ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 28ರವರೆಗೂ ಮಳೆ
ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 28ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಶೇಷವಾಗಿ, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ ವಾರ ತೀವ್ರಗೊಳ್ಳಲಿದೆ ಮುಂಗಾರು; ಹವಾಮಾನ ಇಲಾಖೆ
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ರಾಯಚೂರು, ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವೆಡೆ ಮುಂದಿನ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ಹೇಳಿದೆ.
ದಾವಣಗೆರೆ ನಗರ ಸೇರಿ ತಾಲೂಕಿನ ಆರನೇ ಮೈಲಿಕಲ್ಲು, ತರಳಬಾಳು ನಗರ, ಹದಡಿ, ಕೈದಾಳೆ ಸೇರಿ ಈ ಭಾಗದಲ್ಲಿ ಸ್ವಲ್ಪ ಮಳೆಯಾಗಿದೆ. ಚನ್ನಗಿರಿ ತಾಲೂಕಿನ ಹಿರೇಕೋಗಲೂರು, ತ್ಯಾವಣಿಗೆ, ಮತ್ತಿ, ಸೂಳೆಕೆರೆ ಇತರೆಡೆಗಳಲ್ಲಿಯೂ ಮಳೆಯಾಗಿದೆ.
ನ್ಯಾಮತಿ ತಾಲೂಕಿನಲ್ಲಿ ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ಜುಗಲ್ಬಂಧಿ ಬುಧವಾರವೂ ಮುಂದುವರಿದಿತ್ತು. ನ್ಯಾಮಿತ ಪಟ್ಟಣ ಸೇರಿ ತಾಲೂಕಿನ ಹಲವೆಡೆ ಬೆಳಗ್ಗೆಯಿಂದ ಆಗಾಗ ಸೋನೆಯಂತೆ ಮಳೆ ಸುರಿಯುವುದು ಮತ್ತು ಬಿಸಿಲು ಬೀಳುವುದು ನಡೆದಿದೆ.
ವಿಜಯಪುರ ಜಿಲ್ಲೆಯಾದ್ಯಂತ ಕೆಲದಿನಗಳಿಂದ ಸತತ ಮಳೆಯಾಗುತ್ತಿದ್ದು, ಬುಧವಾರವೂ ಕೆಲಗಂಟೆ ಧಾರಾಕಾರ ಮಳೆ ಸುರಿದ ಪರಿಣಾಮ ಅಪಾರ ಹಾನಿ ಉಂಟಾಗಿದೆ. ತಾಳಿಕೋಟೆಯಲ್ಲಿ ಡೋಣಿ ಪ್ರವಾಹಕ್ಕೆ ಸಿಲುಕಿ ವ್ಯಕ್ತಿ ಕೊಚ್ಚಿ ಹೋಗಿದ್ದರೆ, ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ.
ಎಲ್ಲೆಲ್ಲಿ ಮಳೆಯಾಗಿದೆ?
ನಿಂಬರ್ಗಾ ತಾಂಡ, ಜನವಾಡ, ಆಳಂದ, ಸುಬ್ರಹ್ಮಣ್ಯ, ಭಟ್ಕಳ, ಕಾರವಾರ, ಬೀದರ್, ಕಲಬುರಗಿ, ಸೇಡಂ, ಗಾಣಗಾಪುರ, ಹಗರಿಬೊಮ್ಮನಹಳ್ಳಿ, ಅಂಕೋಲಾ, ಕ್ಯಾಸಲ್ರಾಕ್, ಮುದಗಲ್, ಶಿರಾಲಿ, ಕೊಪ್ಪಳ, ವಿಜಯಪುರ, ಕಲಬುರಗಿ, ಮಸ್ಕಿ, ಮಾಣಿ, ಕಾರ್ಕಳ, ಬ್ರಹ್ಮಾವರ, ಹೊಸಪೇಟೆ, ಸಂಡೂರು, ಕಮಲಾಪುರ, ಬಾದಾಮಿ, ಗೋಕಾಕ, ಗೌರಿಬಿದನೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕಮ್ಮರಡಿ, ಆಗುಂಬೆ, ಹಾಸನ, ಸಂತೆಬೆನ್ನೂರಿನಲ್ಲಿ ಮಳೆಯಾಗಿದೆ.
ಬೆಂಗಳೂರು ಹವಾಮಾನ ಹೇಗಿದೆ?
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆ ಮಳೆಯಾಗುವ ಸಾಧ್ಯತೆ ಇದೆ. 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಜ್ಯದ ವಾತಾವರಣ ಹೇಗಿರಲಿದೆ?
ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Recommended Video
ಕಲಬುರಗಿಯಲ್ಲಿ ಮಳೆ
ಕಲಬುರಗಿ ಮಹಾ ನಗರದ ರಿಂಗ್ ರಸ್ತೆ ಇಕ್ಕೇಲಗಳಲ್ಲಿರುವ ರಾಮ ಮಂದಿರ, ಸಾಯಿ ಮಂದಿರ, ಧನ್ವಂತರಿ ಆಸ್ಪತ್ರೆ, ಗುರು ಕಾಲೇಜು ಅಕ್ಕಪಕ್ಕದ ಆರ್ಟಿ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ಕೈ ಕೊಟ್ಟು ಜನ ಪರದಾಡುವಂತಾಗಿದೆ. ಕಳೆದ 3 ದಿನದಿಂದ ಮಳೆ ಶುರುವಾಗಿದ್ದು ವಿದ್ಯುತ್ ತೊಂದರೆಯೂ ಅದರೊಂದಿಗೇ ಹೆಜ್ಜೆ ಹಾಕುತ್ತಿದೆ. ಆರ್ಟಿ ನಗರದಲ್ಲಂತೂ ಕಳೆದ 3 ದಿನದಲ್ಲಿ ವಿದ್ಯುತ್ ಪೂರೈಕೆಯೇ ಇಲ್ಲದಂತಾಗಿ ಜನತೆ ತೊಂದರೆ ಎದುರಿಸುತ್ತಿದ್ದಾರೆ. ಜಿಡಿಎ ಬಡಾವಣೆಯಲ್ಲಿಯೂ ಅನೇಕ ಕಡೆಗಳಲ್ಲಿ ವಿದ್ಯುತ್ಸಂಪರ್ಕ ಇಲ್ಲ. ಹೀಗಾಗಿ ಜನಜೀವನ ಇಲ್ಲಿ ಕಗ್ಗತ್ತಲಲ್ಲಿ ಮುಳುಗಿದೆ.
ಜಿಲ್ಲೆಯಾದ್ಯಂತ ಬುಧವಾರ ಸಂಜೆ 3 ಗಂಟೆಗಳ ಕಾಲ ಧಾರಕಾರ ಮಳೆ ಸುರಿದಿದೆ, ಗುಡುಗು, ಮಿಂಚು ಸಹಿತ ಬಿರುಸಿನ ಮಳೆಗೆ ನಗರ ಹಾಗೂ ಸುತ್ತಲಿನ ಜನ ಜೀವನ ಅಸ್ತವ್ಯಸಸ್ತಗೊಂಡಿದೆ. ಸಂಜೆ 3 ಗಂಟೆ ಸುರಿದ ಗುಡುಗು ಸಿಡಿಲು ಸಹಿತ ಮಳೆಗೆ ನಗರದಲ್ಲಿರುವ ಚರಂಡಿಗಳು ತುಂಬಿ ಹರಿಯುತ್ತಿವೆ. ಮುಖ್ಯ ರಸ್ತೆಗಳ ಮೇಲೆಲ್ಲಾ ಮಳೆ ನೀರು ಮಡುಗಟ್ಟಿ ನಿಲ್ಲುವ ಮೂಲಕ ವಾಹನ ಸಂಚಾರಕ್ಕೆ ಭರಿ ಅಡಚಣೆ ಉಂಟಾಗಿದೆ.
ನಗರದ ಕೆಬಿಎನ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದಾಗಿ ವಾಹನ ಸಂಚಾರ, ಜನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಇಲ್ಲೆಲ್ಲಾ ಮಳೆ ನೀರಿನದ್ದೆ ಸಮಸ್ಯೆ ತಲೆದೋರಿದೆ. ಇದಲ್ಲದೆ ರೇಲ್ವೆ ಮೇಲ್ಸೇತುವೆಯ ಇಕ್ಕೆಲ ರಸ್ತೆಗಳು, ಕೋರಂಟಿ ಹನುಮಂತ ದೇವರ ಮಂದಿರದ ರೇಲ್ವೆ ಕೆಳ ಸೇತುವೆ ರಸ್ತೆಯಲ್ಲಿಯೂ ಭಾರಿ ಪ್ರಮಾಣದಲ್ಲಿ ಮಳೆ ನೀರು ಶೇಖರಣೆಯಾಗಿದ್ದು ಜನ ಈ ರಸ್ತೆಗಳನ್ನು ಬಳಸದಂತಾಗಿದೆ.
3 ಗಂಟೆಗಳ ಬಿರುಸಿನ ಮಳೆ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಹಳೆ ಕಲಬುರಗಿ ಪರಿಸದಲ್ಲಿರುವ ತಗ್ಗು ಪ್ರದೇಶದ ಮನೆಗಳು ಜಲಾವೃತ ಭೀತಿ ಎದುರಿಸುತ್ತಿದ್ದರೆ ಹೊಸ ಪ್ರದೇಶಗಲಾದ ಪೂಜಾ ಕಾಲೋನಿ, ಜನತಾ ಬಡಾವಣ ಎಸೇರಿದಂತೆ ಹಲವು ಬಡಾವಣೆಗಳಲ್ಲಿಯೂ ಮಳೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.