Rain Alert: ಉಡುಪಿಯಲ್ಲಿ ಭಾರಿ ಮಳೆ ಅಬ್ಬರಕ್ಕೆ ರೈಲು ಹಳಿ ಮೇಲೆ ಉರುಳಿ ಬಿದ್ದ ಮರ, ರೈಲು ಸಂಚಾರಕ್ಕೆ ಅಡ್ಡಿ!
ಉಡುಪಿ: ಇಷ್ಟುದಿನ ಮಳೆ ಬಾರದೆ ಕಂಗಾಲಾಗಿದ್ದ ಕರ್ನಾಟಕದ ಜನರಿಗೆ ಈಗ ಆಘಾತ ಎದುರಾಗಿದೆ. ಭಾರಿ ಮಳೆ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಕರಾವಳಿ ಭಾಗ ಮುಂಗಾರು ಮಳೆ ಅಬ್ಬರಕ್ಕೆ ನಲುಗಿದೆ. ಭಾರಿ ಮಳೆ ಹಿನ್ನೆಲೆ ರೈಲ್ವೆ ಹಳಿಯ ಮೇಲೆ ಮರ ಕುಸಿದ ಬಿದ್ದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕು ಮಟಪಾಡಿ ಗ್ರಾಮದಲ್ಲಿ ನಡೆದಿದೆ.
ಹೌದು, ಈಗಾಗಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗದ ಜನರು ಮಳೆಯ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದಾರೆ. ಇಂದು ಕೂಡ ಭಾರಿ ಪ್ರಮಾಣದಲ್ಲಿ ಮಳೆ ಬಿದ್ದಿದ್ದು, ಉಡುಪಿಯ ಬ್ರಹ್ಮಾವರ ತಾಲೂಕು ಮಟಪಾಡಿ ಗ್ರಾಮದ ಸಮೀಪ ಮರವು ಕುಸಿದು ಹಳಿ ಮೇಲೆ ಬಿದ್ದಿತ್ತು. ಹೀಗಾಗಿ 2 ಗಂಟೆಗೂ ಹೆಚ್ಚು ಕಾಲ ರೈಲುಗಳ ಸಂಚಾರಕ್ಕೆ ತಡೆ ಉಂಟಾಗಿತ್ತು. ರೈಲು ನಿಂತಲ್ಲೇ ನಿಂತು ಪ್ರಯಾಣಿಕರು ಪರದಾಡಿದರು. ಉಡುಪಿ ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆ ಸುರಿಯುತ್ತಿರುವ ಪರಿಣಾಮ ಮಟಪಾಡಿಯಲ್ಲಿ ಹಳಿ ಮೇಲೆ ಮರ ಉರುಳಿ ಬಿದ್ದಿತ್ತು. ಸಂಜೆ 8 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಈ ಮಾರ್ಗದಲ್ಲಿ ಸಂಚರಿಸುವ ನಿಜಾಮುದ್ದೀನ್ & ತಿರುವನಂತಪುರ ಎಕ್ಸ್ ಪ್ರೆಸ್ ರೈಲು ಸ್ಥಗಿತವಾಗಿತ್ತು. ಆದರೆ ಕೊನೆಗೂ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕೊನೆಗೂ ಓಡಿದ ರೈಲು!
ಅಷ್ಟಕ್ಕೂ ದಿಢೀರ್ ರೈಲು ನಿಂತ ಪರಿಣಾಮ ಪ್ರಯಾಣಿಕರು ಕೂಡ ಪರದಾಡಿಬಿಟ್ಟರು. 2 ಗಂಟೆಗೂ ಹೆಚ್ಚು ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು. ಭಾರಿ ಮಳೆ ನಡುವೆ ಪ್ರಯಾಣಿಕರು ಪರದಾಡಿದ್ದರು. ದೆಹಲಿ & ಕೇರಳ ನಡುವೆ ಓಡುವ ರೈಲು ಇದ್ದಾಗಿದ್ದು, ಉಡುಪಿ ಜಿಲ್ಲೆಯ ಟ್ರ್ಯಾಕ್ನಲ್ಲಿ ಓಡುವ ಎಲ್ಲಾ ರೈಲುಗಳು 2 ಗಂಟೆಯಿಂದ ಸ್ಥಗಿತವಾಗಿದ್ದವು. ಸತತ ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ರೈಲು ಹಳಿ ಮೇಲೆ ಬಿದ್ದ ಮರವನ್ನ ರೈಲ್ವೆ ಇಲಾಖೆಯ ಅಧಿಕಾರಿಗಳು ತೆರವು ಮಾಡಿದ್ದಾರೆ. ಹೀಗಾಗಿ ರೈಲು ಸಂಚಾರ ಮತ್ತೆ ಆರಂಭಗೊಂಡಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸತತ ಕಾರ್ಯಾಚರಣೆಯಿಂದ ಮರ ತೆರವು ಕಾರ್ಯ ಪೂರ್ಣವಾಗಿದ್ದು, ರೈಲುಗಳು ಈಗ ಸಂಚರಿಸುತ್ತಿವೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಅಂದಹಾಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟು 3 ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಗುಡುಗು & ಮಿಂಚು ಜೊತೆಗೆ ಬಿರುಗಾಳಿ ಸಹಿತ ಭಾರಿ ಶುರುವಾಗಿದೆ. ಜನ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಭಾರಿ ಮಳೆ ಸೂಚನೆ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು. ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ನೀಡಿವ ಅಧಿಕಾರ ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರ್ಗೆ ನೀಡಲಾಗಿದೆ.
ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಮಳೆ!
ಅಂದಹಾಗೆ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಕೂಡ ಮಳೆರಾಯನ ಅಬ್ಬರ ಶುರುವಾಗಿದೆ. ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡುವ ಜೊತೆಗೆ ಇತರ ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆಯನ್ನು ಕೊಟ್ಟಿದೆ ಹವಾಮಾನ ಇಲಾಖೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಒಟ್ನಲ್ಲಿ ಮಳೆ ಅಬ್ಬರಕ್ಕೆ ಕರ್ನಾಟಕದ ಜನ ಬೆಚ್ಚಿಬಿದ್ದಿದ್ದಾರೆ. ಇಷ್ಟುದಿನ ಮಳೆಯಾಗದೇ ರೈತರು ಚಿಂತೆಯಲ್ಲಿ ಮುಳುಗಿದ್ದರು. ಆದರೆ ಕರ್ನಾಟಕದಲ್ಲಿ ಈಗ ಮುಂಗಾರು ಮಳೆಯ ಅಬ್ಬರ ಶುರುವಾಗಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ. ಮುಂದೆ ಇನ್ನಷ್ಟು ಜೋರಾಗಿ ಮಳೆ ಸುರಿದರೆ ರಾಜ್ಯದ ಡ್ಯಾಂಗಳು ಭರ್ತಿಯಾಗುವ ನಿರೀಕ್ಷೆ ಕೂಡ ಇದೆ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಖಾಲಿಯಾಗಿ, ಕುಡಿವ ನೀರಿಗೂ ಸಮಸ್ಯೆ ಎದುರಾಗುವ ಭಯ ಮೂಡಿತ್ತು. ಆದರೆ ಈಗ ಸುರಿಯುತ್ತಿರುವ ಮಳೆ ಒಂದಷ್ಟು ಧೈರ್ಯ ತುಂಬಿದೆ.












Click it and Unblock the Notifications