ಅನುದಾನದಲ್ಲಿ ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಎನ್ನುವುದು ಮೋದಿ ಅವರ ಸರಕಾರದ ನೀತಿ: ಕುಮಾರಸ್ವಾಮಿ
ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರವನ್ನು ಜನರು ಕಿತ್ತೊಗೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ರಾಜ್ಯ ಬಿಜೆಪಿ ವಿರುದ್ದ ಜೆಡಿಎಸ್ ರಾಜ್ಯ ಘಟಕ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಬೆಂಗಳೂರು,ಫೆಬ್ರವರಿ8: ನೆರೆ ಬಂದಾಗ ಕಣ್ಣೆತ್ತಿ ನೋಡಲಿಲ್ಲ, ಬರ ಬಂದಾಗ ಬರಲಿಲ್ಲ. ಆದರೆ, ಚುನಾವಣೆ ವರ್ಷದಲ್ಲಿ ತಿಂಗಳಿಗೆ ನಾಲ್ಕು ಬಾರಿ ರಾಜ್ಯಕ್ಕೆ ಬರುತ್ತಾರೆ ಮೋದಿ ಅವರ ಸರಕಾರವು ಸ್ವಾಭಿಮಾನಿಗಳ ನಾಡು ಕರ್ನಾಟಕವನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಅನುದಾನ ಹಂಚಿಕೆಯ ಮಹಾಮೋಸವೇ ಸಾಕ್ಷಿ ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನಸಾಕ್ಷಿ ಇಲ್ಲದ ಮೋದಿ ಎಂದು ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಮೂರು ತಿಂಗಳಲ್ಲಿ ರಾಜ್ಯದ ಚುನಾವಣೆ, ಭಾಷಣದಲ್ಲಿ ಬರೀ ಚಿತಾವಣೆ. ತಿಂಗಳಿಗೆ ಹತ್ತು ಸಲ ರಾಜ್ಯಕ್ಕೆ ಬನ್ನಿ. ಆದರೆ, ಕನ್ನಡಿಗರಿಗೆ ಮಾಡಿರುವ ಅನುದಾನದ ಅನ್ಯಾಯಕ್ಕೆ ಕಾರಣ ಹೇಳಿ? ಮಾತಿನಲ್ಲೇ ಜುಟ್ಟಿಗೆ ಮಲ್ಲಿಗೆ ಮುಡಿಸಿದರೆ ಹೇಗೆ ಮೋದಿ ಅವರೇ? ಈ ಅನುದಾನ ಅನ್ಯಾಯ ನನಗೆ ತೀವ್ರ ಆಘಾತ ಉಂಟು ಮಾಡಿದೆ. 6/6#ಮನಃಸಾಕ್ಷಿ_ಇಲ್ಲದ_ಮೋದಿ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 8, 2023
ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವುದು ಮೋದಿ ಅವರ ಸರಕಾರದ ನೀತಿ. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಅವರ ರಾಜನೀತಿ. ತೆರಿಗೆ ತೆರಲಿಕ್ಕೆ ದಕ್ಷಿಣ ಭಾರತ, ಅನುದಾನ ಹಂಚಲಿಕ್ಕೆ ಉತ್ತರ ಭಾರತ.. ಇದು ಬಿಜೆಪಿ ಪಕ್ಷದ ಅಖಂಡ ಭಾರತದ ಅಭಿವೃದ್ಧಿ ವೈಖರಿ ಎಂದು ಟ್ವೀಟ್ ಮೂಲಕ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕಳೆದ 5 ವರ್ಷದಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳಿಗೆ ಕೊಟ್ಟ ಅನುದಾನದ ಅಂಕೆ ಸಂಖ್ಯೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಸಚಿವರಿಗೆ ಕೊಂಚವೂ ಲಜ್ಜೆ ಎನಿಸಲಿಲ್ಲವೆ? ದಕ್ಷಿಣದವರನ್ನು ನರೇಂದ್ರ ಮೋದಿ ಅವರ ಸರಕಾರ ಮಲತಾಯಿ ಮಕ್ಕಳಂತೆ ನಡೆಸಿಕೊಳ್ಳುತ್ತಿದೆ. ಕನ್ನಡಿಗರಂತೂ ಬಿಜೆಪಿಗರಿಗೆ ತಬ್ಬಲಿ ಮಕ್ಕಳೇ ಆಗಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಕೇಂದ್ರಕ್ಕೆ ಕರ್ನಾಟಕ ಗರಿಷ್ಠ ತೆರಿಗೆ ತೆರುತ್ತಿದೆ. ಬಿಜೆಪಿ ಪಾಲಿಗೆ ಕರ್ನಾಟಕ ಪೊಗದಸ್ತಾದ ಎಟಿಎಂ ಆಗಿಬಿಟ್ಟಿದೆ. ಅದೇ ಅನುದಾನವನ್ನು ಹಂಚುವ ಹೊತ್ತಿನಲ್ಲಿ ಮೋದಿ ಕೈಗಳು ಉತ್ತರದ ರಾಜ್ಯಗಳ ಕಡೆಗೇ ವಾಲುತ್ತಿವೆ. ಚುನಾವಣೆ ಬಂದಾಗ ಅವರ ವಿಮಾನ ಸದಾ ಬೆಂಗಳೂರಿನತ್ತಲೇ ಹಾರುತ್ತದೆ. ಅನುದಾನ ಹಂಚಿಕೆ, ತೆರಿಗೆ ಪಾಲು, ಬಾಹ್ಯ ನೆರವಿನ ಯೋಜನೆಗಳಿಗೆ ಸಹಾಯ ಧನ, ಬಂಡವಾಳ ವೆಚ್ಚಕ್ಕಾಗಿ ಕೊಟ್ಟ ನೆರವು ಸೇರಿ ಎಲ್ಲ ವಿಶೇಷ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಿರುವುದು ಹೇಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಗೆ 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ ಇಂಥ ದುರ್ಗತಿಯೇ? ಇದು ಡಬಲ್ ಎಂಜಿನ್ ಸರಕಾರದ ದ್ರೋಹ. ಮೂರು ತಿಂಗಳಲ್ಲಿ ರಾಜ್ಯದ ಚುನಾವಣೆ, ಭಾಷಣದಲ್ಲಿ ಬರೀ ಚಿತಾವಣೆ. ತಿಂಗಳಿಗೆ ಹತ್ತು ಸಲ ರಾಜ್ಯಕ್ಕೆ ಬನ್ನಿ. ಆದರೆ, ಕನ್ನಡಿಗರಿಗೆ ಮಾಡಿರುವ ಅನುದಾನದ ಅನ್ಯಾಯಕ್ಕೆ ಕಾರಣ ಹೇಳಿ? ಮಾತಿನಲ್ಲೇ ಜುಟ್ಟಿಗೆ ಮಲ್ಲಿಗೆ ಮುಡಿಸಿದರೆ ಹೇಗೆ ಮೋದಿ ಅವರೇ? ಈ ಅನುದಾನ ಅನ್ಯಾಯ ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಟ್ವೀಟ್ ಮೂಲಕ ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications