ಮಳೆ.. ಮಳೆ.. ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ ಏನು?
ಕರ್ನಾಟಕದ ಜನರಿಗೆ ನೀರು ಅನ್ನೋದು ಚಿನ್ನಕ್ಕೆ ಸಮಾನ ಆಗಿದೆ. ದಕ್ಷಿಣ ಕರ್ನಾಟಕದಿಂದ ಹಿಡಿದು, ಉತ್ತರ ಕರ್ನಾಟಕದ ತನಕ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಕರಾವಳಿಯ ಭಾಗದ ತನಕ ಎಲ್ಲೆಲ್ಲೂ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಕೈಮೀರಿ ಹೋದ ಕಾರಣಕ್ಕೆ ಈಗ ಮಳೆ ಬೀಳಲೇಬೇಕು ಎನ್ನುವ ಪರಿಸ್ಥಿತಿ ಇದೆ. ಆದರೆ ಕರ್ನಾಟಕದಲ್ಲಿ ಈಗ ಮಳೆ ಬರುತ್ತಾ? ಬರಲ್ವಾ? ಮುಂದೆ ಓದಿ.
2023 ಕರ್ನಾಟಕದ ಪಾಲಿಗೆ ಅತ್ಯಂತ ದುರದೃಷ್ಟಕರ ವರ್ಷ. ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನೇ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿತ್ತು. ಕರ್ನಾಟಕ ಸೇರಿ ಭಾಗಶಃ ಇಡೀ ದೇಶ, ಸಾಕಷ್ಟು ಮಳೆ ಕೊರತೆ ಎದುರಿಸಿತ್ತು. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಮಳೆಯ ವಿಚಾರವಾಗಿ ಮಾರ್ಚ್ ಮೊದಲ ವಾರದಲ್ಲಿ ಗುಡ್ ನ್ಯೂಸ್ ಸಿಗಲಿದೆ, ಭರ್ಜರಿ ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದರು.

ಮಳೆ ಈಗಲೇ ಬರುತ್ತಾ ಬರಲ್ವಾ?
ಹೀಗೆ ಹವಾಮಾನ ತಜ್ಞರು ಹೇಳಿದ ಮಾತಿನ ಪ್ರಕಾರ ಕರ್ನಾಟಕದಲ್ಲಿ ಮಾರ್ಚ್ ಮೊದಲನೇ ವಾರ ಭರ್ಜರಿ ಮಳೆ ಬೀಳುತ್ತೆ, ಒಣಗಿ ಹೋಗಿರುವ ಭೂಮಿ ಹಸಿರಾಗುತ್ತೆ ಅಂತಾ ಕನ್ನಡ ನಾಡಿನ ಜನರು ಕಾದಿದ್ದರು. ಆದ್ರೆ ಆಗಿದ್ದೆಲ್ಲಾ ಉಲ್ಟಾ, ಯಾಕಂದ್ರೆ ಮಾರ್ಚ್ ಮೊದಲನೇ ವಾರ ಮಳೆ ಬರೋದು ಬಿಡಿ ಮೋಡಗಳು ಕೂಡ ಕರ್ನಾಟಕದಲ್ಲಿ ಸುಳಿದಿಲ್ಲ. ಇಷ್ಟಾದರೂ ಮಾರ್ಚ್ ತಿಂಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಈ ಮಾತು ನಿಜವಾಗಲಿ ಅಂತಾ ಜನ ಕಾಯುತ್ತಿದ್ದಾರೆ. ಹಾಗಾದ್ರೆ ಕರ್ನಾಟಕದ ಯಾವ ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ ಗೊತ್ತಾ? ಮುಂದೆ ಓದಿ.
1) ಕೆಆರ್ಎಸ್ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ 15.73 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಮಯಕ್ಕೆ ಕೆಆರ್ಎಸ್ ಜಲಾಶಯದಲ್ಲಿ 27 ಟಿಎಂಸಿ ನೀರು ಸಂಗ್ರಹವಾಗಿತ್ತು.
2) ಕಬಿನಿ ಜಲಾಶಯ: ಕಾವೇರಿ ಕೊಳ್ಳದಲ್ಲಿ ಮತ್ತೊಂದು ಪ್ರಮುಖ ಜಲಾಶಯ ಕಬಿನಿ ಡ್ಯಾಂ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಈಗ ಕೇವಲ 11.36 ಟಿಎಂಸಿ ನೀರು ಸಂಗ್ರಹವಾಗಿದೆ.

3) ಹೇಮಾವತಿ ಜಲಾಶಯ: ಕಾವೇರಿ ನದಿ ಉಪನದಿ ಹೇಮಾವತಿಗೆ ಕಟ್ಟಿದ ಡ್ಯಾಂ ಹೇಮಾವತಿ ಜಲಾಶಯ. 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಡ್ಯಾಂ ಕಳೆದ 4-5 ವರ್ಷದಿಂದ ತುಂಬಿ ತುಳುಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಹೇಮಾವತಿ ಜಲಾಶಯ ಕೂಡ ಬರಿದಾಗುತ್ತಿದೆ. ಈಗ 13.21 ಟಿಎಂಸಿ ಮಾತ್ರ ಬಾಕಿ ಉಳಿದಿದೆ.
4) ತುಂಗಭದ್ರಾ ಜಲಾಶಯ: ಬಯಲು ಸೀಮೆ ಭಾಗದ ಜೀವನಾಡಿ ತುಂಗಭದ್ರಾ ಬರಿದಾಗುತ್ತಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲೀಗ ಕೇವಲ 8.01 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಬರೋಬ್ಬರಿ 25.27 ಟಿಎಂಸಿ ನೀರು ಸಂಗ್ರಹವಿತ್ತು.
5) ಆಲಮಟ್ಟಿ ಡ್ಯಾಂ: ಉತ್ತರ ಕರ್ನಾಟಕ ಪ್ರಮುಖ ಡ್ಯಾಂಗಳಲ್ಲಿ ಒಂದಾದ ಆಲಮಟ್ಟಿ ಕೂಡ ಮಳೆ ಇಲ್ಲದೆ ಬರಿದಾಗುತ್ತಿದೆ. ಇಲ್ಲಿಗೆ ಮಹಾರಾಷ್ಟ್ರದಿಂದಲೇ ನೀರು ಬರಬೇಕಿದೆ. ಜಲಾಶಯದ ಒಟ್ಟು ಸಾಮರ್ಥ್ಯ 123 ಟಿಎಂಸಿ ಇದ್ದರೂ 47.94 ಟಿಎಂಸಿ ಈಗ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಇದೇ ಸಮಯಕ್ಕೆ 45.96 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು.












Click it and Unblock the Notifications