ಐಶ್ವರ್ಯ ಗೌಡ ಕೇಸಿನಲ್ಲಿ ಅನಿತಾ ಕುಮಾರಸ್ವಾಮಿ, ನಿಖಿಲ್ ಹೆಸರು ಪ್ರಸ್ತಾಪ
ಬೆಂಗಳೂರು, ಜನವರಿ 03: ಐಶ್ವರ್ಯ ಗೌಡ ಎನ್ನುವ ಮಹಿಳೆ ಯಾವಾಗ, ಎಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಕೊಟ್ಟರೆ ಒಳಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಐಶ್ವರ್ಯ ಗೌಡ ಕೇಸ್ ನಲ್ಲಿ ನಿಖಿಲ್, ಅನಿತಾ ಕುಮಾರಸ್ವಾಮಿ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಇದರ ಹಿಂದೆ ಯಾರ ಕೈಗಳಿವೆ ಎನ್ನುವುದು ಗೊತ್ತಾಗುತ್ತದೆ. ಈಗ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್ ನಲ್ಲಿ ಅವರ ಹೆಸರುಗಳನ್ನು ಎಳೆದು ತರಲಾಗುತ್ತಿದೆ. ಅಂದಹಾಗೆ ಐಶ್ವರ್ಯ ಗೌಡ ಎಂಬ ಮಹಿಳೆ ಇವರಿಬ್ಬರನ್ನು ಯಾವಾಗ ಭೇಟಿ ಮಾಡಿದ್ದರು? ಈ ಸರಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಎನ್ನುವುದು ಗೊತ್ತಿದೆ. ಮಾಧ್ಯಮಗಳಲ್ಲಿ ಈ ವಿಷಯ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಹಿನ್ನಲೆ ತಿಳಿದಿಕೊಂಡಿದ್ದೇನೆ ಎಂದರು.

ಘಟನೆ ನಡೆದಿದ್ದು 2016-2019ರಲ್ಲಿಯಂತೆ. ದೂರು ಸ್ವೀಕರಿಸುವುದು ಈಗ. ಈ ಸರಕಾರ ಯಾರನ್ನು ಯಾವಾಗ ಏನು ಬೇಕಾದರೂ ಮಾಡುತ್ತದೆ. ಸರಕಾರದಲ್ಲಿ ಅಧಿಕಾರ ವರ್ಗವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಇವರು ಎನ್ನುವುದು ಗೊತ್ತಿದೆ. 2016ರಲ್ಲಿ ಪ್ರಕರಣ ನಡೆದಿದೆ ಎಂದು 2024ರಲ್ಲಿ ದೂರು ಕೊಡುತ್ತಾರೆ. 2018ರಲ್ಲಿ ನಾನೇ ಸಿಎಂ ಇದ್ದೆ. ಆಗ ಯಾಕೆ ನನ್ನ ಬಳಿ ದೂರುದಾರರು ಬರಲಿಲ್ಲ, ಪೊಲೀಸರಿಗೆ ಯಾಕೆ ದೂರು ನೀಡಲಿಲ್ಲ? ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರಿಬ್ಬರೂ ಇವರ ಮುಖಗಳನ್ನೇ ನೊಡಿಲ್ಲ. ಹೇಗೆ ಅವರ ಪರಿಚಯ ಅಂತ ಸುದ್ದಿ ಮಾಡಿಸ್ತಾ ಇದ್ದಾರ ಇವರು? ಇದರ ಹಿಂದೆ ಯಾರಿದ್ದಾರೆ? ನನ್ನ ಮಗ, ಪತ್ನಿಯನ್ನು ಯಾಕೆ ಈ ಪ್ರಕರಣದಲ್ಲಿ ಎಳೆದು ತಂದಿದ್ದೀರಿ? ಇದನ್ನು ಸರಕಾರ ಎಂದು ಕರೆಯಲು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು. ಸದ್ಯಕ್ಕೆ ನಾನು ಯಾವುದಕ್ಕೂ ಟೀಕೆ ಮಾಡುವುದಿಲ್ಲ. ಟೀಕೆ ಮಾಡಿ ಏನ್ ಮಾಡೋದು? ಕೇಳೋಕೆ ಯಾರ್ ಇದ್ದಾರೆ ಇಲ್ಲಿ? ರಾಜ್ಯದಲ್ಲಿ ಸರಕಾರವೇ ಇಲ್ಲ. ಸ್ವೇಚ್ಚಾಚ್ಚಾರವಾಗಿ ಆಡಳಿತ ನಡೆಸುತ್ತಿದ್ದಾರೆ. ಇವರಿಗೆ ಹೇಳೋರು ಕೇಳೋರು ಯಾರು ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾರಿಗೂ ದೋಷ ಕೊಡಲ್ಲ. ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ. ನಮ್ಮ ಕಾಲವೂ ಬರುತ್ತದೆ. ಇವರು ಇಡೀ ವ್ಯವಸ್ಥೆಯನ್ನು ಬಹಳ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಸರಕಾರ ಬಂದ ಮೇಲೆ ಎಷ್ಟು ಆತ್ಮಹತ್ಯೆಗಳು ನಡೆದವು. ಯಾಕೆ ಇಷ್ಟು ಆತ್ಮಹತ್ಯೆಗಳು ಆಗುತ್ತಿವೆ? ಜೀವ ಕಳೆದುಕೊಂಡ ನತದೃಷ್ಟರು ಮರಣಪತ್ರದಲ್ಲಿ ಏನೆಲ್ಲಾ ಬರೆಯುತ್ತಿದ್ದಾರೆ, ಯಾರ ಯಾರ ಹೆಸರುಗಳನ್ನು ಉಲ್ಲೇಖ ಮಾಡುತ್ತಿದ್ದಾರೆ.. ಮಂತ್ರಿಗಳ ಮೇಲೆ ಆರೋಪ ಬಂದರೂ ಸತ್ಯಾಂಶ ಹೊರಗೆ ಬರುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅವನ್ಯಾರೋ ರಮೇಶ್ ಗೌಡ ಅಲ್ಲೆಲ್ಲೋ ಊಟಕ್ಕೆ ಕೂತಿದ್ದನಂತೆ. ಕುಮಾರಸ್ವಾಮಿಗೆ ಫೋನ್ ಮಾಡಿಕೊಟ್ಟನಂತೆ. ಕುಮಾರಸ್ವಾಮಿ ₹50 ಕೋಟಿ ಕೇಳಿದ್ನಂತೆ, ಅದಕ್ಕೊಂದು ಕುಮಾರಸ್ವಾಮಿ ಮೇಲೆ ಕಂಪ್ಲೆಂಟ್... ಇದರಲ್ಲಿ ಅರ್ಥ ಏನಿದೆ? ಸಂಕ್ರಾಂತಿ ಕಳಿಯಲಿ. ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.












Click it and Unblock the Notifications