Karnataka Rains : ಹವಾಮಾನ ವೈಪರೀತ್ಯ: ಕರ್ನಾಟಕದಾದ್ಯಂತ 3 ದಿನ ಮಳೆ ಸಾಧ್ಯತೆ
ಬೆಂಗಳೂರು, ನವೆಂಬರ್ 22: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವಾತಾವರಣ ಮುಂದುವರೆದ ಪರಿಣಾಮ ಕರ್ನಾಟಕ ಬಹುತೇಕ ಪ್ರದೇಶಗಳಲ್ಲಿ ಮುಂದಿನ ಮೂರು ಮಳೆ (ನ. 25ವರೆಗೆ) ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಎರಡು ವಾರದಿಂದ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತದಂತಹ ವೈಪರೀತ್ಯಗಳು ಉಂಟಾಗುತ್ತಲೇ ಇವೆ. ಇದರ ಪರಿಣಾಮವಾಗಿ ತಮಿಳುನಾಡು, ಚೆನ್ನೈ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದಲ್ಲೂ ಮಳೆಯ ವಾತಾವರಣ ಕಂಡು ಬಂದಿದೆ. ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತೇವಾಂಶ ಭರಿತ ಗಾಳಿ ಬೀಸತೊಡಗಿದೆ.
ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಕೊಡಗು ಮತ್ತು ಹಾಸನದ ಗುಡ್ಡಗಾಡು ಪ್ರದೇಶಗಳಲ್ಲೂ ಜೋರು ಮಳೆಯಾಗಲಿದೆ. ಅದೇ ರೀತಿ ಕರ್ನಾಟಕದ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಮಂಡ್ಯ, ರಾಮನಗರ, ಮೈಸೂರು, ತುಮಕೂರು ಹಾಗೂ ಉತ್ತರ ಕರ್ನಾಟಕದ ವಿಜಯಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರದಿಂದ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ವ್ಯಾಪಕ ಮಳೆ ಜತೆಗೆ ತುಂತುರು ಮಳೆ ಆಗಲಿದೆ
ಹವಾಮಾನ ಇಲಾಖೆ ಗುರುತಿಸಿದ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಆಗಲಿದೆ, ಉಳಿದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆಗಾಗ ಹಗುರ ಇಲ್ಲವೇ ತುಂತುರು ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರ ಹೊರತು ಕರ್ನಾಟಕದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ವರದಿ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಈ ಹಿಂದಿನ 24 ಗಂಟೆಗಳಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ 2 ಸೆಂಟಿ ಮೀಟರ್, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಮತ್ತು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ತಲಾ 1ಸೆಂಟಿ ಮೀಟರ್ ಮಳೆ ಬಿದ್ದಿದ್ದು, ಹಲವೆಡೆ ತುಂತುರು ಮಳೆ ದಾಖಲಾಗಿದೆ. ರಾಜ್ಯದ ಗರಿಷ್ಠ ತಾಪಮಾನ ಕಾರವಾರ ಹಾಗೂ ಗೋಕರ್ಣದಲ್ಲಿ 34.6ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ ತಾಪಮಾನ 14.3ಡಿಗ್ರಿ ಸೆಲ್ಸಿಯಸ್ ಮಡಿಕೇರಿಯಲ್ಲಿ ಕಂಡು ಬಂದಿದೆ.
ಕೆಲವು ರಾಜ್ಯಗಳಲ್ಲಿ ಮಾತ್ರ ಮಳೆ ವಾತಾವರಣ
ಅಕ್ಟೋಬರ್ ತಿಂಗಳಿನಲ್ಲಿ ಹಿಂಗಾರು ಮಳೆ ಪ್ರವೇಶಿಸಿ, ಆರಂಭದಲ್ಲಿ ದೇಶದ ಅನೇಕ ಕಡೆಗಳಲ್ಲಿ ಅಬ್ಬರಿಸಿತ್ತು. ಆಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಷ್ಟಾಗಿ ಹಿಂಗಾರಿನ ಪ್ರಭಾವ ಉಂಟಾಗಿರಲಿಲ್ಲ. ಸ್ವಲ್ಪ ದಿನಗಳ ಬಳಿಕ ದೇಶಾದ್ಯಂತ ಹಿಂಗಾರು ಆವರಿಸಿತು. ಆಗ ಕರ್ನಾಟಕ, ತೆಲಂಗಾಣ, ತಮಿಳುನಾಡು, ಇನ್ನಿತರ ಭಾಗದಲ್ಲಿ ಮಳೆ ಅಬ್ಬರವಿತ್ತು. ಆದರೆ ಈಗ ಕರಾವಳಿ ರಾಜ್ಯಗಳನ್ನು ಹೊರತು ಪಡಿಸಿ ಉಳಿದೆಡೆ ಮಳೆ ದುರ್ಬಲವಾಗಿದೆ.
ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕ, ಒಡಿಶಾ, ಆಂಧ್ರ ಪ್ರದೇಶದ ಹಲವು ಜಿಲ್ಲೆಗಳು, ತೆಲಂಗಾಣ, ರಾಯಲಸೀಮಾ, ಪುದುಚೇರಿ, ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಆಗಾಗ ಜೋರು ಮಳೆ ಬೀಳುವ ಸಾಧ್ಯತೆ ಇದೆ.