ರಾಜ್ಯದ ಹಲವೆಡೆ ಮತ್ತೆ ವರುಣನ ಆರ್ಭಟ: ಶುಕ್ರವಾರವೂ ಮಳೆಯ ಮುನ್ಸೂಚನೆ
ಬೆಂಗಳೂರು, ನವೆಂಬರ್ 06: ರಾಜ್ಯದ ಹಲವೆಡೆ ಮತ್ತೆ ವರುಣನ ಆರ್ಭಟ ಜೋರಾಗಿದೆ. ಮುಂಗಾಳು ಮಳೆಯ ರೀತಿಯೇ ಹಿಂಗಾರು ಮಳೆ ಕೂಡ ಅನಾಹುತವನ್ನು ತಂದೊಡ್ಡುವ ಎಲ್ಲಾ ಸಾಧ್ಯತೆಗಳು ಇವೆ.ಗುರುವಾರ ದಕ್ಷಿಣ ಕನ್ನಡ ಸಹಿತ ಹಳೆ ಮೈಸೂರು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿ ಹೊರತುಪಡಿಸಿ ಉಳಿದೆಲ್ಲಾ ತಾಲುಕುಗಳಲ್ಲಿ ವ್ಯಾಪಕ ಮಳೆಯಾಗಿದೆ.
ಕರ್ನಾಟಕದ 14 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ ಸಾಧ್ಯತೆ
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನ ಹಲವೆಡೆ ವ್ಯಾಪಕ ಮಳೆಯಾಗಿದೆ. ಬೆಳ್ತಂಗಡಿಯ ಅರಶಿನಮಕ್ಕಿ ಗ್ರಾಪಂನಲ್ಲಿ 76 ಮಿ.ಮೀ., ಮಾಲಾಡಿಯಲ್ಲಿ 74 ಮಿ.ಮೀ. ಮಳೆಯಾಗಿದೆ.
ಬೆಂಗಳೂರಲ್ಲಿ ಮಳೆಯ ಅವಾಂತರ, ಕಾರ್ಮಿಕ ಸಾವು
ನಗರದಲ್ಲಿ ಸುರಿದ ಭಾರಿ ಮಳೆಗೆ ಗೋಡೆ ಕುಸಿದು ಬಿದ್ದು, ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಇಸ್ಕಾನ್ ಬಳಿಯ ಖಾಸಗಿ ಕಾರ್ಖಾನೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಬಿಹಾರ ಮೂಲದ ಪುರಂಪೂಜಾರಿ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರ್ಖಾನೆಯ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆ
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸುಮಾರು 20 ಮಿಮಿ ಗೂ ಹೆಚ್ಚು ಮಳೆಯಾಗಿದೆ, ಸಂಜೆ 6 ಗಂಟೆಯಿಂದ ಆರಂಭವಾದ ಮಳೆ ರಾತ್ರಿ 11ರ ವರೆಗೂ ಸುರಿಯತು, ಆದರೆ ಯಾವುದೇ ಪ್ರವಾಹ ಮತ್ತು ಹಾನಿಯ ವರದಿಯಾಗಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಮ್ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆಯಾಗಿದೆ
ಕೊಡಗಿನ ಸೋಮವಾರಪೇಟೆ, ಕೊಳ್ಳೆಗಾಲ, ಅರಕಲಗೂಡು, ಕೆ.ಆರ್.ನಗರ, ಚನ್ನಪಟ್ಟಣ, ಮಾಗಡಿ, ಹೊಸಕೋಟೆ, ಕೋಲಾರ, ಬಂಗಾರಪೇಟೆ ತಾಲೂಕಿನ ಹಲವೆಡೆ ಹೆಚ್ಚು ಮಳೆಯಾಗಿದೆ ಎಂದು ಕೆಎಸ್ಎನ್ಡಿಎಂಸಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
Recommended Video
ಈ ಪ್ರದೇಶಗಳಲ್ಲಿ ಶುಕ್ರವಾರ ಮಳೆ
ಬೀದರ್ನಲ್ಲಿ ಅತಿ ಕಡಿಮೆ ಅಂದರೆ 11.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಶುಕ್ರವಾರ ಕೊಡಗು, ಹಾಸನ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗಲಿದೆ. ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಭಾರಿ ಮಳೆ ಹಾಗೂ ಚಾಮರಾಜನಗರ, ರಾಮನಗರ, ಬೆಂಗಳೂರು ನಗರ,ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವೆಡೆ ಸಾಧಾರಣ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.