ಪ್ರಜ್ವಲ್ ರೇವಣ್ಣರಿಂದ ಪಾಠ ಕಲಿಯಲಿ ಎನ್ನುವ ಸುಮಲತಾ ಹೇಳಿಕೆ: ಶಪಥಗೈದ ಎಚ್ಡಿಕೆ!
ಬೆಂಗಳೂರು/ರಾಮನಗರ, ಜುಲೈ 7: ಕೃಷ್ಣರಾಜ ಸಾಗರ ಅಣೆಕಟ್ಟಿನ ವಿಚಾರವನ್ನು ಮುಂದಿಟ್ಟುಕೊಂಡು, ಎಚ್.ಡಿ.ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವಿನ ವಾಕ್ಸಮರ ಮತ್ತೆ ಮುಂದುವರಿದಿದೆ.
ಇದೆಲ್ಲಾ 'ಮಂಡ್ಯ ಗದ್ದುಗೆಗಾಗಿ' ಎಂದೇ ಬಿಂಬಿಸಲಾಗುತ್ತಿರುವ ಈ ಸಂದರ್ಭದಲ್ಲಿ, ಸಂಸದೆ ಸುಮಲತಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್ಡಿಕೆ, ನಮ್ಮ ಕುಟುಂಬವನ್ನು ಒಡೆಯುವ ಹುನ್ನಾರವಿದು ಎಂದು ಹೇಳಿದರು.
ಎಲ್ಲಿಂದ ಸೋತಿದ್ದೆವು, ಅಲ್ಲಿಂದಲೇ ಪಾಠ ಕಲಿಸುತ್ತೇವೆ ಎಂದು ಓಪನ್ ಸವಾಲು ಹಾಕಿರುವ ಕುಮಾರಸ್ವಾಮಿ, ಯಾರಿಗೂ ನಮ್ಮ ಕುಟುಂಬದ ಒಗ್ಗಟ್ಟನ್ನು ಒಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಆರ್ಎಸ್ ಡ್ಯಾಂ ಮುಂದೆ ಸುಮಲತಾ ಮಲಗಿಕೊಳ್ಳಲಿ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ, ಪ್ರಜ್ವಲ್ ರೇವಣ್ಣ ಅವರಿಂದ ಅವರು ಪಾಠ ಕಲಿಯಲಿ ಎಂದು ಸುಮಲತಾ ಹೇಳಿದ್ದರು. ಇದಕ್ಕೆ, ಖಾರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಪಾಠ ಕಲಿಸುತ್ತೇವೆ ಎಂದು ಸವಾಲು ಎಸೆದಿದ್ದಾರೆ.

ಕೆಆರ್ಎಸ್ ನೀರು ಸೋರದಂತೆ ಅವರನ್ನ ಮಲಗಿಸಿಬಿಟ್ಟರೆ ಎಲ್ಲವೂ ಸರಿಯಾಗುತ್ತೆ
"ಮಂಡ್ಯ ಜಿಲ್ಲೆಗೆ ಇಂಥಹ ಸಂಸದೆ ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಇವರೇ ಕೆಆರ್ಎಸ್ ರಕ್ಷಣೆ ಮಾಡುವ ರೀತಿ ಮಾತನಾಡುತ್ತಾರೆ. ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಕೆಆರ್ಎಸ್ ನೀರು ಸೋರದಂತೆ ಅವರನ್ನ ಮಲಗಿಸಿಬಿಟ್ಟರೆ ಎಲ್ಲವೂ ಸರಿಯಾಗುತ್ತೆ. ಕೆಲಸ ಬಗ್ಗೆ ಮಾಹಿತಿ ಇಲ್ಲದೇ ಕಾಟಾಚಾರಕ್ಕೆ ಯಾರದೋ ಮೇಲೆ ವೈಯಕ್ತಿಕ ದ್ವೇಷಕ್ಕೆ ಹೀಗೆ ಮಾತನಾಡಬಾರದು" ಎಂದು ಕುಮಾರಸ್ವಾಮಿ ಹೇಳಿದ್ದರು.

ಜೆಡಿಎಸ್ ಪಕ್ಷದಲ್ಲಿ ಪ್ರಜ್ವಲ್ ಒಬ್ಬರೇ ಉಳಿದಿರುವ ಆಶಾಕಿರಣ
"ಬಳಸಬಾರದ ಪದಗಳನ್ನು ಬಳಸಿ ಹೇಳಿಕೆ ನೀಡುವುದು, ಮರುದಿನ ಅದಕ್ಕೆ ಸಮರ್ಥನೆ ನೀಡುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಮಂಡ್ಯ ಲೋಕಸಭಾ ಚುನಾವಣೆಯ ವೇಳೆ ನಾಲ್ವರು ನಕಲಿ ಸುಮಲತಾ ಅವರನ್ನು ನಿಲ್ಲಿಸಿದರು, ಅವರ ಒಂದೊಂದು ಮಾತೂ ನಕಲಿನೇ. ಕುಮಾರಸ್ವಾಮಿಯವರು ತಮ್ಮದೇ ಪಕ್ಷದ ಪ್ರಜ್ವಲ್ ರೇವಣ್ಣ ಅವರನ್ನು ನೋಡಿ ಕಲಿಯಲಿ. ಜೆಡಿಎಸ್ ಪಕ್ಷದಲ್ಲಿ ಪ್ರಜ್ವಲ್ ಒಬ್ಬರೇ ಉಳಿದಿರುವ ಆಶಾಕಿರಣ. ಸಣ್ಣ ವಯಸ್ಸಿನಲ್ಲೂ ಪ್ರಜ್ವಲ್ ಪ್ರಬುದ್ದತೆಯನ್ನು ತೋರುತ್ತಿದ್ದಾರೆ"ಎಂದು ಸುಮಲತಾ ತಿರುಗೇಟು ನೀಡಿದ್ದರು.

ಪ್ರಜ್ವಲ್ ರೇವಣ್ಣ ಅವರಿಂದ ನೋಡಿ ಕಲಿಯಲಿ ಎನ್ನುವ ಮಾತಿಗೆ ತಿರುಗೇಟು
"ನನ್ನ ಪಕ್ಷವನ್ನು ಹಾಳು ಮಾಡಿದ್ದೇನೆ ಎಂದು ಅವರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ. ಮಂಡ್ಯದಲ್ಲಿ ನಮ್ಮ ಕುಟುಂಬವನ್ನು ಸೋಲಿಸಿದರು, ಅಲ್ಲಿಂದಲೇ ನಾವು ಪ್ರಾರಂಭ ಮಾಡುತ್ತೇವೆ. ಇವರಿಂದ ನಾವೇನು ರಾಜಕೀಯ ಕಲಿಯಬೇಕಾಗಿಲ್ಲ. ಪ್ರಜ್ವಲ್ ರೇವಣ್ಣ ಅವರಿಂದ ನೋಡಿ ಕಲಿಯಲಿ ಎನ್ನುವ ಮಾತನ್ನು ಹೇಳಿ ನಮ್ಮ ಕುಟುಂಬವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದೀರಾ"ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Recommended Video

ನನ್ನ ಕುಟುಂಬವನ್ನು ಒಡೆಯಲು ಬಹಳ ಜನ ಪ್ರಯತ್ನ ಮಾಡಿ ಸೋತಿದ್ದಾರೆ
"ನನ್ನ ಕುಟುಂಬವನ್ನು ಒಡೆಯಲು ಬಹಳ ಜನ ಪ್ರಯತ್ನ ಮಾಡಿ ಸೋತಿದ್ದಾರೆ. ಕುಟುಂಬ ಒಡೆಯಲು ಆ ಪದವನ್ನು ಬಳಕೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ನಿಮ್ಮಂತಹ ಕುತಂತ್ರಿಗಳಿಂದ ನಮ್ಮ ಕುಟುಂಬ ಒಡೆಯುವುದಿಲ್ಲ. ನನ್ನನ್ನು ಪ್ರೀತಿಸುವ ವರ್ಗವಿದೆ, ಅವರೂ ಬದುಕಿರುತ್ತಾರೆ, ಮುಂದಿನ ಐದು ವರ್ಷದಲ್ಲಿ ಏನೇನು ರಾಜಕಾರಣ ಆಗುತ್ತೆ ಎನ್ನುವುದನ್ನು ನೋಡೋಣ"ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications