ಮೈತ್ರಿ ಸರ್ಕಾರದ ಮೊದಲ ಬಜೆಟ್ ಜೂನ್ ತಿಂಗಳಲ್ಲಿ ಮಂಡನೆ
ಬೆಂಗಳೂರು, ಮೇ 29: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಆಯವ್ಯಯ ಪತ್ರದ ಮಂಡನೆಗೆ ಮುಹೂರ್ತ ನಿಗದಿಯಾಗಿದೆ. ಹಣಕಾಸು ಖಾತೆ ಯಾರಿಗೆ ಸಿಗಲಿದೆ ಎಂಬುದರ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಈ ನಡುವೆ ಹಣಕಾಸು ಖಾತೆಯನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿರುವ ಸುದ್ದಿ ಬಂದಿದೆ.
ಹೀಗಾಗಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಮುಂಗಡ ಪತ್ರವನ್ನು ಜೂನ್ ತಿಂಗಳಲ್ಲೇ ಮಂಡಿಸಲು ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿಕೊಂಡು ಬಂದಿರುವ ಕುಮಾರಸ್ವಾಮಿ ಅವರು ಇಷ್ಟರಲ್ಲೇ ಜಂಟಿ ಅಧಿವೇಶನ ಕರೆಯುವ ನಿರೀಕ್ಷೆಯಿದೆ.

ಬಜೆಟ್ ನಿರೀಕ್ಷೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಚುನಾವಣಾ ಪೂರ್ವ ಮುಂಗಡ ಪತ್ರದ ಪ್ರಮುಖ ಅಂಶಗಳನ್ನು ವಿಸ್ತರಿಸಿ, ಹೊಸ ಬಜೆಟ್ ಮಂಡಿಸಲಾಗುತ್ತದೆ. ಈ ಕುರಿತಂತೆ 2018-19ರ ಪೂರ್ಣ ಮುಂಗಡ ಪತ್ರವನ್ನು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ತಿಂಗಳ ಮಟ್ಟಿಗೆ ಲೇಖಾನುದಾನ ಪಡೆದಿದ್ದರು. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಉಭಯ ಪಕ್ಷಗಳ ಪ್ರಣಾಳಿಕೆ ಆಧಾರಿಸಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಮುಖ್ಯವಾಗಿ ರೈತರ ಸಾಲ ಮನ್ನಾ, ಕಾಂಗ್ರೆಸ್ ಸರ್ಕಾರ ಜನಪ್ರಿಯ ಯೋಜನೆಗಳ ಮುಂದುವರಿಕೆ, ವಿಸ್ತರಣೆ ಬಜೆಟ್ ನ ಭಾಗವಾಗಲಿದೆ.
ಈ ನಡುವೆ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ - ಉಪಾಧ್ಯಕ್ಷರ ಅವಧಿಯನ್ನು ರದ್ದುಗೊಳಿಸಲು ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಆದೇಶ ಹೊರಡಿಸಿದೆ.












Click it and Unblock the Notifications