ಚಿಕ್ಕಬಳ್ಳಾಪುರದಲ್ಲಿ ಸಾಮಾಜಿಕ ನ್ಯಾಯದಡೆಗೆ ಕಾಲ್ನಡಿಗೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಚಾಲನೆ
ಚಿಕ್ಕಬಳ್ಳಾಪುರ, ಏಪ್ರಿಲ್ 14: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ 131ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ ರಾಂ 115ನೇ ಜಯಂತಿ ಅಂಗವಾಗಿ ನಗರದಲ್ಲಿ 'ಸಾಮಾಜಿಕ ನ್ಯಾಯದೆಡೆಗೆ' ಎಂಬ ವಿನೂತನ ಕಾಲ್ನಡಿಗೆ (ವಾಕಥಾನ್) ಜಾಥಾಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಜೈಭೀಮ್ ಬಾಲಕರ ವಿದ್ಯಾರ್ಥಿ ನಿಲಯದಿಂದ ಆರಂಭವಾದ ಕಾಲ್ನಡಿಗೆ ಜಾಥಾವನ್ನು ಗೌರಿಬಿದನೂರು ರಸ್ತೆ ಮತ್ತು ಬಿ.ಬಿ ರಸ್ತೆಗಳ ಮುಖಾಂತರ ಜೂನಿಯರ್ ಕಾಲೇಜು ಆವರಣದವರೆಗೆ ನಡೆಸಲಾಯಿತು.
ಈ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು. ಆ ಮೂಲಕ ಸಹಬಾಳ್ವೆ, ಸಮಾನತೆ, ಸಹ ಮಾನವರೊಂದಿಗೆ ಸಹೋದರತೆ ಹಾಗೂ ಸಾಮಾಜಿಕ ನ್ಯಾಯದ ಜಾಗೃತಿ ಕುರಿತಾಗಿ ಸಚಿವರಿಂದ ಪ್ರಮಾಣವಚನ ಸ್ವೀಕಸಿದರು.

ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದವರು:
ಸಂವಿಧಾನ ಶಿಲ್ಪ ಡಾ ಬಿಆರ್ ಅಂಬೇಡ್ಕರ್ ಮತ್ತು ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ಆಯೋಜಿಸಿದ ವಾಕಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೊತೆಗೆ ಅಧಿಕಾರಿಗಳು ಸಹ ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪಿ. ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ವಿವಿಧ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು, ದಲಿತ ಸಮುದಾಯದ ಮುಖಂಡರುಗಳು ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.












Click it and Unblock the Notifications