ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ, ರೆಡ್ ಅಲರ್ಟ್
ಬೆಂಗಳೂರು ಜು.10: ದೇಶಾದ್ಯಂತ ಅಬ್ಬರಿಸುತ್ತಿರುವ ಮುಂಗಾರು ಮಳೆಯ ತೀವ್ರತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಒಂದು ವಾರ ಕಳೆದರು ಇನ್ನು ಕಡಿಮೆಯಾಗಿಲ್ಲ. ಮುಂದಿನ ಐದು ದಿನ (ಜು.14ರವರೆಗೆ) ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಕರಾವಳಿ ಭಾಗದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಪರಿಣಾಮ ಭಾನುವಾರ ಸೇರಿದಂತೆ ಮೂರು ದಿನ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ತೀವ್ರಗೊಂಡಿದೆ. ದಿನವಿಡಿ ಬಿಟ್ಟು ಬಿಡದೇ ಮಳೆ ಅಬ್ಬರಿಸುತ್ತಿದೆ. ಈ ಮೂರು ಜಿಲ್ಲೆಗಳ ಹಲವು ಭಾಗದಲ್ಲಿ ಗುಡುಗು, ಮಿಂಚು ಸಹಿತ ಅತ್ಯಧಿಕ ಶೇ. 20 ಸೆಂ.ಮೀ. ಮಳೆ ದಾಖಲಾಗಿದೆ.
ಇದೇ ರೀತಿಯ ವಾತಾವರಣ ಹಾಗೂ ಮಳೆ ಮುಂದಿನ ಮೂರು ಮುಂದುವರಿಯಲಿದೆ. ಈ ಕಾರಣಕ್ಕೆ ಇಂದಿನಿಂದ (ಭಾನುವಾರ) ಮಂಗಳವಾರದ (ಜು.12)ವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಎರಡು ದಿನ ಇದೇ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಸಮುದ್ರ ತೀರದಲ್ಲಿ ಗಾಳಿ ವೇಗ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಮನ್ಸೂಚನೆ ನೀಡಿದ್ದಾರೆ.

ಮಲೆನಾಡಿಗೆ 3 ಜಿಲ್ಲೆಗೆ ಭಾರೀ ಮಳೆ
ಕರಾವಳಿ ಜತೆಗೆ ಮಲೆನಾಡಿನ ನಾಲ್ಕು ಜಿಲ್ಲೆಗಳ ಪೈಕಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಜು.12ರವರೆಗೆ ಮೂರು ದಿನ ಧಾರಾಕಾರವಾಗಿ ಮಳೆ ಬೀಳಲಿದ್ದು, ಅವುಗಳಿಗೆ 'ಆರೆಂಜ್ ಅಲರ್ಟ್' ಕೊಡಲಾಗಿದೆ. ಇನ್ನು ಜು.14ರವರೆಗೆ ಹಾಸನ ಸೇರಿದಂತೆ ಈ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಈ ಜಿಲ್ಲೆಗಳಲ್ಲಿ ಕಳೆದ ಸುಮಾರು 10 ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಬಿಸಿಲಿನ ದರ್ಶವೇ ಆಗಿಲ್ಲ. ಎಲ್ಲೆಡೆ ಮೋಡ ಮುಸಕಿನ ತಂಪು ವಾತಾವರಣ ಸೃಷ್ಟಿಯಾಗಿದ್ದು, ಈ ಭಾಗದ ಜನ ಜೋರು ಮಳೆ ಹೈರಾಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಒಳನಾಡಿಗೆ 'ಯೆಲ್ಲೋ ಅಲರ್ಟ್'
ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸುವ ಮುನ್ಸೂಚನೆ ದೊರೆತಿದೆ. ಈ ಭಾಗದ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿಗಳಲ್ಲಿ ಮುಂದಿನ ನಾಲ್ಕು ಜೋರು ಮಳೆ ಕಂಡು ಬರುವ ಸಾಧ್ಯತೆ ಇದೆ. ಹೀಗಾಗಿ ಈ ಇಷ್ಟು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಇನ್ನು ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಎರಡು ದಿನ ಮಳೆ ಅಬ್ಬರಿಸಲಿದ್ದು ಅವುಗಳಿಗೆ ಭಾನುವಾರ ಹಾಗೂ ಸೋಮವಾರ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ. ಇದೇ ಅವಧಿಯಲ್ಲಿ ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಮಾನ್ಯದಿಂದ ಹಗುರವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಳಗಾವಿ, ಕಲಬುರಗಿಗೂ ಉತ್ತಮ ಮಳೆ
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಕೆಲವೆಡೆ ಉತ್ತಮ ಮಳೆ ಬಿದ್ದಿದೆ. ರಾಜ್ಯದಲ್ಲಿ ಅಧಿಕ ಮಳೆ ಮಂಗಳೂರಿನಲ್ಲಿ 122.2 ಮಿ. ಮೀ. ಆಗಿದೆ. ಕಲಬುರಗಿಗೆ 35 ಮಿ. ಮೀ., ಬೆಳಗಾವಿಯಲ್ಲಿ 18 ಮಿ. ಮೀ. ಮಳೆ ಆಗಿದೆ. ಇನ್ನಿತರ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿದ ಪರಿಣಾಮ ಎಲ್ಲೆಡೆ ತಂಪು ವಾತಾವರಣ ಕಂಡು ನಿರ್ಮಾಣವಾಗಿದೆ.

ಬೆಂಗಳೂರಿಗೆ ಜಿಟಿ ಜಿಟಿ ಮಳೆ
ರಾಜ್ಯ ರಾಜಧಾನಿ ಬೆಂಗಳೂರಿಗೆ ಮಳೆ ನಿರೀಕ್ಷೆ ಅಷ್ಟಾಗಿ ಇಲ್ಲದಿದ್ದರೂ ಒಂದು ವಾರದಿಂದ ಸೋನೆ ಮತ್ತು ಜಿಟಿ ಜಿಟಿ ಮಳೆ ಸುರಿದಿದೆ. ಶನಿವಾರ ಮುಂಗಾರು ತುಸು ಚುರುಕುಗೊಂಡಿದ್ದರಿಂದ ಜೋರು ಮಳೆ ದಾಖಲಾಗಿದೆ. ಎಲ್ಲೆಡೆ ಮೋಡ ಮುಸುಕಿದ ಹಾಗೂ ತಂಪು ವಾತಾವರಣವೇ ಕಂಡು ಬಂದಿದೆ.
ಇದೇ ರೀತಿಯ ವಾತಾವರಣ ಮುಂದಿನ ನಾಲ್ಕು (ಜು.13)ಇರಲಿದೆ. ಈ ಅವಧಿಯಲ್ಲಿ ಹಗುರದಿಂದ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಗರಿಷ್ಠ 27 ಡಿ. ಸೆ. ಹಾಗೂ ಕನಿಷ್ಠ 20 ಡಿ. ಸೆ. ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.











Click it and Unblock the Notifications