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಇದರ ಜೊತೆ ಗೃಹ ಪ್ರವೇಶ ಪೂಜೆಯೂ ನಡೆಯಲಿದೆ. ಕಾವೇರಿಯಲ್ಲಿ ಬೆಳಗ್ಗೆಯಿಂದಲೇ ನಡೆಯಲಿರುವ ಪೂಜಾ ಕೈಂಕರ್ಯಗಳಲ್ಲಿಸಿಎಂ ಯಡಿಯೂರಪ್ಪ ಕುಟುಂಬದ ಸದಸ್ಯರೂ ಭಾಗವಹಿಸಲಿದ್ದಾರೆ.
ನಂತರ ಶಿವಮೊಗ್ಗ- ಚೆನ್ನೈ ಮಾರ್ಗದ ರೈಲು ಸಂಚಾರಕ್ಕೆ ಸಿಎಂ ಚಾಲನೆ
ಸರ್ಕಾರಿ ನಿವಾಸದಲ್ಲಿ ಗೃಹಪ್ರವೇಶದ ವಿಶೇಷ ಪೂಜೆಯ ಬಳಿಕ ಮಧ್ಯಾಹ್ 12 ಗಂಟೆಗೆ ಶಿವಮೊಗ್ಗ- ಚೆನ್ನೈ ಮಾರ್ಗದ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಕೊಡಲಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ರೈಲು ಸಂಚಾರಕ್ಕೆ ಸಿಎಂ ಚಾಲನೆ ಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಕೂಡ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿಕೊಂಡು ಸಿಎಂ ಯಡಿಯೂರಪ್ಪ ಅರಮನೆ ಮೈದಾನಕ್ಕೆ ತೆರಳಲಿದ್ದಾರೆ.
ಕಾರ್ಯಕ್ರಮದ ಬಗ್ಗೆ ಯಡಿಯೂರಪ್ಪ ಅವರ ಮಾತು
ತಮ್ಮ ಹುಟ್ಟುಹಬ್ಬ ಆಚರಣೆ, ಅಭಿನಂದನಾ ಸಮಾರಂಭದ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ. ಬೆಳಗ್ಗೆ ಕಾವೇರಿ ನಿವಾಸದಲ್ಲಿ ಪೂಜೆ ಇಟ್ಟುಕೊಂಡಿದ್ದೇವೆ. ಪೂಜೆಯ ಬಳಿಕ ಸಂಜೆ ಅರಮನೆ ಮೈದಾನದಲ್ಲಿ ಜನ್ಮದಿನದ ಕಾರ್ಯಕ್ರಮವಿದೆ. ಈ ಸಲ ವಿಜಯೇಂದ್ರ ಆಸಕ್ತಿ ತೆಗೆದುಕೊಂಡು ಎಲ್ಲ ಪಕ್ಷದ ಮುಖಂಡರನ್ನೂ ಆಹ್ವಾನಿಸಿದ್ದಾನೆ. ಎಲ್ಲರೂ ಒಟ್ಟಾಗಿ ಸೇರಲು ಇದೊಂದು ಸಂದರ್ಭ. ಹಾರ ತುರಾಯಿ ತರೋದು ಬೇಡ ಅಂತ ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಹಾರ ತುರಾಯಿ ತಂದ್ರೆ ಅದೇ ಗೊಂದಲ ಆಗುತ್ತದೆ. ಕಾವೇರಿ ನಿವಾಸದಲ್ಲಿ ಪೂಜೆ ಮಾತ್ರ ಇದೆ. ಕೆಲ ದಿನಗಳ ಬಳಿಕ ಕಾವೇರಿಗೆ ಸ್ಥಳಾಂತರ ಆಗ್ತೇನೆ ಎಂದು ಹೇಳಿದ್ದಾರೆ.
ಆಹ್ವಾನ ಪತ್ರ ಇರುವವರಿಗೆ ಮಾತ್ರ ಭಾಗವಹಿಸಲು ಅವಕಾಶ
ಆಹ್ವಾನ ಪತ್ರ ಇರುವವರಿಗೆ ಮಾತ್ರ ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಪ್ರವೇಶವಿದೆ. ವೈಟ್ ಪೆಟಲ್ಸ್ ಸಭಾಂಗಣದಲ್ಲಿ 1800 ಜನರಿಗೆ ಮಾತ್ರ ಆಸನದ ಅವಕಾಶವಿದೆ. ಹೀಗಾಗಿ ಆಹ್ವಾನಿತರಿಗೆ ಮಾತ್ರ ಸಭಾಂಗಣದ ಒಳಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗ ಮಾಹಿತಿ ಕೊಟ್ಟಿದೆ.
ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಕಾರ್ಯಕ್ರಮದ ಕೇಂದ್ರಬಿಂದು
ಪಕ್ಷಾತೀತವಾಗಿ ರಾಜಕೀಯ ನಾಯಕರನ್ನು ಆಹ್ವಾನಿಸುವುದು ಸೇರಿದಂತೆ ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭದ ಜವಾಬ್ದಾರಿಯನ್ನು ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ವಹಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಸಮಾರಂಭದ ಕೇಂದ್ರಬಿಂದುವಾಗಿದ್ದಾರೆ. ಬಿ.ವೈ. ವಿಜಯೇಂದ್ರ ಅವರಿಗೆ ರಾಜಕೀಯ ವೇದಿಕೆಯನ್ನು ಅಭಿನಂದನಾ ಸಮಾರಂಭ ಕಲ್ಪಿಸಿಕೊಡುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ!